ಮುಂಡರಗಿ: ಸಮಾಜ ಶಿಕ್ಷಕರ ಮೇಲೆ ವಿಶ್ವಾಸ ಮತ್ತು ನಂಬಿಕೆ ಇಟ್ಟುಕೊಂಡಿದೆ, ಈ ದಿಸೆಯಲ್ಲಿ ಸರ್ಕಾರಿ ಶಾಲೆಗಳು ಮತ್ತು ಮಕ್ಕಳು ಪ್ರಗತಿ ದಾರಿಯಲ್ಲಿದ್ದು ಅವರಿಗೆ ಇನ್ನಷ್ಟು ಪ್ರೋತ್ಸಾಹ ಸಿಗುವಂತೆ ಶಿಕ್ಷಕರು ಹೆಚ್ಚು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.ಪಟ್ಟಣದ ಜ. ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಶನಿವಾರ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಶಿಕ್ಷಣಕ್ಕೆ ಅನೇಕ ಯೋಜನೆ ಜಾರಿಗೊಳಿಸುತ್ತಿದೆ, ಶಾಲಾ ಕಟ್ಟಡ ನಿರ್ಮಾಣಕ್ಕೆ ₹4.5 ಕೋಟಿ ಅನುದಾನ ದೊರೆಯುತ್ತಿದೆ. ಸರ್ಕಾರಿ ಶಾಲೆಗಳಿಗೆ ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಬರುತ್ತಿರುವದರಿಂದ ಅವರ ಬದುಕಿಗೆ ದಾರಿದೀಪವಾಗುವದು ಶಿಕ್ಷಕರು ಮಾತ್ರ ಎಂದರು.
ಸಾನ್ನಿಧ್ಯ ವಹಿಸಿದ್ದ ಜ. ಡಾ.ಅನ್ನದಾನೀಶ್ವರ ಸ್ವಾಮಿಗಳು ಮಾತನಾಡಿ, ಪ್ರಸಕ್ತ ವರ್ಷದಿಂದ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸುವದಕ್ಕಾಗಿ ₹1ಲಕ್ಷ ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿ ಹಣದಲ್ಲಿ ಅನ್ನದಾನೀಶ್ವರ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ, ಮಕ್ಕಳಿಗೆ ಶಿಕ್ಷಕರು ಸೌಜನ್ಯ ಮತ್ತು ಶಿಸ್ತು ಕಲಿಸಿದಾಗ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಕಲಿಕೆಗೆ ಒತ್ತು ನೀಡಬೇಕು ಎಂದರು.
ಈ ವೇಳೆ ಧಾರವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ರಮೇಶ ಸಂಕರಡ್ಡಿ ಉಪನ್ಯಾಸ ನೀಡಿದರು. ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಸವರಾಜ ಉಮರಾಣಿ ಮಾತನಾಡಿದರು. ಪ್ರಸಕ್ತ ವರ್ಷದ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲೆ, ಅಂಗನವಾಡಿ ಶಿಕ್ಷಕರನ್ನು ನಿವೃತ್ತ ಶಿಕ್ಷಕರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.ಅನ್ನದಾನೀಶ್ವರ ಆದರ್ಶ ಶಿಕ್ಷಕ ಪ್ರಶಸ್ತಿಗೆ ಬಾಜನರಾದ ಬಸವರಾಜ ಹೂಗಾರ, ಎಸ್.ಆರ್. ರಿತ್ತಿ ಅವರನ್ನು ಸನ್ಮಾನಿಸಲಾಯಿತು.
ತಹಸೀಲ್ದಾರ ಯರಿಸ್ವಾಮಿ, ಇಒ ವಿಶ್ವನಾಥ ಹೊಸಮನಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಕೆ.ವಿ. ಹಂಚಿನಾಳ, ಡಿ.ಡಿ. ಮೋರನಾಳ, ಹೇಮಂತಗೌಡ ಪಾಟೀಲ, ಶೋಭಾ ಮೇಟಿ, ಹೇಮಗಿರೀಶ ಹಾವಿನಾಳ, ಕೊಟ್ರೇಶ ಅಂಗಡಿ, ಕುಮಾರಸ್ವಾಮಿ ಹಿರೇಮಠ, ಚಿನ್ನಪ್ಪ ವಡ್ಡಟ್ಟಿ, ಜ್ಯೋತಿ ಹಾನಗಲ್, ನಾಗರಾಜ ಹಳ್ಳಿಕೇರಿ, ಶಿವಕುಮಾರ ಸಜ್ಜನರ ಕೊನೇರಿ, ಸವಿತಾ ಸಾಸ್ವಿಹಳ್ಳಿ ಶಿಕ್ಷಕರ ಸಂಘದ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಜಿ.ಎಸ್. ಅಣ್ಣಿಗೇರಿ ಸ್ವಾಗತಿಸಿದರು. ಬಿಇಒ ಎಚ್.ಎಂ. ಪಡ್ನೇಶಿ ಪ್ರಾಸ್ತಾವಿಕ ಮಾತನಾಡಿದರು. ಡಿ.ಎಸ್. ಬಸೇಗೌಡರ, ಹನುಮರೆಡ್ಡಿ ಮೇಟಿ ನಿರೂಪಿಸಿದರು.