ಕನ್ನಡಪ್ರಭ ವಾರ್ತೆ ಇಳಕಲ್ಲಇವರಿಗೆ ಈಗ 68 ವರ್ಷ ವಯಸ್ಸು. ಇವರೆಲ್ಲ 1974ರ ಬ್ಯಾಚ್ನಲ್ಲಿ ಎಸ್ಎಸ್ಎಲ್ಸಿ ಮುಗಿಸಿದ ಹಳೆಯ ವಿದ್ಯಾರ್ಥಿಗಳು. ಹಲವರು ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ನೌಕರಿ ಮುಗಿಸಿ ನಿವೃತ್ತಿಯ ಜೀವನ ನಡೆಸುತ್ತಿದ್ದರೆ, ಇನ್ನಷ್ಟು ಜನ ವ್ಯಾಪಾರ, ಕೃಷಿ ಮತ್ತಿತರ ವೃತ್ತಿಯಲ್ಲಿ ಜೀವನ ಕಂಡುಕೊಂಡು ಸದ್ಯ ವಿಶ್ರಾಂತಿ ಜೀವನ ನಡೆಸುತ್ತಿದ್ದರೆ, ಒಂದಿಷ್ಟು ಸಹಪಾಠಿಗಳು ಇಹಲೋಕ ತ್ಯಜಿಸಿದ್ದಾರೆ.
ಅಂಜುಮನ್ ಶಿಕ್ಷಣ ಸಂಸ್ಥೆಯ ಇಳಕಲ್ಲಿನ ಎಸ್.ಎಂ.ಎಸ್. ಖಾದ್ರಿ ಪ್ರೌಢಶಾಲೆಯಲ್ಲಿ ೧೯೭೪ರಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದ ವಿದ್ಯಾರ್ಥಿಗಳು ಗುರುವಂದನೆ ಹಾಗೂ ಸುವರ್ಣ ಮಹೋತ್ಸವ ಸ್ನೇಹ ಸಮ್ಮಳನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಶಿಕ್ಷಕರನ್ನು ಮೆರವಣಿಗೆಯಲ್ಲಿ ಶಾಲೆಗೆ ಕರೆತಂದು ಸತ್ಕರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಉಸ್ಮಾನಗಣಿ ಹುಮನಾಬಾದ್ ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮ. ೧೦೭೪ರಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಈಗ ೬೮ ವರ್ಷ ವಯಸ್ಸಾಗಿದೆ. ಇನ್ನು ಕಲಿಸಿದ ಗುರುಗಳು ಯಾವ ರೀತಿ ಇರಬಹುದು ನೀವೇ ಊಹಿಸಿ. ಅವರು ಯಾವ ನಗರದಲ್ಲಿದ್ದಾರೆ ಎಂದು ಹುಡುಕಿ ಗುರುಗಳಾದ ಮಹಮ್ಮದಲಿ ಯತ್ನಟ್ಟಿ, ಮೆಹಬೂಬ್ ಆಲಂ ಬಡಗನ್, ಮಾಸಾಪತಿ , ಗುಲಾಂ ಅಹ್ಮದ ಕರ್ನೂಲ್, ಹನುಮಸಾಗರ, ಮಹಾಂತಪ್ಪ ಮೇರನಳ ಗುರುಗಳನ್ನು ಗೌರವಿಸಿ ಸತ್ಕರಿಸಿದ್ದು, ಇಂಥ ಕಾರ್ಯಕ್ರಮವನ್ನು ನನ್ನ ಜೀವನದಲ್ಲಿ ನೋಡಿದ್ದಿಲ್ಲ. ಸಮಾಜದ ಪ್ರತಿಯೊಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸಿ ಉನ್ನತ ಹುದ್ದೆ ಪಡೆಯಲು ಪ್ರೇರೇಪಿಸಬೇಕೆಂದು ಸಲಹೆ ನೀಡಿದರು.ಶಿಕ್ಷಣ ಸಂಸ್ಥೆಯಲ್ಲಿ ಉರ್ದು ಭಾಷೆಯಲ್ಲಿ ಪಿಯುಸಿ ಆರಂಭಿಸಲು ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿದ್ದೇವೆ. ಸಂಬಂಧಪಟ್ಟ ಸಚಿವರಲ್ಲಿ ಶೀಘ್ರವೇ ಅನುಮತಿ ನೀಡಲು ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆಯಲ್ಲಿ ೧೯೭೪ ರಲ್ಲಿ ಕಲಿಸಿದ ಶಿಕ್ಷಕರ ಹಾಗೂ ಕಲಿತ ವಿದ್ಯಾರ್ಥಿಗಳ ಕುರಿತಾದ ಕಹಕ್ಷಾ ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು. ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಶಾಲೆಯ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಅಬ್ದುಲ್ಕರಿಮ್ ಕರ್ನೂಲ್ ಹಾಗೂ ಅಖೀಲ್ಜಫರ ಕರ್ನೂಲ್ ಕುರಾಣ ಪಠಣ ಮಾಡಿದರು. ಮುಜಫರಅಲಿ ಮುಂಡಾಸ ಸ್ವಾಗತಿಸಿದರು. ಸಿಕಂದರ್ ಚೋಪದಾರ ವಂದಿಸಿದರು. ಅಬ್ದುಲ್ನಭಿ ಜಮಾದಾರ ನಿರೂಪಿಸಿದರು.