ಸರ್ಕಾರ ತುಂಗಭದ್ರಾ ಸಕ್ಕರೆ ಕಾರ್ಖಾನೆ ರೈತರ ಪರ: ಕಿಮ್ಮನೆ ರತ್ನಾಕರ್‌ ಹೇಳಿಕೆ

KannadaprabhaNewsNetwork | Published : Jan 2, 2024 2:15 AM

ಸಾರಾಂಶ

ಶಿವಮೊಗ್ಗದ ತುಂಗಾಭದ್ರ ಸಕ್ಕರೆ ಕಾರ್ಖಾನೆಗೆ ವಿಷಯಕ್ಕೆ ಸಂಬಂಧಿಸಿದಂತೆ ದಿನೇದಿನೆ ಗೊಂದಲದ ಹೇಳಿಕೆಗಳು ವ್ಯಕ್ತವಾಗುತ್ತಲೇ ಇವೆ. ಇದೇ ಕಾರಣಕ್ಕೆ ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಕಿಮ್ಮನೆ ರತ್ನಾಕರ್‌ ಈ ವಿಷಯವನ್ನು ಕೆಲವರು ರಾಜಕೀಯಗೊಳಿಸಲು ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಆದರೆ, ಯಾರನ್ನೂ ಒಕ್ಕಲೆಬ್ಬಿಸಲು ಬಿಡಲ್ಲ,ಕಾಂಗ್ರೆಸ್‌ ಸರ್ಕಾರ ರೈತರ ಪರವಾಗಿದೆ ಎಂದೂ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ತುಂಗಾಭದ್ರ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಹಲವು ಗೊಂದಲಗಳು ಎದ್ದಿವೆ. ಕೆಲವರು ರಾಜಕೀಯಗೊಳಿಸಲು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಸರ್ಕಾರ ರೈತರ ಪರವಾಗಿದೆ. ಯಾವುದೇ ಕಾರಣಕ್ಕೂ ಅವರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಖಾನೆ ವಿಚಾರವಾಗಿ ಎದ್ದಿರುವ ಗೊಂದಲವನ್ನು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನ ಹರಿಸಿದ್ದಾರೆ. ಸರ್ಕಾರ ಹಲವು ವರ್ಷಗಳಿಂದ ಅಲ್ಲಿ ವಾಸಿಸುತ್ತಿರುವ ಸಾಗುವಳಿ ಮಾಡುತ್ತಿರುವ ರೈತರನ್ನು, ನಿವಾಸಿಗಳನ್ನು ಹೊರಹಾಕಲು ಬಿಡುವುದಿಲ್ಲ. ಅದು ಅಷ್ಟು ಸುಲಭವೂ ಅಲ್ಲ. ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಭರವಸೆ ನೀಡಿದರು.

ಬಿಜೆಪಿ ಕೆಲವು ಮುಖಂಡರು ಈ ಬಗ್ಗೆ ಗೊಂದಲ ಹುಟ್ಟಿಸುತ್ತಿದ್ದಾರೆ. ಆಡಳಿತ ಸರ್ಕಾರಕ್ಕೆ ಪ್ರಶ್ನೆ ಕೇಳುವುದು ಸಹಜವೇ, ಅದಕ್ಕೆ ಉತ್ತರ ಕೊಡುವುದು ನಮ್ಮ ಕರ್ತವ್ಯ. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ. ಇದು ಉಹಾಪೋಹದ ಮಾತಷ್ಟೇ ಎಂದರು.

