ಕುರುಗೋಡು: ರಾಜ್ಯದಲ್ಲಿ ತೀವ್ರ ಬರಗಾರ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಗಿ ಮುಗಿಲಿನತ್ತ ರೈತರು ಮುಖಮಾಡಿದ್ದಾರೆ. ಈ ವರ್ಷ ಎಲ್ಲ ರೈತರ ಬೆಳೆವಿಮೆ ಮೊತ್ತವನ್ನು ಸರ್ಕಾರವೇ ಭರಿಸಬೇಕು ಎಂದು ರೈತರು ಅಧಿಕಾರಿಗಳ ಮುಂದೆ ಅಲವತ್ತುಕೊಂಡರು.
ಸಹಾಯಕ ಕೃಷಿ ನಿರ್ದೇಶಕ ಗರ್ಜೆಪ್ಪ ಅವರು ಬೆಳೆ ವಿಮೆ ಕುರಿತು ಮಾಹಿತಿ ನೀಡುವ ಸಂದರ್ಭದಲ್ಲಿ ಬೆಳೆ ವಿಮೆ ಪಾವತಿಸಿದರೂ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ. ವಿಮಾ ಕಂಪನಿಗಳ ನಿಯಮಗಳು ರೈತರ ಸಂಕಷ್ಟಕ್ಕೆ ಸ್ಪಂದಿಸುವುದಿಲ್ಲ. ಕೃಷಿ ಇಲಾಖೆ ಮೂಲಕ ಎಲ್ಲ ರೈತರ ಬೆಳೆವಿಮೆ ಮೊತ್ತವನ್ನು ಸರ್ಕಾರ ಪಾವತಿಸಬೇಕು ಎಂದು ಒತ್ತಾಯಿಸಲು ಮುಂದಾದಾಗ ಸಭೆಯಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಯಿತು.
ಪರಿಸ್ಥಿತಿಯ ತೀವ್ರತೆಯನ್ನು ಅರಿತ ಉಪ ಕೃಷಿ ನಿರ್ದೇಶಕ ಮಂಜುನಾಥ ಅವರು ಮಧ್ಯಪ್ರವೇಶಿಸಿ ಶೇ 90ರಷ್ಟು ಪ್ರಮಾಣದಲ್ಲಿ ಬೆಳೆ ವಿಮೆ ಹಣ ಸರ್ಕಾರವೇ ಭರಿಸುತ್ತದೆ. ಕೇವಲ ಶೇ10ರಷ್ಟು ಮಾತ್ರ ರೈತರು ಪಾವತಿಸುತ್ತಿದ್ದಾರೆ ಎಂದು ಮಾಹಿತಿ ನೀಡುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು.ಮೊದಲು ಬರಗಾಲ, ಅತಿವಷ್ಟಿ, ಅನಾವೃಷ್ಟಿ ಪರಿಣಾಮ ವಿಮೆ ಜಿಲ್ಲಾ ವ್ಯಾಪ್ತಿಯಲ್ಲಿ ಪರಿಗಣಿಸಲಾಗುತ್ತಿತ್ತು. ಈಗ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಷ್ಟವಾದರೆ ಪರಿಗಣಿಸಲಾಗುತ್ತದೆ. ರೈತರ ಹಿತದೃಷ್ಟಿಯಿಂದ ಬೆಳೆ ವಿಮೆ ಮಾಡಿಸುವುದು ಒಳಿತು ಎಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಅಲ್ಪಾವಧಿ ಮತ್ತು ಕಡಿಮೆ ನೀರು ಬಯಸುವ ಸೂರ್ಯಕಾಂತಿ ಮತ್ತು ಸಿರಿಧಾನ್ಯಗಳನ್ನು ಬೆಳೆಯಬೇಕು. ಹೆಚ್ಚು ನೀರು, ಕ್ರಿಮಿನಾಶಕ ಮತ್ತು ರಸಗೊಬ್ಬರ ಬಳಸದೆ ಹಸಿರೆಲೆ ಗೊಬ್ಬರ, ಕೊಟ್ಟಿಗೆ ಗೊಬ್ಬರ ಬಳಕೆ ಮಾಡಿ ಭೂಮಿಯ ಪಲವತ್ತತೆ ಕಾಪಾಡಬೇಕು ಎಂದು ಸಲಹೆ ನೀಡಿದರು.