ನ್ಯಾಯಾಲಯದ ಆವರಣದಲ್ಲಿ ಹಿರಿಯ ನ್ಯಾಯಾಧೀಶೆ ಭಾರತಿ ಎಸ್ ರಾಯಣ್ಣನವರ್ ಗೆ ಬೀಳ್ಕೊಡಿಗೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರನ್ಯಾಯಾಲಯದ 3 ವರ್ಷದ ಸೇವಾ ಅವಧಿಯಲ್ಲಿ ನರಸಿಂಹರಾಜಪುರ ವಕೀಲರು ಬಹಳಷ್ಟು ಸಹಕಾರ ನೀಡಿದ್ದರಿಂದ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಯಿತು ಎಂದು ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶರಾದ ಭಾರತಿ ಎಸ್ ರಾಯಣ್ಣನವರ್ ತಿಳಿಸಿದರು.
ಮಂಗಳವಾರ ಜೆಎಂಎಫ್ಸಿ ನ್ಯಾಯಾಲಯದ ಆವರಣದಲ್ಲಿ ಇಲ್ಲಿಂದ ಕುಮಟಾ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶರಾದ ಭಾರತಿ ಎಸ್ ರಾಯಣ್ಣನವರ್ ಅವರಿಗೆ ವಕೀಲರ ಸಂಘ ಏರ್ಪಡಿಸಿದ್ದ ಬೀಳ್ಕೊಡಿಗೆ ಸಮಾರಂಭದಲ್ಲಿ ಗೌರವ ಸ್ವೀಕಾರ ಮಾಡಿ ಮಾತನಾಡಿದರು.ನಾನು ಈ ಹಿಂದೆ ದೇವನಹಳ್ಳಿ, ಸಿಂಧನೂರು, ಬೆಂಗಳೂರಿನ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿ ಕೆಲಸ ಮಾಡಿದ್ದೆ. ಆದರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಸೇರಿ 3 ತಾಲೂಕುಗಳ ನ್ಯಾಯಾಧೀಶರಾಗಿ ಕೆಲಸ ಮಾಡುವಾಗ ಇಲ್ಲಿನ ವಕೀಲರ ಸಹಕಾರ ತುಂಬಾ ಸಿಕ್ಕಿದೆ. ಜೊತೆಗೆ ಇಲ್ಲಿನ ಪರಿಸರವೂ ನನಗೆ ಇಷ್ಟವಾಗಿದೆ.ವಕೀಲರು ಹಾಗೂ ನ್ಯಾಯಾಧೀಶರು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಿದಾಗ ಕಕ್ಷಿದಾರರಿಗೆ ನ್ಯಾಯ ನೀಡಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷ್ ಕುಮಾರ್ ಮಾತನಾಡಿ, ವರ್ಗಾವಣೆಗೊಂಡ ಹಿರಿಯ ಶ್ರೇಣಿ ನ್ಯಾಯಾಧೀಶಾರಾದ ಭಾರತಿ ಎಸ್ ರಾಯಣ್ಣನವರ್ ಹಿರಿಯ ಹಾಗೂ ಕಿರಿಯ ವಕೀಲರನ್ನು ಸಮಾನರಾಗಿ ಕಾಣುತ್ತಿದ್ದರು. ಯಾವುದೇ ಸಂಘರ್ಷ ಇಲ್ಲದೆ ವಕೀಲರು ಹಾಗೂ ನ್ಯಾಯಾದೀಶೆ ಭಾರತಿ ಎಸ್ ರಾಯಣ್ಣನವರ್ ಒಟ್ಟಾಗಿ ಕೆಲಸ ಮಾಡಿದ್ದೇವೆ. ನಾಲ್ಕು ಗೋಡೆಗಳ ನಡುವೆ ನ್ಯಾಯಾಲಯದಲ್ಲಿ ಕೆಲಸ ಮಾಡುವ ಜೊತೆಗೆ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಒಟ್ಟಾಗಿ ಸಮಾಜ ಸುಧಾರಣೆ ಆಗುವಂತಹ ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಮೂರು ತಾಲೂಕುಗಳ ವಕೀಲರು ಒಟ್ಟಾಗಿ ನಡೆಸಿದ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮಕ್ಕೂ ನ್ಯಾಯಾಧೀಶರು ಸಹಕಾರ ನೀಡಿದ್ದರು ಎಂದು ನೆನಪಿಸಿಕೊಂಡರು.
ಸಭೆಯಲ್ಲಿ ಕಿರಿಯ ಸಿವಿಲ್ ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್, ವಕೀಲರ ಸಂಘದ ಕಾರ್ಯದರ್ಶಿ ದೇವೇಂದ್ರ, ಉಪಾಧ್ಯಕ್ಷ ಎಚ್.ಎ.ಸಾಜು, ಖಜಾಂಚಿ ಬಸವರಾಜು, ಹಿರಿಯ ವಕೀಲರಾದ ಕೆ.ಪಿ.ಸುರೇಶ್ ಕುಮಾರ್, ಸುಮ, ಜಿ.ದಿವಾಕರ್, ಜಯಪ್ರಕಾಶ್, ಸುಜಯ್, ಚಂದ್ರಶೇಖರ್, ಪೌಲ್ ಚೆರಿಯನ್ ಹಾಗೂ ನ್ಯಾಯಾಲಯದ ಸಿಬ್ಬಂದಿ ಇದ್ದರು.