ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಅದ್ಧೂರಿಯ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶಿರೂರು ಮಠದ ದಿವಾನ ಹಾಗೂ ಖ್ಯಾತ ಸಂಸ್ಕೃತ ಪಂಡಿತರಾದ ಡಾ. ಉದಯಕುಮಾರ್ ಸರಳತ್ತಾಯ ಅವರು ಆಗಮಿಸಿ ಮಾತನಾಡಿ ದೀಪದಿಂದ ದೀಪವನ್ನು ಹಚ್ಚಿದಾಗ ಆ ಬೆಳಕು ನಿರಂತರವಾಗಿ ಪ್ರಜ್ವಲಿಸಿ ಕತ್ತಲಿಗೆ ಹೇಗೆ ಅವಕಾಶ ನೀಡುವುದಿಲ್ಲವೋ ಹಾಗೆಯೇ ವಿದ್ಯಾರ್ಥಿಗಳಾದ ನಿಮಗೆ ಈ ಜಿ ಎಮ್ ಸಂಸ್ಥೆ ನಿರಂತರವಾಗಿ ಪ್ರಜ್ವಲಿಸಲು ಬೇಕಾದಂತಹ ಜ್ಞಾನವನ್ನು, ಸಂಸ್ಕಾರವನ್ನು, ಜೀವನ ಮೌಲ್ಯಗಳನ್ನು ನೀಡಿದೆ. ಈ ಮೌಲ್ಯಯುತ ಜ್ಞಾನವನ್ನು ಬಳಸಿಕೊಂಡು ಸ್ವಸ್ಥ ರಾಷ್ಟ್ರವನ್ನು ನಿರ್ಮಿಸುವಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಕೆಂಬ ಸಂದೇಶವನ್ನು ನೀಡಿದರು.ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿ ಎಲ್ಲರೂ ತಮ್ಮ ಪೋಷಕರ ಮುಖದಲ್ಲಿ ನಗುವನ್ನು, ಅವರು ಹೆಮ್ಮೆ ಪಡುವಂತಹ ಕೆಲಸವನ್ನು ಮಾಡಬೇಕು. ಹಾಗೆಯೇ ಭವಿಷ್ಯದಲ್ಲಿ ನಿಮ್ಮ ಸಾಧನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಾಗ ಸಾರ್ಥಕತೆಯ ಭಾವನೆ ಉಂಟಾಗುತ್ತದೆ ಎಂದರು.
ನಂತರ ಶಾಲಾ ವಾರ್ಷಿಕ ಸಂಚಿಕೆ ಪರಿಕ್ರಮ ಮತ್ತು ಜಿ ಎಮ್ ಟೈಮ್ಸ್ನ್ನು ಶಾಲಾ ಅಧ್ಯಕ್ಷರು ಹಾಗೂ ಜಿ ಎಮ್ ಗ್ಲೋಬಲ್ ಸ್ಕೂಲ್ನ ಆಡಳಿತ ನಿರ್ದೇಶಕರಾದ ಪ್ರಣವ್ ಶೆಟ್ಟಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಶ್ರೀಮಾ ಪ್ರಣವ್ ಶೆಟ್ಟಿ, ಶಿಕ್ಷಕವೃಂದ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.