ದಾಬಸ್ಪೇಟೆ: ಮಕ್ಕಳ ನಡತೆ ತಿದ್ದುವ, ತಪ್ಪನ್ನು ಸರಿಪಡಿಸುವ ಮಾನವೀಯ ಮೌಲ್ಯಗಳು, ಸಂಸ್ಕಾರಯುತ ಕಲಿಕೆಗೆ ಮಹತ್ವ ನೀಡಬೇಕು ಎಂದು ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಮೇಲಣಗವಿ ಮಠದ ಶ್ರೀ ವಿಶ್ವರಾಧ್ಯ ದೇಶೀಕೇಂದ್ರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳು ದಾರಿ ತಪ್ಪಿದಾಗ ಶಿಕ್ಷಿಸಿ ಬುದ್ದಿ ಹೇಳುವ ಮನಸ್ಥಿತಿ ಪಾಲಕರು ಬೆಳೆಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ಮಕ್ಕಳ ಅಧಃಪತನಕ್ಕೆ ಪೋಷಕರೇ ಕಾರಣರಾಗುತ್ತಾರೆ. ಇದು ಸಾಮಾಜಿಕ ಸ್ವಾಸ್ಥ್ಯಕ್ಕೆ ಮಾರಕವಾಗಿ ಪರಿಣಮಿಸುತ್ತದೆ. ಮಕ್ಕಳ ಭವಿಷ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದರು. ಗ್ರಾಪಂ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಆಧುನಿಕ ಮಾಧ್ಯಮಗಳು ಮಕ್ಕಳ ಮೇಲೆ ಪೂರಕ ಮತ್ತು ಮಾರಕ ಪ್ರಭಾವ ಬೀರುತ್ತಿವೆ. ಉತ್ತಮವಾದ್ದನ್ನು ಮಕ್ಕಳು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಮೇಲಣಗವಿ ಮಠದ ಶ್ರೀ ವಿಶ್ವರಾಧ್ಯ ದೇಶೀಕೇಂದ್ರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಶಾಲಾ ನಿರ್ದೇಶಕರಾದ ಪ್ರಸನ್ನಕುಮಾರ್, ಎಲ್ಐಸಿ ಪ್ರಕಾಶ್ ಇತರರಿದ್ದರು.