ಶಾಲಾ ವಾರ್ಷಿಕೋತ್ಸವ । ಶಾಸಕ ಎ.ಮಂಜು, ಗಣ್ಯರು ಭಾಗಿ । ನಿವೃತ್ತ ಶಿಕ್ಷಕರಿಗೆ ಗೌರವ । ಗ್ರಾಮದ ಅಭಿವೃದ್ಧಿ ಪುಸ್ತಕ ಬಿಡುಗಡೆಕನ್ನಡಪ್ರಭ ವಾರ್ತೆ ಅರಕಲಗೂಡು
ರಾಮನಾಥಪುರ ಹೋಬಳಿ ಹನ್ಯಾಳು ಶಾಲೆಯಲ್ಲಿ ಕಳೆದ 25 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಿಕ್ಷಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತರಾದ ಟಿ. ಮಲ್ಲೇಶ್, ರಾಜ್ಯ ಪ್ರಶಸ್ತಿ ಪುರಸ್ಕೃತ ಕಾಳಬೋಯಿ, ನಿವೃತ್ತ ಶಿಕ್ಷಕರಾದ ಮನೋರಮ, ಪಿ.ರಾಜಣ್ಣ, ಸಂಪತ್ ಅಯ್ಯಂಗಾರ್, ಜಾವೀದ್ ಪಾಷಾ, ಮಹಾದೇವಪ್ಪ, ನಂಜುಂಡಸ್ವಾಮಿ, ರಾಮಸ್ವಾಮಿ, ರಾಮಯ್ಯ ಪಾಲ್ಗೊಂಡಿದ್ದರು.ಮಕ್ಕಳ ಮನೆ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಯನ್ನು ವೀಕ್ಷಿಸಿದ ನಂತರ ಶಾಸಕ ಎ. ಮಂಜು ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಆಯೋಜಿಸಿರುವ ಗುರುವಂದನಾ ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಹನ್ಯಾಳು ಗ್ರಾಮದ ಸರ್ಕಾರಿ ಶಾಲೆಯನ್ನು ರಾಜ್ಯದಲ್ಲೇ ಮಾದರಿ ಶಾಲೆಯನ್ನಾಗಿ ಮಾಡುವುದರ ಜತೆಗೆ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದ ಮೂಲಕ ಸಮುದಾಯ ಶಾಲೆ ಮಾಡುವ ತಮ್ಮ ಗುರಿಯನ್ನು ವ್ಯಕ್ತಪಡಿಸಿದರು. ಇದೇ ಶಾಲೆಯಲ್ಲಿ ತಾವು ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿದ್ದ ಶಿಕ್ಷಕರು, ಸಹಪಾಠಿಗಳು ಹಾಗೂ ತಮ್ಮ ಗ್ರಾಮದ ಅಂದಿನ ಪರಿಸ್ಥಿತಿಯನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ 25 ವರ್ಷಗಳು ಹನ್ಯಾಳು ಗ್ರಾಮದಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಕಾಳಬೋಯಿ ಅವರಿಗೆ ಶಾಸಕ ಎ. ಮಂಜು ಹಾಗೂ ಹಿರಿಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಗೌರವಿಸಲಾಯಿತು. ತಾರಾ ಎ.ಮಂಜು ಅವರು ನಿವೃತ್ತ ಶಿಕ್ಷಕರಿಗೆ ನೆನಪಿನ ಕಾಣಕೆಯನ್ನು ನೀಡಿದರು.
ಹನ್ಯಾಳು ಗ್ರಾಮದಲ್ಲಿ ಕಳೆದ ಒಂದು ವರ್ಷದಲ್ಲಿ ಶಾಲೆ ಹಾಗೂ ಗ್ರಾಮದ ಅಭಿವೃದ್ಧಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ‘ಹಳೆ ಬೇರು ಹೊಸ ಚಿಗುರು-ಪ್ರಗತಿಯತ್ತ ನಮ್ಮೂರು’ ಎಂಬ ಕಿರುಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.