ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಬೆಳೆಗಾರರ ನಡುವೆ ಸರ್ಕಾರದ ತಾರತಮ್ಯ ಸರಿಯಲ್ಲ: ಕೆ.ಎಂ. ದಿನೇಶ್

KannadaprabhaNewsNetwork | Updated : Jun 13 2025, 02:24 AM IST

ಬೆಳೆಗಾರರ ನಡುವೆ ಸರ್ಕಾರದ ತಾರತಮ್ಯ ಸರಿಯಲ್ಲ ಎಂದು ಕೆ.ಎಂ. ದಿನೇಶ್‌ ಹೇಳಿದರು. ಅವರು ತಾಲೂಕು ಬೆಳೆಗಾರರ ಸಂಘದ ಸಭೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಕಾಫಿ ಬೆಳೆಗಾರರಿಗೆ 10 ಹೆಚ್‌ಪಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವಂತೆ ಹಲವು ಬಾರಿ ಮನವಿ ಸಲ್ಲಿಸಿ, ಪ್ರತಿಭಟನೆ ಮಾಡಿದ್ದರೂ ಈವರೆಗೆ ಸರ್ಕಾರ ಉಚಿತ ವಿದ್ಯುತ್ ನೀಡುವ ಬಗ್ಗೆ ಸ್ಪಷ್ಟ ಆದೇಶ ಹೊರಡಿಸಿಲ್ಲ. ಬೆಳೆಗಾರರ ನಡುವೆ ಸರ್ಕಾರದ ತಾರತಮ್ಯ ಸರಿಯಲ್ಲ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್ ಹೇಳಿದರು.

ಇಲ್ಲಿನ ಒಕ್ಕಲಿಗರ ಸಮುದಾಯ ಭವನದ ಶ್ರೀಗಂಧ ಸಭಾಂಗಣದಲ್ಲಿ ಕರ್ನಾಟಕ ಗ್ರೋವರ್ಸ್ ಅಸೋಸಿಯೇಷನ್ (ಕೆಜಿಎಫ್) ಹಾಗೂ ಸೋಮವಾರಪೇಟೆ ತಾಲೂಕು ಬೆಳೆಗಾರರ ಸಂಘದ ಸಭೆಯಲ್ಲಿ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಹಳಸೆ ಶಿವಣ್ಣ ಅವರು, ಕಳೆದ ಬಾರಿ ಚಿಕ್ಕಮಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಬೆಳೆಗಾರರ ಸಾಕಷ್ಟು ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಆನೆ ಮಾನವ ಸಂಘರ್ಷ, ಅರಣ್ಯ ಇಲಾಖೆಯಿಂದ ಆಗುತ್ತಿರುವ ಸಮಸ್ಯೆ, ಡೀಮ್ಡ್ ಫಾರೆಸ್ಟ್, ಸರ್ಕಾರಿ ಭೂಮಿ ಗುತ್ತಿಗೆ ಕಾಲಾವಧಿ ವಿಸ್ತರಣೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಬೆಳಕು ಹರಿಸಲಾಗಿದೆ ಎಂದರು.

