ರಾಮನಗರ: ಬೆಂಗಳೂರಿನಿಂದ ಮದ್ದೂರಿಗೆ ತೆರಳುತ್ತಿದ್ದ ಗೂಡ್ಸ್ ರೈಲೊಂದು ತಾಲೂಕಿನ ಬಿಡದಿ - ರಾಮನಗರದ ಮಧ್ಯೆ ಮಂಗಳವಾರ ಸಂಜೆ ಹಳಿ ತಪ್ಪಿದೆ.
ಸಂಜೆ 4.45ರ ಸುಮಾರಿಗೆ ಬಿಡದಿಯಿಂದ ಮದ್ದೂರಿಗೆ ಹೊರಟ ಖಾಲಿ ಇದ್ದ ಎನ್ಎಂಜಿ ರೇಕ್ ಗೂಡ್ಸ್ ರೈಲಿನ ಒಂದು ಬೋಗಿಯ ಚಕ್ರವು 5 ಗಂಟೆ 11 ನಿಮಿಷಕ್ಕೆ ಹಳಿ ತಪ್ಪಿದೆ. ಕೂಡಲೇ ಲೋಕೋಪೈಲಟ್ ರೈಲನ್ನು ನಿಲ್ಲಿಸುವ ಮೂಲಕ ಯಾವುದೇ ಅನಾಹುತ ಸಂಭವಿಸದಂತೆ ಸಮಯಪ್ರಜ್ಞೆ ಮೆರೆದಿದ್ದಾರೆ.
ರೈಲು ಹಳಿ ತಪ್ಪಿದ್ದರಿಂದ ಇತ್ತ ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ರೈಲುಗಳು ಸಮೀಪದ ಕೆಂಗೇರಿ, ನಾಯಂಡಹಳ್ಳಿ, ಬೆಂಗಳೂರು ನಿಲ್ದಾಣಗಳಲ್ಲೇ ಬೀಡು ಬಿಟ್ಟವು. ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ರೈಲುಗಳು ಚನ್ನಪಟ್ಟಣ, ಮಂಡ್ಯದಲ್ಲೇ ನಿಂತಿವೆ. ಪ್ರಯಾಣಿಕರು ರೈಲಿನಲ್ಲೇ ಕಾಯುವಂತಾಗಿದೆ.ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಸಿಬ್ಬಂದಿಯನ್ನು ಕಳುಹಿಸಿ, ಹಳಿ ತಪ್ಪಿರುವ ಬೋಗಿಯನ್ನು ಸಹಜ ಸ್ಥಿತಿಗೆ ತಂದು ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಕೆಲಸ ನಡೆಯುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರೈಲು ಸಂಚಾರದಲ್ಲಿ ವಿಳಂಬವಾಗಿರುವ ಕುರಿತು ಸಮೀಪದ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿದೆ.
ಎನ್ಎಂಜಿ ರೇಕ್ ಗೂಡ್ಸ್ ರೈಲುಗಳು ನೋಡಲು ಪ್ರಯಾಣಿಕ ರೈಲುಗಳ ಮಾದರಿಯಲ್ಲೇ ಇರುತ್ತವೆ. ಇವುಗಳನ್ನು ದ್ವಿಚಕ್ರ ವಾಹನ, ಕಾರು ಸೇರಿದಂತೆ ಇತರ ಸರಕು ಸಾಗಣೆ ಉದ್ದೇಶಕ್ಕೆ ಬಳಸಲಾಗುತ್ತದೆ.ಹಳಿ ತಪ್ಪಿರುವ ಬೋಗಿಯನ್ನು ಸಹಜ ಸ್ಥಿತಿಗೆ ತಂದು ಗೂಡ್ಸ್ ರೈಲನ್ನು ರಾಮನಗರ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ. ಟ್ರ್ಯಾಕ್ ಪರಿಶೀಲನೆ ಬಳಿಕ ರೈಲು ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ರೈಲ್ವೆ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದರು.
17ಕೆಆರ್ ಎಂಎನ್ 6.ಜೆಪಿಜಿಗೂಡ್ಸ್ ರೈಲು ಹಳಿ ತಪ್ಪಿರುವುದು.