ಜಿಲ್ಲೆಯಲ್ಲಿ 40 ಸಾವಿರ ನಿವೇಶನ ಹಂಚುವ ಗುರಿ: ಗೃಹಸಚಿವ ಡಾ. ಜಿ. ಪರಮೇಶ್ವರ್‌

KannadaprabhaNewsNetwork | Published : Feb 22, 2024 1:49 AM

ಸಾರಾಂಶ

ತುಮಕೂರು ಜಿಲ್ಲೆಯಲ್ಲಿ ಸುಮಾರು 40 ಸಾವಿರ ನಿವೇಶನಗಳನ್ನು ಬಡವರಿಗೆ ಹಂಚುವ ಕೆಲಸವನ್ನು ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತಿಯೊಂದಿಗೆ ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತುಮಕೂರು ಜಿಲ್ಲೆಯಲ್ಲಿ ಸುಮಾರು 40 ಸಾವಿರ ನಿವೇಶನಗಳನ್ನು ಬಡವರಿಗೆ ಹಂಚುವ ಕೆಲಸವನ್ನು ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತಿಯೊಂದಿಗೆ ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ವಸತಿ ಹೀನ ಬಡ ಕುಟುಂಬಗಳನ್ನು ಗುರುತಿಸಿ ನಿವೇಶಗಳನ್ನು ಹಂಚುವ ಕೆಲಸವನ್ನು ಮಾಡಲಾಗುವುದು, ಇದಕ್ಕಾಗಿ ಜಿಲ್ಲೆಯ ಪತ್ರಿ ತಾಲೂಕುಗಳಲ್ಲಿ ಸರ್ಕಾರಿ ಭೂಮಿಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ನಿವೇಶನ ಮಾಡಿ ಬಡವರಿಗೆ ಹಂಚಿಕೆ ಮಾಡಲಾಗುವುದು ಹಾಗೂ ಹಂತ ಹಂತವಾಗಿ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಕೊರಟಗೆರೆ ತಾಲೂಕಿನಲ್ಲೂ 1600 ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ರಾಜ್ಯದಲ್ಲಿ ಗ್ಯಾರಂಟಿಗಳ ಅನುಷ್ಠಾನಗಳೊಂದಿಗೆ ಬಡವರ ಇತರ ಕಲ್ಯಾಣ ಯೋಜನೆಗಳನ್ನು ಮುಂದುವರೆಸಲಾಗುವುದು ಎಂದರು.

ಈ ಬಾರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ಕಾರದ ಅಯವ್ಯಯದಲ್ಲಿ ಎಲ್ಲಾ ವರ್ಗಗಳ ಜನರಿಗೆ, ರೈತರಿಗೆ, ಮಹಿಳೆಯರಿಗೆ ಅನುಕೂಲವಾಗುವಂತೆ ಮಂಡಿಸಿದ್ದಾರೆ ಎಂದರು.

ಕೊರಟಗೆರೆ ಪಟ್ಟಣದ ಅಭಿವೃದಿಗೆ, ವೈಟ್‌ಟ್ಯಾಪಿಂಗ್‌ ರಸ್ತೆಗೆ, ಸ್ಲಮ್‌ಬೋರ್ಡ್‌ ಮನೆಗಳ ನಿರ್ಮಾಣಕ್ಕೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಈಗಾಗಲೇ 30ಕೋಟಿ ರು.ಗಳ ವಿಶೆಷ ಅನುದಾನ ಮಂಜೂರು ಮಾಡಿಸಿದ್ದೇನೆ, ಪಟ್ಟಣದ ಬಸ್ವಾಂಡ್ ಸರ್ಕಲ್‌ನಲ್ಲಿ ಹಲವಾರು ವರ್ಷಗಳಿಂದ ವಾಸಿಸಲು ಯೋಗ್ಯವಿಲ್ಲದ ಸರ್ಕಾರಿ ಕಟ್ಟಡಗಳನ್ನು ತರೆವು ಮಾಡಲಾಗಿದೆ, ಮುಂದೆ ಅಲ್ಲಿ ಬೃಹತ್‌ ಕಲಾಭವನವನ್ನು, ಪಟ್ಟಣ ಪಂಚಾಯತಿಗೆ ಆದಾಯತರುವ ನಿಟ್ಟಿನಲ್ಲಿ ಶಾಪಿಂಗ್‌ಮಾಲ್‌ಗಳನ್ನು ಮತ್ತು ಇತರ ವ್ಯಾಪಾರಿ ಕೆಂದ್ರಗಳನ್ನು ಮಾಡಲಾಗುವುದು ಮತ್ತು ಪ್ರಯಾಣಿಕರಿಗೆ ಉತ್ತಮ ತಂಗುದಾನಗಳ ನಿರ್ಮಾಣವನ್ನು ಮಾಡಲಾಗುವುದು ಎಂದರು.

ಕೊರಟಗೆರೆ ಪ್ರಥಮ ದರ್ಜೆ ಕಾಲೇಜಿನ ಕಟ್ಟಗಳ ನಿರ್ಮಾಣಕ್ಕೆ 1.30 ಕೋಟಿ ಅನುದಾನ ಮುಂಜೂರು ಮಾಡಿಸಲಾಗಿದೆ ಹಾಗೂ ಜಿಲ್ಲೆ ಮತ್ತು ಕ್ಷೇತ್ರದಲ್ಲಿನ ಎಲ್ಲಾ ಸರ್ಕಾರಿ ಶಾಲಾ ಕಾಲೇಜಿಗಳಿಗೆ ಮೂಲಭೂತ ಸೌಕರ್ಯಗಳಿಗೆ ಆದ್ಯತೆಯನ್ನು ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ತಹಶೀಲ್ದಾರ್‌ ಮಂಜುನಾಥ್, ತಾ.ಪಂ. ಇಒ ಅಪೂರ್ವಾ, ಪಪಂ ಸಿಒ ಭಾಗ್ಯಮ್ಮ, ಸದಸ್ಯರಾದ ಬಲರಾಮಯ್ಯ, ನಂದೀಶ್, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವೀರಪ್ಪನಾಯ್ಕ, ಉಪನ್ಯಾಸಕ ಶಿವರಾಮಯ್ಯ, ಮುಖಂಡರಾದ ಕೆಂಪಣ್ಣ, ಕೆ.ಬಿ. ಲೋಕೇಶ್, ಚಂದ್ರು, ಅರವಿಂದ್, ಕೆ.ಎಲ್.ಮಂಜುನಾಥ್, ಭೈರೇಶ್, ದೀಪಕ್, ಗೋಪಿನಾಥ್, ರಾಜು, ಸೇರಿದಂತೆ ಇತರರು ಹಾಜರಿದ್ದರು.

Share this article