ಈಗಾಗಲೇ ಹಲವು ರೈತರಿಗೆ ಸಾಗುವಳಿ ಚೀಟಿ ನೀಡಲಾಗಿದೆ. ಮತ್ತು ಈ ಜಾಗಗಳಲ್ಲಿ ಕಾಡ ಕಚೇರಿ, ಆರ್‌ಟಿಒ ಕಚೇರಿ, ದೇವಸ್ಥಾನಗಳು, ಗ್ರಾ.ಪಂ.ಕಟ್ಟಡಗಳು, ವಾಸದ ಕಟ್ಟಡಗಳು ಇವೆ. ಇವೆಲ್ಲವನ್ನು ಕಂಪನಿಯ ಆಡಳಿತ ಮಂಡಳಿಗೆ ಕೊಡಲು ಸಾಧ್ಯವಿಲ್ಲ. ಈ ವಿಷಯ ಇನ್ನೂ ನ್ಯಾಯಾಲಯದ ಹಂತದಲ್ಲಿದೆ. ರೈತರ ಪರವಾಗಿ ಮತ್ತು ವಿರೋಧವಾಗಿ ಎರಡು ತೀರ್ಪುಗಳು ಬಂದಿವೆ. ಇದನ್ನು ನ್ಯಾಯಾಲಯದ ಗಮನಕ್ಕೆ ತರಬೇಕಾಗಿದೆ ಎಂದರು.

ಸದಾಶಿವಪುರ ಸರ್ವೆ ನಂ.ಗೆ ಸೇರಿದ ಸಾಗುವಳಿ ಭೂಮಿಯನ್ನು ಸುಮಾರು 166 ಎಕರೆ ಜಾಗವನ್ನು ಈಗಾಗಲೇ ಗ್ರ್ಯಾಂಟ್ ಮಾಡಲಾಗಿದೆ. ಆ ಜನರ ಎಲ್ಲಾ ವಿವರಗಳನ್ನು ಕಲೆ ಹಾಕಲಾಗಿದೆ. ಸುಮಾರು 220 ಜನರು ತಮ್ಮ ವಿವರಗಳನ್ನು ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಒಟ್ಟಾರೆ ಇಲ್ಲಿಯ ಜನರನ್ನು ಒಕ್ಕಲೆಬ್ಬಿಸಲು ಆಗುವುದಿಲ್ಲ ಎಂದು ಹೇಳಿದರು.

ಕಾರ್ಖಾನೆ ಪ್ರಾರಂಭವಾದಾಗ ಅವರಿಗೆ ಆಗಿನ ಸರ್ಕಾರ ಸುಮಾರು 50 ಎಕರೆ ಜಾಗ ಕಾರ್ಖಾನೆ ಕಟ್ಟಲು ನೀಡಿತ್ತು. ಹಾಗೆಯೇ ಕಬ್ಬು ಬೆಳೆಯಲು 1200 ಎಕರೆ ಲೀಜ್‌ಗೆ ಕೊಡಲಾಗಿತ್ತು. ಈ ಲೀಜ್ ಅವಧಿ ಕೂಡ ಮುಗಿದಿದೆ. ಯಾವುದೇ ಸರ್ಕಾರವಾಗಲೀ ಒಂದು ಕಂಪನಿಗೆ 50 ಎಕರೆ ಮೇಲೆ ಕೊಡಲು ಬರುವುದೇ ಇಲ್ಲ. ಈಗ ಸಕ್ಕರೆ ಕಾರ್ಖಾನೆಯವರು ಮದ್ರಾಸ್ ಕೋರ್ಟಿನ ತೀರ್ಪಿನ ಅನ್ವಯ ಇದು ನಮ್ಮದು ಎಂದು ಹೇಳುತ್ತಾರೆ. ಆದರೆ, ಇದಕ್ಕೆ ವಿರುದ್ಧವಾದ ತೀರ್ಪು ಕೂಡ ಇದೆ. ಈ ತೀರ್ಪುಗಳು ಕೂಡ ನ್ಯಾಯಾಲಯ ಗಮನಕ್ಕೆ ತರಬೇಕಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್.ಪ್ರಸನ್ನಕುಮಾರ್, ಎನ್.ರಮೇಶ್, ಎಸ್.ಪಿ. ದಿನೇಶ್, ಚಂದ್ರಭೂಪಾಲ್, ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್, ದೇವೇಂದ್ರಪ್ಪ, ಧರ್ಮರಾಜ್, ವಿಜಯಕುಮಾರ್ ಮತ್ತಿತರರು ಇದ್ದರು.

- - - -1ಎಸ್‌ಎಂಜಿಕೆಪಿ05: ಕಿಮ್ಮನೆ ರತ್ನಾಕರ್‌

Share this article