ರಾಷ್ಟ್ರೀಯ ಪುಷ್ಪೋದ್ಯಮ ಮಂಡಳಿ ವಿಧೇಯಕ ಮಂಡಿಸಲು ರಾಷ್ಟ್ರಪತಿಗಳ ಶಿಫಾರಸು
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕಳೆದ ಡಿಸೆಂಬರ್ನಲ್ಲಿ ನಡೆದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ನಾನು ಮಂಡಿಸಿದ್ದ ರಾಷ್ಟ್ರೀಯ ಪುಷ್ಪೋದ್ಯಮ ಮಂಡಳಿ ವಿಧೇಯಕ, 2024 (ಖಾಸಗಿ ಸದಸ್ಯರ ವಿಧೇಯಕ)ವನ್ನು ಲೋಕಸಭೆಯಲ್ಲಿ ಪರಿಗಣಿಸಲು ಭಾರತದ ರಾಷ್ಟ್ರಪತಿಗಳು ಸಂವಿಧಾನದ 117(3)ನೇ ವಿಧಿಯ ಅಡಿಯಲ್ಲಿ ಶಿಫಾರಸು ಮಾಡಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.ಪುಷ್ಪ ಕೃಷಿಯಲ್ಲಿ ತೊಡಗಿಸಿಕೊಂಡಿರುವ ನಮ್ಮ ರೈತರಿಗೆ ರಾಷ್ಟ್ರ ಮಟ್ಟದಲ್ಲಿ ಒಂದು ಸಾಂಸ್ಥಿಕ ಬೆಂಬಲ ಒದಗಿಸುವ, ಸಂಶೋಧನೆ ಮತ್ತು ನಾವೀನ್ಯತೆಗೆ ಉತ್ತೇಜನ ನೀಡುವ, ಮೌಲ್ಯವರ್ಧಿತ ಉತ್ಪನ್ನಗಳಿಗೆ ಅವಕಾಶ ಕಲ್ಪಿಸುವ ಹಾಗೂ ಮಾರುಕಟ್ಟೆ ವಿಸ್ತರಿಸಿ ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ನಾನು ಡಿಸೆಂಬರ್ 2025ರಲ್ಲಿ ಈ ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಿದ್ದೆ.
ಈ ವಿಧೇಯಕವನ್ನು ಲೋಕಸಭೆಯಲ್ಲಿ ಪರಿಗಣಿಸಲು ದೊರೆತಿರುವ ಈ ಶಿಫಾರಸ್ಸು, ರಾಷ್ಟ್ರೀಯ ಕೃಷಿ ಮಂಡಳಿ ಸ್ಥಾಪಿಸುವ ನಮ್ಮ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದ್ದು, ಭಾರತದ ಪುಷ್ಪೋದ್ಯಮ ಕ್ಷೇತ್ರದ ಮಹತ್ವ ಹಾಗೂ ಅದನ್ನು ಅವಲಂಬಿಸಿರುವ ರೈತರ ಕೊಡುಗೆಗೆ ಕೇಂದ್ರ ಸರ್ಕಾರದಿಂದ ದೊರೆತಿರುವ ಮಾನ್ಯತೆಯ ಪ್ರತೀಕವಾಗಿದೆ.
ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಲೋಕಸಭೆಯು ಈ ವಿಧೇಯಕವನ್ನು ಪರಿಗಣಿಸಿ, ಸುದೀರ್ಘವಾಗಿ ಚರ್ಚಿಸಿ, ದೇಶದ ಲಕ್ಷಾಂತರ ಹೂವು ಬೆಳೆಗಾರರ ಹಿತದೃಷ್ಟಿಯಿಂದ ಈ ಮಸೂದೆಯನ್ನು ಅಂಗೀಕರಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.