ಬಳ್ಳಾರಿ: ನಗರದ 21 ಮಸೀದಿಗಳಿಗೆ ₹2.20 ಕೋಟಿ ಅನುದಾನ, ಎರಡು ಶಾದಿ ಮಹಲ್ಗಳಿಗೆ ₹3 ಕೋಟಿ ಅನುದಾನ ತಂದಿರುವೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಭಾರತದ ಮುಸ್ಲಿಂ ಸಮುದಾಯ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ ಇಲ್ಲಿಯವರೆಗೆ ಮುಸ್ಲಿಮರು ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದಾರೆ. ದೇಶಕ್ಕಾಗಿ ಬಲಿದಾನಗೈದವರ ಹೆಸರನ್ನು ಇತಿಹಾಸದಿಂದ ತೆಗೆದು ಹಾಕುವ ಹುನ್ನಾರವನ್ನು ಯಾರಾದರೂ ಮಾಡಬಹುದು. ಆದರೆ ಹುತಾತ್ಮರ ಹೆಸರನ್ನು ಅಳಿಸಲಾಗದು ಎಂದು ಹೇಳಿದರು.
ವಕ್ಫ್ ಮಂಡಳಿಯ ಆಸ್ತಿಯು ದೇವರಿಗೆ ಸೇರಿದ್ದು, ಅದರ ರಕ್ಷಣೆ ನಮ್ಮ ಹೊಣೆಯಾಗಿದೆ. ಬಳ್ಳಾರಿ ನಗರದ ಹಾವಂಭಾವಿಯಲ್ಲಿ ಕೆಲವರು ಒತ್ತುವರಿ ಮಾಡಿದ್ದರು. ಆದರೆ ನಾವು ನ್ಯಾಯಾಲಯದ ಮೊರೆ ಹೋಗಿ ಆಸ್ತಿಯನ್ನು ರಕ್ಷಣೆ ಮಾಡಿದ್ದೇವೆ ಶಾಸಕ ಭರತ್ ರೆಡ್ಡಿ ತಿಳಿಸಿದರು.ನಿಮ್ಮ ಆಶೀರ್ವಾದದಿಂದ ನಾನು ಒಂದೇ ದಿನ ಅಲ್ಪಸಂಖ್ಯಾತ ಸಮುದಾಯಗಳ ಕಾಲನಿಗಳ ಅಭಿವೃದ್ಧಿಗಾಗಿ ₹5 ಕೋಟಿ ಕಾಮಗಾರಿಗೆ ಚಾಲನೆ ನೀಡಿದೆ. ಹಿಂದೂ-ಮುಸ್ಲಿಮರ ಏಕತೆ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಕೋಮು ಸೌಹಾರ್ದ ಕಾಪಾಡುವ ಜವಾಬ್ದಾರಿ ನಮ್ಮದು. ವಿಧಾನಸಭೆಯ ಚುನಾವಣೆಯ ವೇಳೆಯೇ ನಮ್ಮನ್ನು ಗೆಲ್ಲಿಸಿದ್ದೀರಿ. ನನ್ನ ತಂದೆ ತಾಯಿಯ ಪುಣ್ಯ ಹಾಗೂ ಅಲ್ಲಾಹನ ಕೃಪೆಯಿಂದಾಗಿ ನಾನು ಶಾಸಕನಾದೆ ಎಂದರು.
ನಗರ ಹಾಗೂ ಗ್ರಾಮಾಂತರ ಕ್ಷೇತ್ರಗಳು ಸೇರಿಸಿ ಮುಸ್ಲಿಮರ ಸಂಖ್ಯೆ ದೊಡ್ಡದಿದೆ. ಹೀಗಾಗಿ ಎರಡು ಶಾದಿ ಮಹಲ್ಗಳ ಅಗತ್ಯ ಇದೆ ಎಂದು ರಾಜ್ಯಸಭಾ ಸದಸ್ಯ ಡಾ. ಸೈಯದ್ ನಾಸಿರ್ ಹುಸೇನ್ ಹೇಳಿದರು.
ಮೇಯರ್ ಮುಲ್ಲಂಗಿ ನಂದೀಶ್, ಹುಮಾಯೂನ್ ಖಾನ್, ಮೆಹದಿ ಮಿಯಾಸಾಹೇಬ್, ಖಾಜಿ ಗುಲಾಮ್ ಸಿದ್ದಿಕಿ, ಪೀರಬಾಷಾಸಾಹೇಬ್, ಕಣೇಕಲಸಾಹೇಬ್, ಕರಿಮುದ್ದೀನಸಾಹೇಬ, ಖಾಜುನಸಾಹೇಬ್, ಹಾಜಿ ಇಲ್ಯಾಸ್ ಸಾಹೇಬ್, ಹುಸೇನ್ ಪೀರಾ, ಅಯಾಜ್ ಅಹ್ಮದ್ ಉಪಸ್ಥಿತರಿದ್ದರು.