- ಶ್ರೀ ಪಾಂಡುರಂಗ ವಿಠಲ ರುಕ್ಮಾಯಿಯವರ, ಶ್ರೀ ಮೈಲಾರಲಿಂಗೇಶ್ವರಸ್ವಾಮಿ, ಶ್ರೀ ದುರ್ಗಮ್ಮ ದೇವಸ್ಥಾನ, ಭಾವಸಾರ ಸಭಾ ಭವನ ಭೂಮಿಪೂಜಾ ಕಾರ್ಯಕ್ರಮ
ಭಕ್ತರ ಗಾಯನ, ಕೀರ್ತನೆಗಳಲ್ಲಿ ಭಗವಂತನು ನೆಲಸಿರುತ್ತಾನೆ ಎಂದು ಶ್ರೀ ಕ್ಷೇತ್ರ ಕೂಡಲಿ ಮಠ ಶ್ರೀ ಡಾ.ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಮಹಾಸ್ವಾಮಿ ಹೇಳಿದರು.
ಗುರುವಾರ ಭಾವಸಾರ ಕ್ಷತ್ರಿಯ ಸಮಾಜ ಸಂಘ, ಶ್ರೀ ಪಾಂಡುರಂಗ ವಿಠಲ ರುಕ್ಮಾಯಿ ಮಂದಿರದಿಂದ ಪಟ್ಟಣದಲ್ಲಿ ಶ್ರೀ ಪಾಂಡುರಂಗ ವಿಠಲ ರುಕ್ಮಾಯಿ, ಶ್ರೀ ಮೈಲಾರಲಿಂಗೇಶ್ವರ, ಶ್ರೀ ದುರ್ಗಮ್ಮ ದೇವಸ್ಥಾನ, ಭಾವಸಾರ ಸಭಾ ಭವನ ಭೂಮಿ ಪೂಜೆ ನೇತೃತ್ವ ವಹಿಸಿ ಮಾತನಾಡಿದರು. ಭಾವಸಾರ ಅಂದರೆ ಭಾವನೆಗಳ ಸಾರ, ಕ್ಷತ್ರಿಯ ಅಂದರೆ ಲೋಕ ರಕ್ಷಣೆ ಮಾಡುವವರು. ಬಡವರು, ಮಾನಸಿಕವಾಗಿ ಕುಗ್ಗಿರುವವರನ್ನು ರಕ್ಷಿಸುವವರು ಶ್ರೀ ವಿಠಲ ಎಂದರೆ ನಾರಾಯಣನ ಅಂಶ, ಶ್ರೀ ವಿಠಲ ಎಂದರೆ ಜ್ಞಾನ ಎಂದು ಅರ್ಥ, ಶ್ರೀ ತುಕಾರಾಂ ಮಹಾರಾಜರು ಇಂತಹ ಅನೇಕ ಸಂತ ಪರಂಪರೆ ಶ್ರೀ ವಿಠಲನ ಧ್ಯಾನದಲ್ಲಿದ್ದವರು. ಶ್ರೀ ಪುಂಡಲೀಕ, ಶ್ರೀ ಪಾಂಡುರಂಗರನ್ನು ಶ್ರೀ ಶಂಕರಾಚಾರ್ಯರು ಸ್ಮರಿಸಿದ್ದಾರೆ. ತಂದೆ ತಾಯಿಯರ ಸೇವೆ ಒಂದು ಬಹು ದೊಡ್ಡ ತಪಸ್ಸು ಎಂದು ಹೇಳಿದರು.ಶ್ರೀ ವಿಠಲನ ನಾಮಸ್ಮರಣೆ ಹೃದಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಭಜನೆಗೆ ಒಲಿಯುವ ಭಗವಂತ ಮನಸ್ಸಿನ ಕಾಯಿಲೆ ದೂರ ಮಾಡುತ್ತಾನೆ. ಸಂತೆ ಪರಂಪರೆ ಶ್ರೀ ವಿಠಲರು ಶ್ರೇಷ್ಠರು, ಸಂತರು ಹಾಕಿಕೊಟ್ಟ ಪರಂಪರೆ ಮತ್ತು ಉಪದೇಶ ನಮಗೆ ಮಾರ್ಗದರ್ಶನ. ಒಗ್ಗಟ್ಟಿನಲ್ಲಿ ಬಲವಿದೆ, ಸಂಘಟನೆಯಲ್ಲಿ ಶಕ್ತಿ ಇದೆ ಎಂದು ತಿಳಿಸಿದ ಅವರು ಶೀಘ್ರ ಶ್ರೀ ಪಾಂಡುರಂಗ ವಿಠಲ ರುಕ್ಮಾಯಿ, ಶ್ರೀ ಮೈಲಾರಲಿಂಗೇಶ್ವರ, ಶ್ರೀ ದುರ್ಗಮ್ಮ ದೇವಸ್ಥಾನ, ಭಾವಸಾರ ಸಭಾ ಭವನ ನಿರ್ಮಾಣವಾಗಲಿ ಎಂದು ಆಶಿಸಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ ಸಮುದಾಯದಿಂದ ದೇವಸ್ಥಾನ, ಸಭಾ ಭವನ ನಿರ್ಮಾಣ ಒಂದು ಮಹತ್ಕಾರ್ಯ. ನಿಮ್ಮ ಜೊತೆ ನಾನು ಇರುತ್ತೇನೆ. ಇದಕ್ಕಾಗಿ ₹10 ಲಕ್ಷ ಅನುದಾನ ನೀಡುತ್ತೇನೆ ಎಂದು ಹೇಳಿದರು.
ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಭಾವ ಅಂದರೆ ಪ್ರೇಮ, ಸಾರ ಎಂದರೆ ಶ್ರೇಷ್ಠ ಇವರು ಉತ್ತರ ಭಾರತದ ಮೂಲ ನಿವಾಸಿಗಳು ಭಾವಸಿಂಗ್ ಮತ್ತು ಸಾರಾಸಿಂಗ್ ಮೂಲ ಪುರುಷರು. ಈ ಸಮಾಜಕ್ಕೆ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನಲೆಯಿದೆ. ಸಮಾಜದ ಮೂಲ ಕಸುಬಾದ ದರ್ಜಿ ವೃತ್ತಿ ನಶಿಸುತ್ತಿದೆ. ಸರ್ಕಾರ ಭಾವಸಾರ ನಿಗಮ ಸ್ಥಾಪಿಸಲು ಮುಂದಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ತರೀಕೆರೆಯಲ್ಲಿ ಭಾವಸಾರ ಕ್ಷತ್ರಿಯ ಸಮಾಜ ಸಂಘದಿಂದ ಶ್ರೀ ಪಾಂಡುರಂಗ ವಿಠಲ ರುಕ್ಮಾಯಿ, ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ, ಶ್ರೀ ದುರ್ಗಮ್ಮ ದೇವಸ್ಥಾನ, ಭಾವಸಾರ ಸಭಾಭವನ ಭೂಮಿ ಪೂಜೆಯಲ್ಲಿ ಶ್ರೀ ಕ್ಷೇತ್ರ ಕೂಡಲಿ ಮಠ ಶ್ರೀ ಡಾ.ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಮಹಾಸ್ವಾಮಿ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಡಿ.ಎಸ್.ಸುರೇಶ್, ಪುರಸಭೆ ಉಪಾಧ್ಯಕ್ಷೆ ಗಿರಿಜಾ ವರ್ಮ ಪ್ರಕಾಶ್, ಸಮಾಜ ಸಂಘ ಅಧ್ಯಕ್ಷ ಸುರೇಶ್ ಮಹಳತ್ಕರ್ ಮತ್ತಿತರರು ಇದ್ದರು.