- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಡಿ.ಆರ್.ಎಫ್ ತಂಡದವರಿಂದ ಅರಿವು ಹಾಗೂ ಜಾಗ್ರತಿ ಕಾರ್ಯಕ್ರಮ
ತುರ್ತು ಸಂದರ್ಭ ಎದುರಾದಾಗ ವ್ಯಕ್ತಿಗಳನ್ನು ಆಸ್ಪತ್ರೆಗೆ ಸೇರಿಸುವ ಮುಂಚೆ ನಮ್ಮಲ್ಲಿರುವ ಸಂಪನ್ಮೂಲ ಬಳಸಿಕೊಂಡು ಪ್ರಥಮ ಚಿಕಿತ್ಸೆ ನೀಡಿದರೆ ಆ ವ್ಯಕ್ತಿಯ ಜೀವ ಉಳಿಯುವ ಸಾಧ್ಯತೆ ಇರುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾ ಎನ್.ಡಿ.ಆರ್.ಎಫ್ ನ ತಂಡದ ಮುಖ್ಯಸ್ಥ ಕಮಾಂಡರ್ ಅಜಯ್ ಕುಮಾರ್ ತಿಳಿಸಿದರು.
ಬುಧವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರ, ರಾಷ್ಠೀಯ ವಿಪತ್ತು ನಿರ್ವಹಣಾ ಪಡೆ, ಕಾಲೇಜಿನ ರೋವರ್ಸ್ ಘಟಕ, ಯುವ ರೆಡ್ ಕ್ರಾಸ್ ಘಟಕ, ಎನ್.ಎಸ್.ಎಸ್ ಘಟಕ, ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ಸಂಯುಕ್ತ ಆಶ್ರಯದಲ್ಲಿ ಎನ್.ಡಿ.ಎ.ಆರ್.ಎಫ್ ತಂಡದವರಿಂದ ತುರ್ತು ಸಂದರ್ಭದಲ್ಲಿ ಕೈಗೊಳ್ಳ ಬೇಕಾದ ಕ್ರಮದ ಬಗ್ಗೆ ಅರಿವು ಹಾಗೂ ಜಾಗೃತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಬೆಂಕಿ ಬಿದ್ದಾಗ, ನೀರಿನಲ್ಲಿ ಮುಳುಗಿದಾಗ, ಅಪಘಾತ, ಹೃದಯಾಘಾತವಾದಾಗ ಅವರಿಗೆ ಪ್ರಥಮ ಚಿಕಿತ್ಸೆ ನೀಡ ಬೇಕಾಗುತ್ತದೆ. ಈ ಬಗ್ಗೆ ನಮ್ಮ ತಂಡದಿಂದ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಗುವುದು ಎಂದರು.ತಹಸೀಲ್ದಾರ್ ತನುಜ ಟಿ.ಸವದತ್ತಿ ಉದ್ಘಾಟಿಸಿ ಮಾತನಾಡಿ, ವಿಪತ್ತು ಬಂದ ಸಂದರ್ಭದಲ್ಲಿ ಏನು ಮಾಡಬೇಕು ಎಂದು ವಿದ್ಯಾರ್ಥಿಗಳು ಸಹ ತಿಳಿದುಕೊಂಡಿರಬೇಕು. ಈ ಬಗ್ಗೆ ಎನ್.ಡಿ.ಆರ್.ಎಫ್ ತಂಡ ನೀಡುವ ತರಬೇತಿಯನ್ನು ಉಪಯೋಗಿಸಿ ಕೊಳ್ಳಬೇಕು ಎಂದು ಕರೆ ನೀಡಿದರು.
ಅತಿಥಿಗಳಾಗಿ ಕಾಲೇಜಿನ ರೋವರ್ಸ್ ಘಟಕದ ಮುಖ್ಯಸ್ಥ ಲಕ್ಷ್ಮಣನಾಯಕ್, ಐ.ಕ್ಯೂ.ಎ.ಸಿ. ಘಟಕದ ಮುಖ್ಯಸ್ಥ ಪ್ರಸಾದ, ಪೊಲೀಸ್ ಠಾಣಾಧಿಕಾರಿ ನಿರಂಜನ ಗೌಡ ಉಪಸ್ಥಿತರಿದ್ದರು. ಲಕ್ಷ್ಮಣನಾಯಕ್ ಸ್ವಾಗತಿಸಿದರು. ಹೇಮಲತ ವಂದಿಸಿದರು. ನಂತರ ಎನ್.ಡಿ.ಆರ್.ಎಫ್.ತಂಡದವರು ತರಬೇತಿ ನೀಡಿದರು.