ನಗರದ ಒಕ್ಕಲಿಗರ ಭವನದಲ್ಲಿ ಮೂರು ದಿನದ ‘40ರ ಸಂಭ್ರಮ’ ಸಮಾರೋಪ ಸಮಾರಂಭ
ಬಸವಣ್ಣ ಹಾಗೂ ಶಿವಶರಣರ ಆಶಯದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಕಲ್ಯಾಣ ಕಾರ್ಯಕ್ರಮಗಳೊಂದಿಗೆ ಜನ ಸ್ನೇಹಿ ಆಡಳಿತ ನೀಡುತ್ತಿದೆ ಎಂದು ಇಂಧನ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಷತ್ತು ನಗರದ ಒಕ್ಕಲಿಗರ ಭವನದಲ್ಲಿ ಆಯೋಜಿಸಿದ್ದ ಮೂರು ದಿನದ ‘40ರ ಸಂಭ್ರಮ’ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿ, ಬಸವಣ್ಣ ಕಾಯಕಕ್ಕೆ ಮಹತ್ವ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ನರೇಗಾ ಕಾರ್ಯಕ್ರಮ ರೂಪಿಸಿ ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಲಾಗಿತ್ತು. ಇನ್ನೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರಿಸಿದ ಮರು ಕ್ಷಣವೇ ಬಸವಣ್ಣ ಪ್ರತಿಪಾದಿಸಿದಂತೆ ಹಸಿವು ನಿಗಿಸುವ ನಿಟ್ಟಿನಲ್ಲಿ ಅನ್ನ ಭಾಗ್ಯ ಯೋಜನೆ ಘೋಷಿಸಿದರು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಲ್ಲದೇ, ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರ ಅಳವಡಿಕೆಗೆ ಆದೇಶಿಸಿದರು.ದಾಸೋಹ ಎಂದರೆ ಉತ್ಪಾದನೆ ಮತ್ತು ವಿನಿಯೋಗ. ಈ ನಿಟ್ಟಿನಲ್ಲಿ ಮಹಿಳೆಯರು ಮತ್ತು ಬಡವರಿಗೆ ಆರ್ಥಿಕ ಶಕ್ತಿ ತುಂಬಲು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಬಸವಾದಿ ಶರಣರ ಆಶಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಬಸವಣ್ಣ ಸಮಾಜದ ಪರಿವರ್ತನೆಗೆ ವಚನ ಚಳವಳಿಯೇ ಪರಿಹಾರ ಎಂದು ಒತ್ತಿ ಹೇಳಿದ್ದರು. ಶರಣರ ವಚನಗಳನ್ನು ಜೀವನ ದಲ್ಲಿ ಅಳವಡಿಸಿಕೊಂಡರೆ, ಆದರ್ಶ ಬದುಕು ರೂಪಿಸಿಕೊಳ್ಳಬಹುದು. ವಚನಗಳ ಅಧ್ಯಾಯನ ವ್ಯಕ್ತಿ ಮತ್ತು ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರಲಿದೆ. 12ನೇ ಶತಮಾನದ ವಚನ ಕ್ರಾಂತಿಯಿಂದ ಸಾಮಾಜಿಕ ಪರಿವರ್ತನೆಗೆ ದಾರಿ ಆಯಿತು. 21ನೇ ಶತಮಾನದಲ್ಲೂ ಸಾಮಾಜಿಕ ಬದಲಾವಣೆ ಕ್ರಾಂತಿ ಆಗಬೇಕು. ಆ ನಿಟ್ಟಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕಾರ್ಯೋನ್ಮಕವಾಗಬೇಕು ಎಂದು ಹೇಳಿದರು.ಕೇವಲ ವೀರಶೈವ ಸಮಾಜಕ್ಕೆ ಸೀಮಿತವಾಗದೇ ಶರಣರ ವಿಚಾರ ಧಾರೆ ರಾಜ್ಯಾಂದ್ಯಂತ ವಿವಿಧ ಕಾರ್ಯಕ್ರಮದ ಮೂಲಕ ವಚನದ ಜ್ಞಾನವನ್ನು ಜನರಿಗೆ ನೀಡಲಾಗುತ್ತಿದೆ. ಶರಣರ ವಿಚಾರಧಾರೆ ಸಾರ್ವಕಾಲಿಕವಾದವುಗಳು. ಅವರನ್ನು ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯ ಮತ್ತು ಹೊರದೇಶದಲ್ಲಿ ಪ್ರಚಾರ ಮಾಡುವ ನಿಟ್ಟಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಸೋಮಶೇಖರ್ ಮಾತನಾಡಿ, ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ಸಾಹಿತ್ಯದ ಒಲವು ಇದ್ದರೆ, ಮನುಷ್ಯರಾಗಿರುತ್ತಾರೆ ಮತ್ತು ಜನಪರವಾಗಿರುತ್ತಾರೆ. ಸರ್ಕಾರಗಳು ನಡೆಸುವ ಜನಸ್ಪಂದನ ಕಾರ್ಯಕ್ರಮದ ಮೂಲ ಆಶಯ ಹುಡುಕಿದ್ದು ಬಸವಣ್ಣ. ಆಡಳಿತ ಸ್ಪಷ್ಟ ರೂಪ ನೀಡಿದವರು ಬಸವಣ್ಣ. ಆತ್ಮಕಲ್ಯಾಣದಷ್ಟು, ಲೋಕಕಲ್ಯಾಣಕ್ಕೆ ಒತ್ತು ನೀಡಿದ್ದರಿಂದ ಬಸವಾದಿ ಶರಣರು ಸಾವಿರಾರು ವರ್ಷವಾದರೂ ಪ್ರಸ್ತುತರಾಗುತ್ತಾರೆ. ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ ಒಂದು ವಚನ ಇಡೀ ಜಗತ್ತಿಗೆ ನೀಡಿದ ಸಂವಿಧಾನ ಎಂದು ಹೇಳಿದರು.ಈ ವೇಳೆ ಡಾ.ಬಸವರಾಜ ಸಾದರ ಅವರ ‘ಕಾಯಕಾರ್ಥ ಕ್ರಾಂತಿ’ ಪುಸಕ್ತ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ರುವಾರಿಗಳಾದ ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದ ಸ್ವಾಮಿ, ಎಐಸಿಸಿ ಸದಸ್ಯ ಬಿ.ಎಂ.ಸಂದೀಪ್, ಸಿಡಿಎ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಕಾಂಗ್ರೆಸ್ ಮುಖಂಡ ಎಂ.ಎಲ್ ಮೂರ್ತಿ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ,ಮಾಜಿ ಸಚಿವ ಬಿ.ಬಿ.ಲಿಂಗಯ್ಯ, ಸಾಹಿತಿ ಬಸವರಾಜ ಸಾದರ, ಬಿಜೆಪಿ ಮುಖಂಡ ಕಲ್ಮಡಪ್ಪ, ಪೂಚಂತೆ ಪ್ರತಿಷ್ಠಾನದ ಸದಸ್ಯ ರುದ್ರಸ್ವಾಮಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವೀಶ್ ಕ್ಯಾತನಬೀಡು, ಸುಶೀಲಾ ಸೋಮಶೇಖರ್ ಮೊದಲಾದವರಿದ್ದರು.