ಸೋಮರಡ್ಡಿ ಅಳವಂಡಿ
ಕನಕಗಿರಿ ತಾಲೂಕು ವ್ಯಾಪ್ತಿಯಲ್ಲಿ ತೋಟಗಾರಿಕಾ ಪಾರ್ಕ್ ಸ್ಥಾಪಿಸುವುದಕ್ಕೆ ಕಳೆದ ಸರ್ಕಾರ ಮಂಜೂರಾತಿ ನೀಡಿತ್ತು. ಆದರೆ ಅಭಿವೃದ್ಧಿಯೂ ಆಗಲಿಲ್ಲ, ನಿರೀಕ್ಷಿತ ಅನುದಾನವೂ ದೊರೆಯುತ್ತಿಲ್ಲ. ಇದು ರಾಜಕೀಯ ಜಿದ್ದಾಜಿದ್ದಿಯಲ್ಲಿ ಕೊಳೆಯುವ ಬದಲು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಅಗತ್ಯ ಅನುದಾನ ದೊರೆಯುತ್ತದೆ ಎನ್ನುವುದು ಸದ್ಯದ ಕುತೂಹಲ.
ಜಾನಪದ ಲೋಕ:ಕಳೆದ ಬಜೆಟ್ ನಲ್ಲಿ ಕೊಪ್ಪಳಕ್ಕೆ ಜಾನಪದ ಲೋಕ ಘೋಷಣೆಯಾಗಿದೆ. ಆದರೆ, ಇದಕ್ಕೆ ಅಗತ್ಯ ಅನುದಾನ ಇದುವರೆಗೂ ದೊರೆತಿಲ್ಲ. ಕೊಪ್ಪಳ ಜಿಲ್ಲೆಯವರೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಇರುವುದರಿಂದಲೇ ಕೊಪ್ಪಳಕ್ಕೆ ಜಾನಪದ ಲೋಕ ಘೋಷಣೆಯಾಗಿದೆ. ಆದರೆ, ನಂತರ ಅದು ನಿರೀಕ್ಷಿತ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಆದ್ಯತೆ ಸಿಕ್ಕಿಲ್ಲ. ಹೀಗಾಗಿ, ಈ ಬಾರಿಯಾದರೂ ಆದ್ಯತೆ ಸಿಕ್ಕು, ಅಗತ್ಯ ಅನುದಾನ ನೀಡುವರೇ ಎನ್ನುವುದು ಸದ್ಯದ ಕುತೂಹಲ.ಜಿಲ್ಲೆ ಬಿಸಿಲು ನಾಡು ಆಗಿದ್ದರೂ ತೋಟಗಾರಿಕಾ ಬೆಳೆಗಳಲ್ಲಿ ಕ್ರಾಂತಿ ಮಾಡುತ್ತಿದೆ. ಮಾವು, ದಾಳಿಂಬೆ, ಪಪ್ಪಾಯಿ ಸೇರಿದಂತೆ ಹತ್ತಾರು ತೋಟಗಾರಿಕೆ ಬೆಳೆಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಬೆಳೆಯುತ್ತಾರೆ. ಹೀಗಾಗಿ, ಇಲ್ಲಿ ತೋಟಗಾರಿಕಾ ಪಾರ್ಕ್ ನಿರ್ಮಾಣ ಮಾಡುವುದಕ್ಕೆ ಮಂಜೂರಾತಿಯಾಗಿದ್ದರೂ ಅದಕ್ಕೂ ಅನುದಾನದ ಅಗತ್ಯವಿದೆ.ವಿಮಾನ ನಿಲ್ದಾಣ:ಜಿಲ್ಲೆಗೆ ಉಡಾನ್ ಘೋಷಣೆಯಾಗಿದ್ದರೂ ಅದು ಜಾರಿಯಾಗಲೇ ಇಲ್ಲ. ಕಾರಣ ವಿಮಾನ ನಿಲ್ದಾಣ ಇಲ್ಲದೇ ಇರುವುದು. ಖಾಸಗಿಯಾಗಿ ಇರುವ ವಿಮಾನ ತಂಗುದಾಣವನ್ನೇ ಬಳಕೆ ಮಾಡಿಕೊಂಡು ಉಡಾನ್ ಜಾರಿಗೆ ಪ್ರಯತ್ನಿಸಲಾಯಿತು. ಆದರೆ, ಖಾಸಗಿ ವಿಮಾನ ತಂಗುದಾಣ ಕಂಪನಿಯವರಿಗೆ ಅಗತ್ಯ ಸಹಕಾರ ದೊರೆಯದೇ ಅದು ನನೆಗುದಿಗೆ ಬಿದ್ದಿತು.
