ಉಡುಪಿ : ನಮ್ಮ ಜೀವನದಲ್ಲಿ ನಡೆಯುವ ಘಟನೆಗಳು, ಎದುರಾಗುವ ಅವಕಾಶಗಳು, ಅನುಭವಗಳ ಮೂಲಕ ಭಗವಂತನು ನಿರಂತರವಾಗಿ ಸೂಚನೆಗಳನ್ನು ನೀಡುತ್ತಿರುತ್ತಾನೆ, ಕಾರಿನ ಜಿಪಿಎಸ್ ಸರಿಯಾದ ಗಮ್ಯಸ್ಥಾನವನ್ನು ತಲುಪಲು ಮಾರ್ಗದರ್ಶನ ಮಾಡುವಂತೆ, ಭಗವಂತನ ಇಚ್ಛೆಯೇ ನಮ್ಮ ಜೀವನದಲ್ಲಿ ಜಿಪಿಎಸ್ನಂತೆ ಸರಿಯಾದ ದಾರಿ ತೋರಿಸುತ್ತದೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಮಹೋತ್ಸವದ ಅಂಗವಾಗಿ ಜನ್ಮನಕ್ಷತ್ರ ಹೋಮ, ಸುದರ್ಶನ ಹೋಮ, ವಿರಜಾ ಹೋಮ ಹಾಗೂ ಶ್ರೀ ಉಪೇಂದ್ರ ವಿಠಲ ದೇವರಿಗೆ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ನಡೆಯಿತು. ಪ್ರಸಿದ್ಧ ವಿದ್ವಾಂಸ ಪ್ರ.ರಾ.ನಾಗರಹಳ್ಳಿ, ಪಂಜ ಭಾಸ್ಕರ ಭಟ್ ಮತ್ತು ಮುಂಬೈನ ಶ್ರೀ ಪೇಜಾವರ ಮಠದ ಮುಖ್ಯಸ್ಥ ಶ್ರೀ ರಾಮದಾಸ ಉಪಾಧ್ಯಾಯರು ಅಭಿನಂದನಾ ಭಾಷಣ ಮಾಡಿದರು. ವಿವಿಧ ಕ್ಷೇತ್ರಗಳ ವಿದ್ವಾಂಸರು ಮತ್ತು ಸಮಾಜಸೇವಕರನ್ನು ಸನ್ಮಾನಿಸಲಾಯಿತು. ಚಾತುರ್ಮಾಸ್ಯ ಸೇವಾ ಸಮಿತಿಯ ವತಿಯಿಂದ ಉದ್ಯಮಿ ಶಿವರಾಮ ಭಟ್, ಗೋಪಾಲ್ ಶೆಟ್ಟಿ ಹಾಗೂ ಸಮಿತಿಯ ಸದಸ್ಯರು ಶ್ರೀಪಾದರಿಗೆ ಬೃಹತ್ ಕಿರೀಟ ಮತ್ತು ಹಾರವನ್ನು ಸಮರ್ಪಿಸಿ ಗೌರವಿಸಿದರು. ಶ್ರೀ ಪುತ್ತಿಗೆ ವಿದ್ಯಾಪೀಠದ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶ್ರೀಪಾದರಿಗೆ ಗುರುನಮನ ಸಲ್ಲಿಸಲಾಯಿತು.
ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರತೀಶ್ ತಂತ್ರಿ, ನಾರಾಯಣ ಆಚಾರ್ಯ, ವಿಷ್ಣುಮೂರ್ತಿ ಉಪಾಧ್ಯಾಯ, ಎ. ಬಿ. ಕುಂಜಾರು ಮತ್ತಿತರರು ಹಾಜರಿದ್ದರು.