ಕನ್ನಡಪ್ರಭ ವಾರ್ತೆ ಬೀದರ್
ಅವರು ಸೋಮವಾರ ಭಾಲ್ಕಿ ತಾಲೂಕಿನ ಲಂಜವಾಡ ಗ್ರಾಮದಲ್ಲಿ ಜಿಲ್ಲೆಯ ಭಾಲ್ಕಿ ತಾಲೂಕಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಪ್ಯಾಕೇಜ್ ಸಂಖ್ಯೆ 617 ರ ಅಡಿಯಲ್ಲಿನ ರಸ್ತೆ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ರಸ್ತೆಗಳು ಚೆನ್ನಾಗಿ ಇಲ್ಲದಿದ್ದರೆ ಮಕ್ಕಳು ಶಾಲಾ ಕಾಲೇಜುಗಳಿಗೆ ಹೋಗಲು, ಬಾಣಂತಿಯರಿಗೆ ಹೆರಿಗೆ ಸಮಯದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಗಲ್ಲ ಮತ್ತು ಬಹಳಷ್ಟು ಅಪಘಾತಗಳು ಸಂಭವಿಸುತ್ತವೆ. ನಾನು ಶಾಸಕನಾಗಿದ್ದಾಗ ಲಂಜವಾಡ ರಸ್ತೆ ಹೇಗಿತ್ತು ಎಂದರೆ ಗಾಡಿಗಳು ಕೆಳಗೆ ಮೇಲೆ ಅಲುಗಾಡುತ್ತಿದ್ದವು ಯಾವಾಗ ವಾಹನಗಳು ಉರುಳಿ ಬೀಳುತ್ತವೆ ಎಂದು ಭಯವಾಗುತ್ತಿತ್ತು ಎಂದರು.
ಭಾಲ್ಕಿ ಚಿಂಚೋಳಿ ರಾಜ್ಯ ಹೆದ್ದಾರಿ 75ರ ಆಯ್ದ ಭಾಗಗಳ ಸುಧಾರಣೆಗೆ 869ಲಕ್ಷ ರು. ಹಾಗೂ ಔರಾದ್ ಸದಾಶಿವಗಡ್ ರಾಜ್ಯ ಹೆದ್ದಾರಿ 34ರ ಆಯ್ದ ಭಾಗಗಳ ಸುಧಾರಣೆ 511ಲಕ್ಷ ರು. ಹಾಗೂ ಬಾಲಗಾಂವ್ (ಮಹಾರಾಷ್ಟ್ರ ಗಡಿ) ಯಿಂದ ಧರ್ಮಪೂರ (ತೆಲಂಗಾಣ ಗಡಿ) ವರೆಗೆ ರಸ್ತೆ ಸುಧಾರಣೆ 1120ಲಕ್ಷ ರು. ಗಳ ಒಟ್ಟು 25 ಕೋಟಿ ರು. ಗಳ ಅಂದಾಜು ಮೊತ್ತದ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಹೇಳಿದರು.ಲಂಜವಾಡ ಗ್ರಾಮದಲ್ಲಿ 81 ಲಕ್ಷ ರು.ಗಳ ಸಿ.ಸಿ ರಸ್ತೆ. ಚರಂಡಿ ಕಾಮಗಾರಿಗಳ ಉದ್ಘಾಟನೆಯನ್ನು ಮಾಡಿದ್ದೇನೆ. ಜಲ ಜೀವನ ಮಿಷನ್ 23 ಲಕ್ಷ ರು. ಅಂದಾಜು ವೆಚ್ಚದ ಕಾಮಗಾರಿ ಈಗಾಗಲೇ ಮುಗಿದಿದೆ. ಈ ಗ್ರಾಮಕ್ಕೆ ಪಶು ಚಿಕಿತ್ಸಾಲಯದ ಬೇಡಿಕೆ ಇರುವುದರಿಂದ ಅದನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ಲಂಜವಾಡ ಗ್ರಾಮಕ್ಕೆ ನೀರು ಬರುತ್ತವೆ ಅದರ ಕಾರ್ಯಾರಂಭ ಮಾಡಿದ್ದೇನೆ ಎಂದರು.
ಲಂಜವಾಡ ಗ್ರಾಮ ಪಂಚಾಯತಿಗೆ ಮನೆ ಇಲ್ಲದವರಿಗೆ ಮನೆಗಳನ್ನು ಮಂಜೂರು ಮಾಡಲಾಗಿದೆ. ಅವಶ್ಯಕತೆ ಇದ್ದಲ್ಲಿ ಎಲ್ಲಾ ಕಡೆ ಕೊಡುತ್ತೇವೆ ಜೋಪಡಿ ಮುಕ್ತ ಮಾಡುತ್ತೇವೆ. ಯಾವುದೇ ಪಕ್ಷ ನೋಡದೆ ಎಲ್ಲರಿಗೂ ಮನೆಗಳನ್ನು ಕೊಟ್ಟಿದ್ದೇವೆ. ಭಾಲ್ಕಿ ತಾಲೂಕಿನ 120 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿಗೆ ಗುಣಮಟ್ಟದ ಕಾಮಗಾರಿ ಆಗುತ್ತದೆ. ನಾರಾಯಣಪೂರ ಜಲಾಶಯದಿಂದ ಬೀದರ್ ಜಿಲ್ಲೆಯ 800 ರಿಂದ 900 ಜನವಸತಿ ಪ್ರದೇಶಗಳಿಗೆ ನೀರು ತರಲು ದೂರದೃಷ್ಟಿತ್ವ ಇಟ್ಟುಕೊಳ್ಳಲಾಗಿದೆ. ಅಧಿಕಾರಿಗಳು ಗುಣಾತ್ಮಕ ಕೆಲಸ ಕಾಮಗಾರಿಗಳನ್ನು ಮಾಡಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಲಂಜವಾಡ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಧಿಕಾ ಶುಕ್ರಾಚಾರ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ ಕಾಮಶೆಟ್ಟಿ, ಪಶು ಇಲಾಖೆಯ ಉಪನಿರ್ದೆಶಕರಾದ ನರಸಪ್ಪ, ಭಾಲ್ಕಿ ತಹಶೀಲ್ದಾರ ಮಲ್ಲಿಕಾರ್ಜುನ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಲಂಜವಾಡ ಹಾಗೂ ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.