ಇದಾದ ಮೇಲೆ ಕೊಪ್ಪಳ ಬಳಿಯೇ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಮುಂದಾದ ಸರ್ಕಾರ ಮೊದಲ ಹಂತದಲ್ಲಿ ಭೂಸ್ವಾಧೀನಕ್ಕೆ ಕೆಕೆಆರ್ಡಿಬಿಯಲ್ಲಿ ₹44 ಕೋಟಿ ನೀಡಲಾಯಿತಾದರೂ ಅದು ಜಾರಿಯಾಗಲೇ ಇಲ್ಲ. ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡುವುದೇ ಎನ್ನುವುದನ್ನು ಕಾದು ನೋಡಬೇಕು.ಸ್ಟೀಲ್ ಸಿಟಿ:ಜಿಲ್ಲೆಯಲ್ಲಿ ಅತ್ಯಧಿಕ ಬೃಹತ್ ಕೈಗಾರಿಕೆಗಳು ಇರುವುದರಿಂದ ಇಲ್ಲೊಂದು ಸ್ಟೀಲ್ ಸಿಟಿ ಮಾಡಬೇಕು ಎನ್ನುವ ಬೇಡಿಕೆ ಇದೆ ಮತ್ತು ಸರ್ಕಾರವೂ ಇದನ್ನು ಕಳೆದ ಕೆಲ ವರ್ಷಗಳ ಹಿಂದೆ ಬಜೆಟ್ನಲ್ಲಿಯೇ ಘೋಷಣೆ ಮಾಡಿತ್ತು. ಆದರೆ, ಅದು ಜಾರಿಯಾಗಲೇ ಇಲ್ಲ. ಅದಾದ ಮೇಲೆ ಸ್ಟೀಲ್ ಕಾರಿಡಾರ್ ಘೋಷಣೆ ಮಾಡಲಾಯಿತು. ಅದು ಸಹ ಜಾರಿಯಾಗಲೇ ಇಲ್ಲ. ಈ ದಿಸೆಯಲ್ಲಿ ಪ್ರಸಕ್ತ ಬಜೆಟ್ ನಲ್ಲಿ ಸಂತೋಷದ ಸುದ್ದಿ ಬರುವುದೇ ಎನ್ನುವ ನಿರೀಕ್ಷೆಯಂತೂ ಇದ್ದೇ ಇದೆ.ಜಿಂಕೆ ಧಾಮ, ಕರಡಿ ಧಾಮವನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾವನೆ ಇದೆಯಾದರೂ ಅದು ಜಾರಿಯಾಗಬೇಕಾಗಿದೆ. ನೀರು ನಾಯಿಗಳ ಸಂರಕ್ಷಿತ ನದಿ ಪ್ರದೇಶ ಘೋಷಣೆಯಾಗಿದ್ದರೂ ಅಲ್ಲಿ ಅದನ್ನು ಸಂರಕ್ಷಣೆ ಮಾಡುವ ಯಾವ ಪ್ರಯತ್ನಗಳು ಮತ್ತು ಸರ್ಕಾರದಿಂದ ಅನುದಾನವೂ ಇದುವರೆಗೂ ಬಂದಿಲ್ಲ.ಹೀಗೆ, ಜಿಲ್ಲೆಯಲ್ಲಿ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇದ್ದು, ದೂರದೃಷ್ಟಿ, ಇಚ್ಛಾಶಕ್ತಿ ಅಗತ್ಯವಿದೆ.