ಕನ್ನಡಪ್ರಭ ವಾರ್ತೆ ಅರಸೀಕೆರೆ
ಆರಾಧನಾ ಮಹೋತ್ಸವದ ಮೂರನೇ ದಿನ ನೂರಾರು ಭಕ್ತರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದು, ಅಲಂಕೃತ ರಜತ ಮಂಟಪದಲ್ಲಿ ಶ್ರೀ ಗುರುರಾಯರ ಭವ್ಯ ಮೆರವಣಿಗೆ ನಡೆಯಿತು. ಉತ್ತರಾರಾಧನೆಯ ಪ್ರಯುಕ್ತ ಬೆಳಗ್ಗೆಯಿಂದಲೇ ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಪ್ರಧಾನ ಪುರೋಹಿತರಾದ ಶ್ರೀನಿವಾಸ ಹೆಗ್ಗಡೆ, ನರಸಿಂಹ ಆಚಾರ್, ಕಿರಣ್ ಜೋಶಿ, ವೆಂಕಟೇಶ್ ಜೋಶಿ, ಪ್ರದೀಪ್ ಹೆಗ್ಗಡೆ ಹಾಗೂ ತಂಡದವರು ಶ್ರೀ ಗುರುರಾಯರ ಬೃಂದಾವನಕ್ಕೆ ನಿರ್ಮಾಲ್ಯ, ಉಷಃಕಾಲ ಪೂಜೆ, 108 ಕಳಸಗಳ ಕ್ಷೀರಾಭಿಷೇಕ, ಫಲ ಪಂಚಾಮೃತಾಭಿಷೇಕ, ತುಳಸಿ ಅರ್ಚನೆ ಹಾಗೂ ಅಷ್ಟೋತ್ತರ ಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.ನಂತರ ಅಲಂಕೃತ ರಜತ ಮಂಟಪದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಮಂಗಳವಾದ್ಯಗಳೊಂದಿಗೆ ಮಠದ ಸುತ್ತಲೂ ಭವ್ಯ ಮೆರವಣಿಗೆ ನಡೆಸಲಾಯಿತು. ಪುರುಷರು ಹಾಗೂ ಮಹಿಳೆಯರು ಸಾಂಪ್ರದಾಯಿಕ ಉಡುಪು ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡು ಗುರುರಾಯರ ನಾಮಸ್ಮರಣೆ ಹಾಗೂ ಭಜನೆ ಮೂಲಕ ಭಕ್ತಿಭಾವ ಮೆರೆದರು. ಮಧ್ಯಾಹ್ನ ಶ್ರೀ ಗುರುರಾಯರಿಗೆ ವಿಶೇಷ ನೈವೇದ್ಯ ಸಮರ್ಪಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಆಗಮಿಸಿದ್ದ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಮಠದ ವತಿಯಿಂದ ಭಕ್ತಾಧಿಗಳಿಗಾಗಿ ಸಾಮೂಹಿಕ ಅನ್ನಸಂತರ್ಪಣೆಯನ್ನೂ ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಶ್ರೀಮಠದ ವ್ಯವಸ್ಥಾಪಕ ರಂಗರಾವ್ ದೇಸಾಯಿ, ಸೇವಕರಾದ ಗೋವಿಂದರಾಜು, ಸ್ವಯಂಸೇವಕರಾದ ರಾಘವೇಂದ್ರ, ಮೂರ್ತಿ, ಚಂದ್ರಶೇಖರ್, ಶಿವಕುಮಾರ್, ನಾಗರಾಜು, ಶಿವಶಂಕರ್, ಶ್ರೀಕಾಂತ್, ಉಮೇಶ್, ಪ್ರಶಾಂತ್ ಸೇರಿದಂತೆ ಅನೇಕ ಭಕ್ತರು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.