ಕನ್ನಡಪ್ರಭ ವಾರ್ತೆ ಬೆಂಗಳೂರುಮಹಾತ್ಮ ಗಾಂಧೀಜಿಯವರ ಹೆಸರನ್ನು ಬದಲಾಯಿಸಿದರೆ ಅವರನ್ನು ಜನರು ಮರೆಯುವುದಿಲ್ಲ. ಜನರ ಮನಸ್ಸಿನಲ್ಲಿ ಅವರು ಅಮರವಾಗಿರುತ್ತಾರೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಹೇಳಿದರು.
ಗಾಂಧೀಜಿಯವರ ಮೇಲಿನ ಅಭಿಮಾನ, ಅವರ ತತ್ವ, ಆದರ್ಶಗಳನ್ನು ಮೆಚ್ಚಿ ಬಹಳಷ್ಟು ಜನರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಗಾಂಧೀಜಿಯವರ ಹೆಸರನ್ನು ನಾಮಕರಣ ಮಾಡಿದ್ದಾರೆ. ನನ್ನ ಹೆಸರಿನಲ್ಲೂ ಗಾಂಧೀಜಿ ಇದ್ದಾರೆ. ಆಳುವ ಸರ್ಕಾರಗಳು ಯೋಜನೆಯ ಹೆಸರು ಮಾತ್ರ ಬದಲಿಸಬಹುದು. ಆದರೆ ಗಾಂಧೀಜಿಯವರ ಹೆಸರನ್ನು ಜನಮಾನಸದಿಂದ ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.ನಮ್ಮ ಕುಟುಂಬದವರು ಪ್ರತಿ ದಿನ ಹಿಡಿ ಧಾನ್ಯವನ್ನು ತೆಗೆದಿಡುತ್ತಿದ್ದು ಅದನ್ನು ಬಳಸಿ ಸರ್ವೋದಯ ದಿನ ಆಚರಿಸುತ್ತಿದ್ದರು. ನಾನು ಈಗಲೂ ಪ್ರತಿ ದಿವಸ 10 ರು. ತೆಗೆದಿಡುತ್ತಿದ್ದು ಒಂದು ವರ್ಷದ ಆ ನಿಧಿಯನ್ನು ಸ್ಕೌಟ್ಸ್ ಮತ್ತು ಗೈಡ್ಸ್ಗೆ ನೀಡುತ್ತಿದ್ದೇನೆ. ನೀವೂ ಈ ರೀತಿ ಪ್ರತಿ ದಿನ 1 ರು. ತೆಗೆದಿಟ್ಟರೆ ಸರ್ಕಾರದಿಂದ ಅನುದಾನ ಕೇಳುವ ಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ಸಲಹೆ ನೀಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ, ವಾರ್ತಾ ಇಲಾಖೆ ಮಾಜಿ ನಿರ್ದೇಶಕ ವಿಶುಕುಮಾರ್, ಹಿರಿಯ ಚಿತ್ರ ಕಲಾವಿದ ಬಿ.ಜಿ.ಗುಜ್ಜಾರಪ್ಪ, ಪತ್ರಕರ್ತೆ ರಶ್ಮಿ, ಆಕಾಶವಾಣಿ ಉದ್ಘೋಷಕಿ ಬಿ.ಕೆ.ಸುಮತಿ ಮತ್ತಿತರರು ಹಾಜರಿದ್ದರು.