ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕ ಡಿ. ರಾಮು ಆಗ್ರಹ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ2023-24ನೇ ಸಾಲಿನಲ್ಲಿಯೇ ಶಾಸಕರಿಗೆ ಕಾನೂರು ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದೆವು. ಆದರೆ, ಮಂಜೂರು ಆಗಲಿಲ್ಲ. ಈ ಬಾರಿಯಾದರೂ 10 ಗುಂಟೆ ಜಾಗವನ್ನು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರು ಮಾಡಿಸಿಕೊಡಬೇಕೆಂದು ಡಿಎಸ್ಎಸ್ (ಕೃಷ್ಣಪ್ಪ ಬಣ)ದ ಜಿಲ್ಲಾ ಸಂಚಾಲಕ ಡಿ. ರಾಮು ಒತ್ತಾಯಿಸಿದರು.
ಅವರು ಭಾನುವಾರ ತಾಲೂಕಿನ ಕಾನೂರಿನಲ್ಲಿ ಡಿ.ಎಸ್.ಎಸ್ (ಕೃಷ್ಣಪ್ಪ ಬಣ) ಆಯೋಜಿಸಿದ್ದ ತಾಲೂಕು ಮಟ್ಟದ ಡಾ.ಬಿ.ಆರ್. ಅಂಬೇಡ್ಕರ್ ಅವರ 68 ನೇ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾನೂರು ಗ್ರಾಮಕ್ಕೆ ಗಣಪತಿ ಪೆಂಡಾಲ್ ಅವಶ್ಯಕತೆ ಇದೆ. ಶಾಸಕರು ಅನುದಾನ ನೀಡಿ ಕಾಮಗಾರಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಡಾ. ಬಿ.ಆರ್ .ಅಂಬೇಡ್ಕರ್ ಅವರು ತಮ್ಮ ಜೀವಿತಾವಧಿಯವರೆಗೂ ಅಸ್ಪೃಶ್ಯತೆಯ ವಿರುದ್ಧ ಹೋರಾಡಿದವರು. ಕೆಳ ವರ್ಗದ, ಹಿಂದುಳಿದ ವರ್ಗಗದವರ ಪಾಲಿಗೆ ಆಶಾಕಿರಣವಾದವರು. ನಾವೆಲ್ಲರೂ ಒಗ್ಗಟ್ಟಾಗಿ ಸಂಘಟಿತರಾಗಿ ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಬೇಕೆಂದು ಕರೆ ನೀಡಿದರು.
ಡಿ.ಎಸ್.ಎಸ್ (ಕೃಷ್ಣಪ್ಪ ಬಣ) ಕ್ಷೇತ್ರ ಮಹಿಳಾ ಸಂಚಾಲಕಿ ವಿಮಲ ಮಾತನಾಡಿ, ಹಿಂದೆ ನಮ್ಮ ಜನಾಂಗದವರನ್ನು ಅಂತ್ಯಂತ ಕೀಳಾಗಿ ಕಾಣುತ್ತಿದ್ದರು. ಸಮಾಜದಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿತ್ತು. ನಮಗೆ ಸ್ವಾತಂತ್ಯವೇ ಇರಲಿಲ್ಲ. ನಮ್ಮ ಜನಾಂಗಕ್ಕೆ ಸ್ವಾತಂತ್ರ, ಸಮಾನತೆ, ಹಕ್ಕುಗಳನ್ನು ನೀಡಿದ ಮಹಾನ್ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್ ಎಂದರು.ತಾಲೂಕು ಸಂಚಾಲಕಿ ಪವಿತ್ರಾ ಮಾತನಾಡಿ, ಸಮಾಜದಲ್ಲಿ ಎಲ್ಲರೂ ಒಂದೇ. ಜಾತಿ ಧರ್ಮವೆಲ್ಲ ಬಿಟ್ಟು ನಾವೆಲ್ಲರೂ ಮನುಷ್ಯರು ಎಂಬ ಭಾವನೆಯಿಂದ ಬಾಳಬೇಕು. ಮನುಷ್ಯತ್ವದ ಮುಂದೆ ಜಾತಿ, ಧರ್ಮ ಯಾವುದೂ ಬರುವುದಿಲ್ಲ. ನಾವು ಇನ್ನೊಬ್ಬರಿಗೆ ರಕ್ತ ಕೊಡುವಾಗ ಜಾತಿ ಕೇಳುವುದಿಲ್ಲ. ಅಂಬೇಡ್ಕರ್ ಅವರು ಸಂವಿಧಾನ ರಚಿಸದೇ ಹೋಗಿದ್ದರೆ ನಮ್ಮ ಜನಾಂಗ ಇಷ್ಟರ ಮಟ್ಟಿಗೆ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳು ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಂಘದ ಕ್ಷೇತ್ರಾಧ್ಯಕ್ಷ ಎ.ಸಿ. ಶ್ರೀನಿವಾಸ್, ಕಾನೂರು ಗ್ರಾಮದ ಸಂಚಾಲಕ ಸುಜಿತ್, ಕಾರ್ಯದರ್ಶಿ ಚಂದ್ರಶೇಖರ್, ಛಲವಾದಿ ಮಹಾಸಭಾದ ಚಂದ್ರಶೇಖರ್, ಮುಖಂಡರಾದ ನಾಗರಾಜ್, ಜಾರ್ಜ್, ಪವಿತ್ರಾ, ಶುಭ, ಪ್ರಮೀಳ, ಸುನಿಲ್, ಹರಿಣಿ, ಬಾಬು, ಚಂದ್ರು, ಸುಮಲತಾ,ಶ್ರೀರಾಮ ಹಾಗೂ ಡಿಎಸ್ಎಸ್ನ ಜಿಲ್ಲಾ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳಿದ್ದರು.