ಕೊಪ್ಪದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ರಾಜ್ಯಸರ್ಕಾರದ ವಿರುದ್ಧ ನಡೆದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಕೊಪ್ಪಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡಿ ರಾಜ್ಯದ ಜನರನ್ನು ಬೀದಿಗೆ ತಂದಿದೆ. ಅಗತ್ಯವಾಗಿ ಬಳಕೆ ಯಾಗುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮೂಲಕ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿದೆ ಎಂದು ಕೊಪ್ಪ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಕೆ. ದಿನೇಶ್ ಹೊಸೂರು ಹೇಳಿದರು.ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಸೋಮವಾರ ಕೊಪ್ಪದಲ್ಲಿ ಬಿಜೆಪಿ ಯಿಂದ ಕಾಂಗ್ರೆಸ್ ರಾಜ್ಯಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದಾಗಿ ಇತರೆ ಅಗತ್ಯವಸ್ತುಗಳ ಬೆಲೆಯೂ ಏರಿಕೆಯಾಗಲಿದೆ. ತಕ್ಷಣವೇ ಬೆಲೆ ಏರಿಕೆಯನ್ನು ವಾಪಾಸು ಪಡೆಯಬೇಕೆಂದು ರಾಜ್ಯಸರ್ಕಾರವನ್ನು ಆಗ್ರಹಿಸಿದರು. ಮಂಡಲ ಬಿಜೆಪಿ ವಕ್ತಾರ ಎಚ್.ಆರ್. ಜಗದೀಶ್ ಮಾತನಾಡಿ ಇಡೀ ದೇಶದಲ್ಲಿ ಕಾಂಗ್ರೆಸ್ ಆಡಳಿತ ದಲ್ಲಿರುವ ೩ ರಾಜ್ಯಗಳಲ್ಲಿ ಮಾತ್ರ ಪೆಟ್ರೋಲ್ ಡೀಸೆಲ್ ಬೆಲೆ ೧೦೦ರ ಗಡಿ ದಾಟಿದ್ದು ಕಾಂಗ್ರೆಸ್ ಜನರ ಜೀವ ಹಿಂಡುತ್ತಿದೆ ಎಂದರು.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್ ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡಿ ಜನರ ದುಡ್ಡನ್ನು ಲೂಟಿ ಮಾಡಿ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರ ಜೇಬು ತುಂಬಿಸಲು ಹೊರಟಿದೆ. ಈ ಬೆಲೆ ಏರಿಕೆ ತಕ್ಷಣವೇ ವಾಪಾಸು ಪಡೆಯದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮಂಡಲ ಕಾರ್ಯದರ್ಶಿಗಳಾದ ಅರುಣ್ ಮತ್ತು ಬಿಷೇಜ್ ಭಟ್, ಮುಖಂಡರಾದ ಎ. ದಿವಾಕರ್, ಸಿ.ಎಚ್.ಪ್ರಕಾಶ್, ಕಾರ್ತಿಕ್, ರೇವಂತ್, ಜಯಂತ್, ಶೃತಿ ರೋಹಿತ್, ಅನುಸೂಯ ಕೃಷ್ಣಮೂರ್ತಿ, ಪದ್ಮಾವತಿ ರಮೇಶ್, ಪ.ಪಂ. ಸದಸ್ಯರಾದ ರೇಖಾ ಪ್ರಕಾಶ್, ಗಾಯತ್ರಿ ವಸಂತ್, ಗಾಯತ್ರಿ ಶೆಟ್ಟಿ, ಪದಾಧಿಕಾರಿಗಳಾದ ಉದಯ್ ಕುಮಾರ್ ಜೈನ್, ಅರುಣ್ ಶೆಣೈ, ವೆಂಕಟೇಶ್, ಯುವ ಮೋರ್ಚಾ ಅಧ್ಯಕ್ಷರು ಮತ್ತು ಸದಸ್ಯರು, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.