ಶಾಸಕ ಕೆ.ವೈ.ನಂಜೇಗೌಡ । ಪದವಿಪೂರ್ವ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ
ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನದಡಿ ಎಲ್ಲಾ ಜಾತಿ, ಜನಾಂಗದವರನ್ನು ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ತರುಲು ತಾಲೂಕು ಆಡಳಿತ ಶ್ರಮವಹಿಸುತ್ತಿದೆ ಎಂದು ಶಾಸಕ ಕೆ. ವೈ.ನಂಜೇಗೌಡ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ೭೫ ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಬಿ. ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ ೧೯೫೦ ಜ. ೨೬ರಂದು ಜಾರಿಗೆ ಬಂದ ದಿನವನ್ನು ಪ್ರತಿ ವರ್ಷ ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಂವಿಧಾನ ಜಾರಿಗೆ ಬಂದು ೭೪ ವರ್ಷ ಕಳೆದವು. ದೇಶದ ಅಭಿವೃದ್ಧಿ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಪ್ರಗತಿ ಸಾಧಿಸಲು ನಾವು ಕೆಲಸ ಮಾಡಬೇಕು ಎಂದರು.ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರದಿಂದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ೧೨೦ ಕೋಟಿ ರು. ಬಿಡುಗಡೆಯಾಗಿದ್ದು, ಎರಡು ತಿಂಗಳ ಅವಧಿಯಲ್ಲಿ ಹದಗೆಟ್ಟ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು, ವಿಜಯಪುರದಿಂದ ಸಂಪಗೆರೆ ಗಡಿಯವರೆಗಿನ ರಸ್ತೆಯನ್ನು ೬ ಪಥದ ರಸ್ತೆಯನ್ನಾಗಿಸಲು ಸರ್ಕಾರ ೨೦೦೦ ಕೋಟಿ ರು. ಬಿಡುಗಡೆ ಮಾಡಿದೆ, ವಾಹನಗಳ ದಟ್ಟಣೆ ನಿಯಂತ್ರಿಸಲು ಫ್ಲೈ ಓವರ್ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದರು.ಪೊಲೀಸ್ ಇಲಾಖೆಯ ತೆರೆದ ಜೀಪಿನಲ್ಲಿ ಶಾಸಕ ಕೆ. ವೈ. ನಂಜೇಗೌಡ, ತಹಸೀಲ್ದಾರ್ ಎ. ರಮೇಶ್. ಪೊಲೀಸ್ ಇನ್ಸ್ಪೆಕ್ಟರ್ ವಸಂತ್ ಪಥ ಸಂಚಲನ ತಂಡಗಳಿಂದ ಧ್ವಜ ವಂದನೆ ಸ್ವೀಕರಿಸಿದರು. ತಹಶೀಲ್ದಾರ್ ಕೆ. ರಮೇಶ್ ಧ್ವಜಾರೋಹಣ ನೇರವರಿಸಿದರು.
ಗ್ರೇಡ್ ೨ ತಹಸೀಲ್ದಾರ್ ಹರಿಪ್ರಸಾದ್, ತಾಪಂ ಇ. ಒ, ಕೃಷ್ಣಪ್ಪ, ಪುರಸಭೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನೇಗೌಡ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷೆ ಜಯಂತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖಯ್ಯ, ಗೌರವಾಧ್ಯಕ್ಷ ಆರ್. ನರಸಿಂಹ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಜಯ್ ಕುಮಾರ್, ಬಿಇಒ ಚಂದ್ರಕಲಾ, ಸಮಾಜ ಕಲ್ಯಾಣ ಇಲಾಖೆ ಶಿವಕುಮಾರ್, ಜಿಪಂ ನಗರ ನೀರು ನೈರ್ಮಲ್ಯ ಶಾಖೆಯ ಇಲಾಖೆಯ ಎಇಇ ಜಬಿ ಉಲ್ಲಾ, ಕಸಾಪ ಅಧ್ಯಕ್ಷ ಹನುಮಂತಯ್ಯ, ಪುರಸಭೆ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಇನ್ನಿತರರು ಹಾಜರಿದ್ದರು.