ಕನ್ನಡಪ್ರಭ ವಾರ್ತೆ ಕೋಲಾರದೇಶದ ಮನೆಗಳನ್ನು ವರ್ಣಮಯಗೊಳಿಸುವ ಬಣ್ಣದ ಕಾರ್ಮಿಕರ ಮನೆಗಳಲ್ಲಿ ಇನ್ನೂ ಅಂಧಕಾರವಿದ್ದು, ಅವರನ್ನು ಸಂಘಟಿಸುವ ಮೂಲಕ ಕೇಂದ್ರ, ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಅವರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಕರೆ ನೀಡಿದರು.ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ಬಣ್ಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ೨೦ನೇ ವಾರ್ಷಿಕೋತ್ಸವ ಹಾಗೂ ಸಂಘದ ಹಿರಿಯರನ್ನು ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕೇಂದ್ರದ ಯೋಜನೆ ಬಳಿಸಿಕೊಳ್ಳಿ
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಪಿಎಂ ಸ್ವನಿಧಿ ಯೋಜನೆ, ವಿಶ್ವಕರ್ಮ ಕೌಶಲ್ಯ ತರಬೇತಿ ಯೋಜನೆ, ವಿಮೆ ಸೌಲಭ್ಯ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದೆ, ಮೊದಲು ಗುರುತಿನ ಚೀಟಿ ಇ-ಶ್ರಮ ಕಾರ್ಡ್ ಮಾಡಿಸಿಕೊಂಡು ಸೌಲಭ್ಯಗಳನ್ನು ಪಡೆಯಿರಿ. ಕೈಗಾರಿಕೆ ವಲಯ ಮಾತ್ರವಲ್ಲ, ಅಸಂಘಟಿತ ಕಾರ್ಮಿಕರಿಗೂ ಇಎಸ್ಐ ಆಸ್ಪತ್ರೆ ಸೌಲಭ್ಯಗಳಿದ್ದು, ಅದನ್ನು ಬಳಸಿಕೊಳ್ಳಿ, ಕೇಂದ್ರ ಸರ್ಕಾರ ಆಸ್ಪತ್ರೆಗಾಗಿ ೧೦೦ ಕೋಟಿ ಬಿಡುಗಡೆ ಮಾಡಿದೆ, ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ೫.೫ ಎಕರೆ ಜಾಗ ಮೀಸಲಿಟ್ಟಿದ್ದೇವೆ ಎಂದು ತಿಳಿಸಿದರು.ಇಂದಿರಾ ಕ್ಯಾಂಟೀನ್ಗೆ ಸೆಸ್ ಹಣ ರಾಜ್ಯ ಸರ್ಕಾರ ಕಟ್ಟಡ ನಿರ್ಮಾಣ ತೆರಿಗೆಯಲ್ಲಿ ಪಡೆಯುವ ಕಾರ್ಮಿಕರ ಸೆಸ್ ಹಣ ಇಂದಿರಾ ಕ್ಯಾಂಟೀನ್ಗೆ ಬಳಸುತ್ತಿದೆ, ಇದರಿಂದಾಗಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ, ವಿದ್ಯಾರ್ಥಿ ವೇತನ ನೀಡದೇ ವಂಚಿಸುತ್ತಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಬೇಕಾದ ಸಾವಿರಾರು ಕೋಟಿ ಸೆಸ್ ಹಣ ದುರ್ಬಳಕೆಯಾಗುತ್ತಿದೆ, ಇಂತಹ ಅನ್ಯಾಯ ಪ್ರಶ್ನಿಸುವ ಶಕ್ತಿ ಪಡೆದುಕೊಳ್ಳಿ, ಬಡವರ ನೆರವಿಗೆ ಯಾರೂ ಬರಲ್ಲ ನೀವೇ ಒಗ್ಗಟ್ಟಾಗಬೇಕು ಎಂದರು.
ರಾಜ್ಯ ಸರ್ಕಾರದ ಆರ್ಥಿಕ ನೀತಿಯಿಂದಾಗಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಕಳೆದ ೭ ತಿಂಗಳಿಂದ ಸಂಬಳ ನೀಡಿಲ್ಲ ಎಂದು ಮಾಜಿ ಸಂಸದ ಮುನಿಸ್ವಾಮಿ ಆರೋಪಿಸಿ, ಕಾರ್ಮಿಕರ ಹಿತ ಕಾಯುವಲ್ಲಿ ವಿಫಲವಾಗಿದೆ, ಕಳೆದ ಆರು ತಿಂಗಳಿಂದ ಕನ್ನಡ ಸಂಸ್ಕೃತಿ ಇಲಾಖೆಯ ಕಲಾವಿದರಿಗೆ ಹಣ ನೀಡಿಲ್ಲ ಎಂದರು.‘ಜಲಾಗ್ರಹ’ ಪ್ರತಿಭಟನೆ
ನಗರಸಭೆ ಮಾಜಿ ಉಪಾಧ್ಯಕ್ಷ ವಿ.ಕೆ.ರಾಜೇಶ್, ಜಿಲ್ಲೆಯ ಶುದ್ಧ ಕುಡಿಯುವ ನೀರಿಲ್ಲದೆ ಜನತೆ ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. ಶುದ್ದ ನೀರಿಗಾಗಿ ತೆಲಂಗಣ ಮಾದರಿ ಹೋರಾಟ ರೂಪಿಸಲು ‘ಜಲಾಗ್ರಹ’ ಪ್ರತಿಭಟನೆ ರೂಪಿಸಲಾಗಿದ್ದು, ಸಹಕಾರ ನೀಡಿ ಎಂದರು. ಇದೇ ಸಂದರ್ಭದಲ್ಲಿ ಹಿರಿಯ ಬಣ್ಣ ಕಾರ್ಮಿಕರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಪ್ರವೀಣ್ ಗೌಡ, ಬಣ್ಣ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ನಾಗೇಶ್, ಅಪ್ಪಿನಾರಾಯಣಸ್ವಾಮಿ, ಕಾಡುಗುರು ನಾಗಭೂಷಣ್, ವಂಶೋಧಯ ಆಸ್ಪತ್ರೆಯ ನಾಗೇಶ್, ವಕೀಲರ ಸಂಘದ ಉಪಾಧ್ಯಕ್ಷ ಸುಬ್ರಮಣಿ, ಲಯನ್ಸ್ ಕ್ಲಬ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಶಿವಶೇಖರ್, ಕೆ.ಆರ್.ಎನ್ ಎಂಟರ್ ಪ್ರೈಸಸ್ನ ಮುರಳಿ, ಡಾ.ಚೇತನ, ರಾಜ್ ಕುಮಾರ್, ಯಶವಂತ್ ಇದ್ದರು. ಈನೆಲ ಈಜಲ ವೆಂಕಟಾಚಲಪತಿ ಪ್ರಾರ್ಥಿಸಿದರು.