ಕೆನರಾ ಪ್ರಿವಿಲೇಜ್ ಕಾಯ್ದೆ ಜಾರಿಗೊಳಿಸಲು ಸರ್ಕಾರ ಇಚ್ಛಾಶಕ್ತಿ ತೋರಲಿ: ಸ್ವರ್ಣವಲ್ಲೀ ಶ್ರೀ

KannadaprabhaNewsNetwork | Published : Jun 3, 2025 1:06 AM
ಒಂದು ಬೆಟ್ಟದಲ್ಲಿ ಹತ್ತಾರು ರೈತರ ಹೆಸರಿರುವುದೂ ಸಮಸ್ಯೆಗೆ ಕಾರಣವಾಗುತ್ತದೆ.

ಶಿರಸಿ: ಸರ್ಕಾರವು ಕೆನರಾ ಪ್ರಿವಿಲೇಜ್ ಕಾಯ್ದೆ ಜಾರಿಗೆಗೊಳಿಸಲು ಇಚ್ಛಾಶಕ್ತಿ ತೋರಬೇಕು ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಗ್ರಹಿಸಿದರು.ಅವರು ತಾಲೂಕಿನ ಯಡಳ್ಳಿಯಲ್ಲಿ ವೃಕ್ಷ ಲಕ್ಷ ಅಂದೋಲನ, ಯಡಳ್ಳಿ ಸೊಸೈಟಿ, ಜಿಲ್ಲಾ ಅಡಿಕೆ ಬೆಳೆಗಾರರ ಸಂಘ, ಅರಣ್ಯ ಇಲಾಖೆ ಸಹಕಾರದಲ್ಲಿ ಬೆಟ್ಟದ ಸುಸ್ಥಿರ ಅಭಿವೃದ್ಧಿ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಜಿಲ್ಲೆಯಲ್ಲಿ ಬಹುಭಾಗ ಇರುವ ಬೆಟ್ಟಗಳ ಅಭಿವೃದ್ಧಿ ಆಗಬೇಕು. ಬೆಟ್ಟ ಹಾಗೂ ತೋಟದ ವ್ಯವಸ್ಥೆ ಆಪತ್ತಿನಲ್ಲಿದೆ. ಹಿಂದಿನಿಂದ ತೋಟಕ್ಕೆ ಇಂತಹ ಬೆಟ್ಟ ವ್ಯವಸ್ಥೆ ಇದ್ದರೂ ದಾಖಲೆ ಸರಿಯಾಗಿ ಇರದ ಕಾರಣ ಸಮಸ್ಯೆ ಇದೆ. ಒಂದು ಬೆಟ್ಟದಲ್ಲಿ ಹತ್ತಾರು ರೈತರ ಹೆಸರಿರುವುದೂ ಸಮಸ್ಯೆಗೆ ಕಾರಣವಾಗುತ್ತದೆ. ಬೆಟ್ಟದ ಬಿ ಕರಾಬು ಸಮಸ್ಯೆ ಸ್ಥಳೀಯ ಶಾಸಕರ ಗಮನಕ್ಕೆ ಕೂಡ ತರಲಾಗಿದೆ ಎಂದ ಶ್ರೀಗಳು ಉತ್ತರ ಕನ್ನಡದ ನಿಜವಾದ ಅಭಿವೃದ್ಧಿ ಎಂದರೆ ಬೆಟ್ಟಗಳ ಅಭಿವೃದ್ಧಿಯೂ ಒಂದು. ಬೆಟ್ಟದ ಸಂರಕ್ಷಣೆ ಬೇಕು. ಬೆಟ್ಟದಲ್ಲಿನ ಉತ್ಪನ್ನಗಳ ಲಾಭ ಕೂಡ ಸಿಗಲಿದೆ ಎಂದರು.

ಬಳಸಿ ಬಿಸಾಕು ಚಿಂತನೆ ಬಿಡಬೇಕು. ಭವಿಷ್ಯದ ಬಗ್ಗೂ ಆಲೋಚಿಸಬೇಕು. ಯುದ್ದಕ್ಕಿಂತ ಪರಿಸರ ನಾಶ ಅತಿದೊಡ್ಡ ಸಮಸ್ಯೆಯಾಗುತ್ತದೆ. ಗ್ರೀಷ್ಮ ಋತುವಿನಲ್ಲಿ ಗಿಡ ನೆಟ್ಟರೆ ಪ್ರಕೃತಿ ಪೂಜೆಗೈದಂತೆ ಎಂದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಬೆಟ್ಟದ ಅಭಿವೃದ್ಧಿಯ ವಿಚಾರದಲ್ಲಿ ಎಲ್ಲ ರೈತರು ಮುಂದಾಗಬೇಕು. ಸವಾಲುಗಳ ಮಧ್ಯೆ ಸಾಧನೆ ಮಾಡಬೇಕಿದೆ. ಏನೂ ಆಗೋದಿಲ್ಲ ಎಂಬುದಕ್ಕಿಂತ ಏನಾದರೂ ಸಾಧಿಸಬೇಕು ಎಂಬಂತೆ ವಿಶ್ವಾಸ ಪೂರ್ಣ ಚಟುವಟಿಕೆ ನಡೆಯಬೇಕು ಎಂದರು.

ವೃಕ್ಷ ಲಕ್ಷ ಅಂದೋಲನ ಸಂಚಾಲಕ ಅನಂತ ಅಶೀಸರ ಮಾತನಾಡಿ, ಸ್ವರ್ಣವಲ್ಲೀ ಮಠದಿಂದ ೨೨ ಜನರಿಗೆ ಬೆಟ್ಟ ಅಭಿವೃದ್ಧಿ ಪ್ರಶಸ್ತಿ ನೀಡಲಾಗಿದೆ. ಬೆಟ್ಟ ಸಂರಕ್ಷಣೆಗೆ ಎಲ್ಲರಿಗೂ ಆಗಲಿದೆ. ಬೆಟ್ಟ ಹಕ್ಕು ಬಿಟ್ಟುಕೊಡುವಂತಾಗಬೇಕು. ನನ್ನ ಬೆಟ್ಟಕ್ಕೆ ಸರ್ವೆ ನಂಬರ್ ಕೊಡವೇಕು, ಬ ಕರಾಬು ತೆಗೆದುಹಾಕಬೇಕು ಎಂದರು.

ಉಪ ಅರಣ್ಯ ಸಂರಕ್ಷಣಾ ಅಧಿಕಾರ ಡಾ. ಅಜ್ಜಯ್ಯ ಮಾತನಾಡಿ, ಒಂದು ಎಕರೆ ಅಡಿಕೆ ತೋಟಕ್ಕೆ ಎಂಟು ಒಂಬತ್ತು ಎಕರೆ ಬೆಟ್ಟ ಭೂಮಿ ನೀಡಲಾಗಿದೆ. ಅದನ್ನು ಒಳ್ಳೆಯ ಆದಾಯಕ್ಕೆ ಬಳಸಿಕೊಳ್ಳಬೇಕು ಎಂದರು.

ಯಡಳ್ಳಿ ಸೊಸೈಟಿ ಅಧ್ಯಕ್ಷ ಜಿ.ಆರ್.ಹೆಗಡೆ ಬೆಳ್ಳೇಕೇರಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಶ್ರೀಧರ ಕೆರೆಕೊಪ್ಪ ಅವರನ್ನು ಗೌರವಿಸಲಾಯಿತು. ಅನಂತ ಭಟ್ಟ ಕರಸುಳ್ಳಿ ವಂದಿಸಿದರು.