ಸಂಘಟನೆಯ ಪ್ರಯತ್ನದ ಫಲವಾಗಿ ಒತ್ತುವರಿ ಭೂಮಿಯನ್ನು ಗುತ್ತಿಗೆ ನೀಡುವ ಸಂಬಂಧ ಅರ್ಜಿ ಸ್ವೀಕರಿಸುವ ದಿನಾಂಕವನ್ನು ಜುಲೈ 7ರವರೆಗೆ ವಿಸ್ತರಿಸಲಾಗಿದೆ. ಬೆಳೆಗಾರರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಶಿವಣ್ಣ ತಿಳಿಸಿದರು.ಕೆಜಿಎಫ್ ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ಈ ಬಗ್ಗೆ ಸಂಬಂಧಿಸಿದ ಇಲಾಖಾ ಸಚಿವ ಕೆ.ಜೆ. ಜಾರ್ಜ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಹಲವಷ್ಟು ಬೆಳೆಗಾರರು ಬಾಕಿ ಮೊತ್ತವನ್ನು ಪಾವತಿಸಿ, ಸರ್ಕಾರದ ಡಿಬಿಟಿ ಯೋಜನೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಉಳಿದ ಬೆಳೆಗಾರರ ಬಾಕಿಯನ್ನು ಮನ್ನಾ ಮಾಡಿದರೆ ಸರಿಯಾಗುವುದಿಲ್ಲ. ಎಲ್ಲರೂ ಬಾಕಿ ಹಣವನ್ನು ಪಾವತಿಸಿ, ಡಿಬಿಟಿ ಮೂಲಕ ನೋಂದಾವಣೆ ಮಾಡಿಕೊಳ್ಳಬೇಕು. ನಂತರ ಬೆಳೆಗಾರರ ಖಾತೆಗೆ ಹಣವನ್ನು ವಾಪಸ್ ಹಾಕಲಾಗುವುದು ಎಂದು ಸಚಿವರು ತಿಳಿಸಿದ್ದಾಗಿ ಹೇಳಿದರು.

ವಿದ್ಯುತ್ ಬಿಲ್ ಬಾಕಿ ಉಳಿಸಿಕೊಳ್ಳದೇ ಇರುವ ಬೆಳೆಗಾರರು ಡಿಬಿಟಿ ಯೋಜನೆಯಡಿ ಅರ್ಜಿ ಹಾಕಲಿ. ಉಳಿದವರ ಬೇಡಿಕೆಗಳ ಬಗ್ಗೆ ನಂತರ ಹೋರಾಟ ರೂಪಿಸುವ ಈ ಬಗ್ಗೆ ಸಂಘದಿಂದ ಸಚಿವರಿಗೆ ಪತ್ರ ಬರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪಾಧ್ಯಕ್ಷ ನಾಗರಾಜ್ ಹೇಳಿದರು.ಸೋಮವಾರಪೇಟೆ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಬೆಳೆಗಾರರು ಎದುರಿಸುತ್ತಿರುವ ಆನೆ ಮಾನವ ಸಂಘರ್ಷ, ಸಿ ಮತ್ತು ಡಿ ಜಾಗ ಸಮಸ್ಯೆ, ಅರಣ್ಯ ಇಲಾಖೆಯ ಒತ್ತುವರಿ ತೆರವು, ಸೆಕ್ಷನ್-4, 10 ಹೆಚ್.ಪಿ. ಉಚಿತ ವಿದ್ಯುತ್ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಲು ಕೆಜಿಎಫ್‌ನಿಂದ ಅಗತ್ಯ ಕ್ರಮ ಕೈಗೊಳ್ಳಬೇಕೆಂಬ ಮನವಿಯನ್ನು ಸೋಮವಾರಪೇಟೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ. ಲವ ಅವರು ರಾಜ್ಯ ಸಂಘಕ್ಕೆ ಸಲ್ಲಿಸಿದರು.ಸಭೆಯಲ್ಲಿ ಮಾಜಿ ಎಂಎಲ್‌ಸಿ ಎಸ್.ಜಿ. ಮೇದಪ್ಪ, ಕೆಜಿಎಫ್ ಪ್ರಧಾನ ಕಾರ್ಯದರ್ಶಿ ಸುರೇಂದ್ರ, ಉಪಾಧ್ಯಕ್ಷ ಸಿ.ಎಸ್. ಸುರೇಶ್, ಖಜಾಂಚಿ ಎಂ.ಕೆ. ಸುಂದರೇಶ್, ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ತಾಲೂಕು ಬೆಳೆಗಾರರ ಸಂಘದ ಪದಾಧಿಕಾರಿಗಳಾದ ಬಸಪ್ಪ ಸೇರಿದಂತೆ ಶನಿವಾರಸಂತೆ, ಚಿಕ್ಕಮಗಳೂರು, ಮೂಡಿಗೆರೆ, ಹೆತ್ತೂರು, ಯಸಳೂರು ಭಾಗದ ಬೆಳೆಗಾರರು ಭಾಗವಹಿಸಿದ್ದರು.