ಕುಷ್ಟಗಿ:
ಪಟ್ಟಣದ ಕ್ರೈಸ್ತ್ ದಿ ಕಿಂಗ್ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆದ 137ನೇ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಕರ ಕಾರ್ಯ ಸಮಾಜ ಸುಧಾರಣೆಯಲ್ಲಿ ಮಹತ್ತರ ಪಾತ್ರವಿದ್ದು ಕೇವಲ ಪುಸ್ತಕದಿಂದ ಶಿಕ್ಷಣ ಕಲಿಸದೆ ಹೃದಯದಿಂದ ಮನಮುಟ್ಟುವಂತೆ ಶಿಕ್ಷಣ ಕಲಿಸಬೇಕು ಎಂದರು.
ಶಿಕ್ಷಕ ತಪ್ಪು ಮಾಡಿದರೆ ಸಮಾಜದ ವ್ಯವಸ್ಥೆಯು ಕೆಡಲಿದೆ. ಮಕ್ಕಳಿಗೆ ಬುನಾದಿಯಿಂದಲೆ ಉತ್ತಮ ಶಿಕ್ಷಣ ಕೊಡಬೇಕು ವಿದ್ಯಾರ್ಥಿಗಳೊಂದಿಗೆ ಮುಕ್ತ ಚರ್ಚೆ ಮಾಡಿ ಪಾಠಬೋಧಿಸಬೇಕೆಂದರು.ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ ಮಾತನಾಡಿ, ಶಿಕ್ಷಕರು ಚಿಂತನೆಯ ಗುರುಗಳಾಗಬೇಕು ಹೊರತು ಸಂಬಳದ ಗುರುಗಳಾಗಬಾರದು. ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಎಲ್ಲ ಸೌಲಭ್ಯ ಕೊಡುತ್ತಿದ್ದರೂ ಸುಧಾರಣೆ ಕಾಣುತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಉಪನ್ಯಾಸ ನೀಡಿದ ಶಿಕ್ಷಕ ಬಸವರಾಜ ಹಂಚಲಿ, ಅಂಕಗಳಿಸುವ ಶಿಕ್ಷಣ ಜತೆಗೆ ಮಾನವೀಯ ಮೌಲ್ಯಗಳನ್ನು ಮಕ್ಕಳಿಗೆ ಬೆಳೆಸಬೇಕು. ಪರೀಕ್ಷೆ ಫೇಲಾದಾಗ ಆತ್ಮಹತ್ಯೆ ಪ್ರಕರಣ ಕಂಡುಬರುತ್ತಿದ್ದು ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಜೀವನದ ಪರೀಕ್ಷೆಗೆ ಅಣಿಗೊಳಿಸಬೇಕೆಂದು ಕರೆ ನೀಡಿದರು.
ಸೇವೆಯಲ್ಲಿ ನಿಧನರಾದ ಶಿಕ್ಷಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಮಲ್ಲಯ್ಯ ವೃತ್ತದಿಂದ ಬಸ್ ನಿಲ್ದಾಣ ಕನಕದಾಸ ವೃತ್ತದ ಮಾರ್ಗವಾಗಿ ಕಾರ್ಯಕ್ರಮ ವೇದಿಕೆ ವರೆಗೂ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.