ಮೂಲ ಸೌಕರ್ಯಗಳಿಗಾಗಿ ಆಗ್ರಹಿಸಿ ಸರ್ಕಾರಿ ಉರ್ದು ಶಾಲೆಗೆ ಬೀಗ

KannadaprabhaNewsNetwork |  
Published : Dec 06, 2024, 08:57 AM IST
ಮ | Kannada Prabha

ಸಾರಾಂಶ

ಶೌಚಾಲಯ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳಿಗಾಗಿ ಆಗ್ರಹಿಸಿ ಕಾಗಿನೆಲೆ ಗ್ರಾಮಸ್ಥರು ಸರಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಗೆ (ಡಿಪಿಇಪಿ) ಬೀಗ ಜಡಿದು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ ಘಟನೆ ಗುರುವಾರ ನಡೆಯಿತು.

ಬ್ಯಾಡಗಿ: ಶೌಚಾಲಯ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳಿಗಾಗಿ ಆಗ್ರಹಿಸಿ ಕಾಗಿನೆಲೆ ಗ್ರಾಮಸ್ಥರು ಸರಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಗೆ (ಡಿಪಿಇಪಿ) ಬೀಗ ಜಡಿದು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ ಘಟನೆ ಗುರುವಾರ ನಡೆಯಿತು.

ಬೆಳಗ್ಗೆ ರೈತ ಮುಖಂಡ ಎಂ.ಎನ್. ನಾಯಕ್ ನೇತೃತ್ವದಲ್ಲಿ ಶಾಲೆಗೆ ತೆರಳಿದ ಪೋಷಕರು ಎಸ್.ಡಿ.ಎಂ.ಸಿ.ಮಾಜಿ ಅಧ್ಯಕ್ಷರು ಶಾಲೆಗೆ ಬೀಗ ಜಡಿದು ಮಕ್ಕಳೊಂದಿಗೆ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಎಂ.ಎನ್.ನಾಯಕ, ಕಳೆದೊಂದು ವರ್ಷದ ಹಿಂದೆ ನಿರ್ಮಿಸಿದ 150 ಮಕ್ಕಳಿರುವ ಶಾಲೆಯಲ್ಲಿ ಮಕ್ಕಳಿಗೆ ಶೌಚಕ್ಕೆ ಹೋಗಲು ಶೌಚಾಯಲವಿಲ್ಲ. ಇದರಿಂದ ಮಕ್ಕಳು ಶೌಚಕ್ಕೆ ತೆರಳಲು ಜಾಗವಿಲ್ಲದೇ ನರಕಯಾತನೆ ಅನುಭವಿಸುತ್ತಿದ್ದಾರೆ, ಮಕ್ಕಳಿಗೆ ಶೌಚಕ್ಕಾಗಿ ಮನೆಗೆ ಹೋಗಬೇಕಾದ ಅನಿವಾರ‍್ಯತೆ ಎದುರಾಗಿದೆ, ಒಮ್ಮೆ ಮನೆಗೆ ತೆರಳಿದ ಮಕ್ಕಳು ಪೋಷಕರು ಒತ್ತಡಕ್ಕೆ ಕೆಲಸದಲ್ಲಿ ನಿರತರಾಗಿ ಶಾಲೆಗೆ ಬರುವುದು ಅನುಮಾನ, ಅಷ್ಟಕ್ಕೂ ಶಾಲೆಯಲ್ಲಿನ ಮಹಿಳಾ ಶಿಕ್ಷಕಿಯರಿಗೂ ಕೂಡಾ ಶೌಚಾಲಯ ಇಲ್ಲದಂತಾಗಿದ್ದು, ಬೇರೊಬ್ಬರ ಮನೆಯನ್ನೇ ನೆಚ್ಚಿಕೊಳ್ಳಬೇಕಾಗಿದೆ. ಅವರ ಗೌರವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದರು.

