ಕಲಗಾರು ಲಕ್ಷ್ಮೀನಾರಾಯಣ ಹೆಗಡೆ
ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭಗೊಂಡು ಎರಡು ತಿಂಗಳು ಕಳೆಯುತ್ತಾ ಬಂದರೂ ಸಾಗರ ತಾಲೂಕು ಭಾಗದ ಹಲವು ಶಾಲೆಯ 2 ರಿಂದ 9ನೇ ತರಗತಿವರೆಗೆ ಹೊಸದಾಗಿ ದಾಖಲಾದ ಮಕ್ಕಳಿಗೆ ಪಠ್ಯ ಪುಸ್ತಕ ನೀಡಲು ಶಿಕ್ಷಣ ಇಲಾಖೆ ವಿಫಲವಾಗಿದೆ.
ಶಾಲಾ ಮಕ್ಕಳಿಗೆ ಹಲವು ಭಾಗ್ಯಗಳನ್ನು ನೀಡಿರುವ ರಾಜ್ಯ ಸರ್ಕಾರ ಕಳೆದ ಎರಡು ದಶಕಗಳಿಂದ ಯಾವ ಮಾನದಂಡವನ್ನೂ ಇಟ್ಟುಕೊಳ್ಳದೆ ಶಾಲಾ ಪ್ರಾರಂಭದ ದಿನದಂದೇ ಎಲ್ಲಾ ತರಗತಿಯ ಮಕ್ಕಳಿಗೂ ಉಚಿತ ಪಠ್ಯಪುಸ್ತಕವನ್ನು ಪೂರೈಸುತ್ತಿದೆ. ರಾಜ್ಯ ಪಠ್ಯ ಪುಸ್ತಕ ಸಂಘವು ಪಠ್ಯ ಪುಸ್ತಕ ವಿತರಿಸುವ ಹೊಣೆ ಹೊಂದಿದ್ದು , ಪ್ರತಿವರ್ಷವೂ ಒಂದಿಲ್ಲೊಂದು ತೊಡಕು ಮಾಡುತ್ತಿದೆ ಎಂಬ ಆಪಾದನೆ ಕೇಳಿಬರುತ್ತಿದೆ.ಈ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮದ ಕಲಿಕೆ ಪ್ರಾರಂಭಗೊಂಡಿದೆ. ಹಲವು ಮಕ್ಕಳು ಮಾಧ್ಯಮವನ್ನು ಬದಲಿಸಿಕೊಂಡಿದ್ದಾರೆ. ಖಾಸಗಿ ಶಾಲೆಯಲ್ಲಿ ದಾಖಲೆಯಾಗಿದ್ದ ಮಕ್ಕಳೂ ಸರ್ಕಾರಿ ಶಾಲೆಯತ್ತ ಮುಖ ಮಾಡಿದ್ದಾರೆ. ಇದು ಉತ್ತಮ ಬೆಳವಣಿಗೆಯಾಗಿದೆ. ಆದರೆ, ಶಾಲೆ ಆರಂಭವಾಗಿ ಎರಡು ತಿಂಗಳು ಕಳೆಯುತ್ತಾ ಬಂದರೂ ಹೊಸ ದಾಖಲಾತಿ ಆದ ಶಾಲಾ ಮಕ್ಕಳಿಗೆ ಇನ್ನೂ ಪಠ್ಯಪುಸ್ತಕ ಕೈಸೇರಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ:
ಪ್ರಸ್ತುತ ಸಾಗರ ತಾಲೂಕಿನಲ್ಲಿ ಸರ್ಕಾರಿ ಶಾಲೆ 311, ಅನುದಾನ ಸಹಿತ 25 ಶಾಲೆ, ಅನುದಾನ ರಹಿತ 41 ಶಾಲೆ, 9 ಮೊರಾರ್ಜಿ,ಅಂಬೇಡ್ಕರ್ ವಸತಿ ಶಾಲೆಗಳು ಸೇರಿದಂತೆ ಒಟ್ಟು 386 ಶಾಲೆಗಳಿವೆ. ಈ ಶಾಲೆಗಳಲ್ಲಿ ಒಂದು ಮತ್ತು 10ನೇ ತರಗತಿಗಳಿಗೆ ಪುಸ್ತಕಗಳ ಕೊರತೆ ಇಲ್ಲ. 2ನೇ ತರಗತಿಗೆ 64,3ನೇ ತರಗತಿಗೆ 82, 4 ನೇ ತರಗತಿಗೆ 55, 5ನೇ ತರಗತಿಗೆ 58, 6ನೇ ತರಗತಿಗೆ 328, (ಇಂಗ್ಲಿಷ್ ಮೀಡಿಯಂ, 7ನೇ ತರಗತಿಗೆ 223 (ಇಂಗ್ಲಿಷ್ ಮೀಡಿಯಂ) 9ನೇ ತರಗತಿಗೆ ಪಠ್ಯ ಪುಸ್ತಕ ಕೊರತೆ ಇದೆ. ಸಾಗರ ಬಿಇಒ ರವರು ಡಿಡಿಪಿಐ ಕಚೇರಿಗೆ ಪುಸ್ತಕ ಪೂರೈಕೆಗೆ ಪ್ರಸ್ತಾವನೆ ಸಲ್ಲಿಸಿ, ಪೂರೈಕೆಗೆ ಕಾಯುತ್ತಿದ್ದಾರೆ ಎನ್ನಲಾಗಿದೆ.
ಸರ್ಕಾರ ಗುಣಮಟ್ಟದ ಕಲಿಕೆಯನ್ನು ಸರ್ಕಾರಿ ಶಾಲೆಯಲ್ಲಿ ಕಲ್ಪಿಸಿದೆ. ಶಿಕ್ಷಕರ ಕೊರತೆ ಇದ್ದರೂ ಕರ್ತವ್ಯ ನಿರತ ಶಿಕ್ಷಕರು ಉತ್ತಮ ಪಾಠ ಪ್ರವಚನ ನೀಡುತ್ತಿದ್ದಾರೆ. ಖಾಸಗಿ ಶಾಲೆಯತ್ತ ಮುಖ ಮಾಡಿದ್ದ ಪೋಷಕರೂ ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಆಸಕ್ತರಾಗಿದ್ದಾರೆ. ಆದರೆ ಅಧಿಕಾರಿಗಳ ನಡೆ ಖಾಸಗಿ ಶಾಲೆಯವರಿಗೆ ಅನೂಕೂಲ ಕಲ್ಪಿಸುವಂತಿದೆ.
------------------------
-ಮಂಜುನಾಥ ಡಿಡಿಪಿಐ ಶಿವಮೊಗ್ಗ ಜಿಲ್ಲಾ.
ಶಾಲೆಗಳಲ್ಲಿನ ಹಿಂದಿನ ದಾಖಲಾತಿ ಅನುಸರಿಸಿ ಪಠ್ಯಪುಸ್ತಕ ಪೂರೈಕೆ ಆಗುತ್ತದೆ.ಈ ವರ್ಷ ಇಂಗ್ಲಿಷ್ ಮಾಧ್ಯಮ ಪ್ರಾರಂಭಗೊಂಡಿದ್ದರಿಂದ ದಾಖಲಾತಿ ಪ್ರಮಾಣ ಹೆಚ್ಚಿದೆ. ತಾಲೂಕಿನಲ್ಲಿ ಕೊರತೆ ಇರುವ ಪುಸ್ತಕಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಸರಬರಾಜು ಆಗುತ್ತದೆ.
-------------
ಪೊಟೋ: 22ಜಿಪಿಟಿ01