ಎತ್ತ ಸಾಗುತ್ತಿದೆ ಶಿಕ್ಷಣ ಇಲಾಖೆ: ಸ್ವಾತಂತ್ರ್ಯ ಬಂದು 75 ವರ್ಷ ಕಳೆಯುತ್ತಾ ಬಂದಿದ್ದರೂ ಸಹ ಶಾಲೆ ಅಭಿವೃದ್ಧಿಪಡಿಸಲು ಶಿಕ್ಷಣ ಇಲಾಖೆಯಿಂದಾಗುತ್ತಿಲ್ಲ, ಶಾಲೆಯಲ್ಲಿ ಮೂಲ ಸೌಲಭ್ಯ ಒದಗಿಸಲು ಸಾಧ್ಯವಾಗದಿದ್ದರೇ ಇಂತಹ ಇಲಾಖೆ ಹಾಗೂ ಸರ್ಕಾರವಾದರೂ ಏಕೆ ಬೇಕು? ಇದಕ್ಕಿಂತ ನಾಚಿಕೇಗೇಡಿನ ಸಂಗತಿ ಇನ್ನೇನಿದೆ. ಕೂಡಲೇ ಇಂತಹ ಸಮಸ್ಯೆಗೆ ಪರಿಹಾರ ನೀಡುವಂತೆ ಆಗ್ರಹಿಸಿದರು.

ಹೇಳಿದ್ದು ಮರೆತ ಅಧಿಕಾರಿಗಳು:ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಅಬ್ದುಲ್ ಖಾದರ ಬ್ಯಾಡಗಿ ಮಾತನಾಡಿ, ತಾಲೂಕಿನಲ್ಲಿ ಶಾಲಾ ಕಟ್ಟಡ ಕಾಮಗಾರಿ ನಡೆಯುತ್ತಿದ್ದರೂ ಸಹ ಈ ಬಗ್ಗೆ ಯಾವುದೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ಇಲ್ಲವೆಂಬ ಮಾತನ್ನು ಹೇಳುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಹಾಗೂ ಸ್ವತಃ ಶಿಕ್ಷಣಾಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿದ್ದರೂ ಶೌಚಾಲಯಕ್ಕೆ ನಿರ್ಮಾಣಕ್ಕೆ ಮುಂದಾಗಿಲ್ಲ. ಇಂತಹ ಅಧಿಕಾರಿಗಳಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯವೆಂದು ದೂರಿದರು.ಸ್ಥಳಕ್ಕೆ ಶಿಕ್ಷಣಾಧಿಕಾರಿ:ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಶಾಲೆಗೆ ಆಗಮಿಸಿದ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಪೋಷಕರನ್ನು ಸಮಾಧಾನ ಮಾಡಲು ಮುಂದಾದರು. ಪೋಷಕರು ಮಾತ್ರ ಇದಕ್ಕೆ ಜಗ್ಗದೇ ಕೆಲಕಾಲ ವಾಗ್ವಾದ ನಡೆಸಿದರು. ಬಳಿಕ ಕೆಲವೇ ದಿನಗಳಲ್ಲಿ ಶೌಚಾಲಯ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆದರು.10 ದಿನಗಳಲ್ಲಿ ಶೌಚಾಲಯ ಭರವಸೆ: ಈಗಾಗಲೇ ಶೌಚಾಲಯ ಕಾಮಗಾರಿ ನಡೆಯುತ್ತಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಿಕೊಡಲು ಗುತ್ತಿಗೆದಾರನಿಗೆ ಸೂಚನೆ ನೀಡಿದ್ದೇನೆ. ಮುಂದಿನ 10 ದಿನಗಳಲ್ಲಿ ಶೌಚಾಲಯವು ಮಕ್ಕಳ ಬಳಕೆಗೆ ಸಿಗಲಿದೆ ಎಂದು ಶಿಕ್ಷಣಾಧಿಕಾರಿ ಎಸ್‌.ಜಿ. ಕೋಟಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!