ಗ್ಯಾರಂಟಿಗಳಿಂದ ಉಪಯೋಗವಿಲ್ಲ; 2 ಸಾವಿರ ರು.ಗೆ ಮರುಳಾಗಬೇಡಿ: ಕೇಂದ್ರ ಸಚಿವ ಕುಮಾರಸ್ವಾಮಿ ಕರೆ

KannadaprabhaNewsNetwork |  
Published : Jan 25, 2026, 01:30 AM IST
 | Kannada Prabha

ಸಾರಾಂಶ

ಕುಮಾರಸ್ವಾಮಿ ಅವರು ನನ್ನ ಆತ್ಮದಲ್ಲಿದ್ದಾರೆ. ರಾಜಕಾರಣ ಬಂದಾಗ ವಿರೋಧ ಮಾಡಿದ್ದು ಬಿಟ್ಟರೆ ವೈಯಕ್ತಿಕವಾಗಿ ಅವರ ಮತ್ತು ದೇವೇಗೌಡರ ಕುಟುಂಬದ ಬಗ್ಗೆ ಅಪಾರವಾದ ಪ್ರೀತಿ ಉಳ್ಳಂತಹ ವ್ಯಕ್ತಿ ನಾನು .

ಕನ್ನಡಪ್ರಭ ವಾರ್ತೆ, ತುಮಕೂರು

ಪಂಚ ಗ್ಯಾರಂಟಿಗಳಿಂದ ಏನೂ ಉಪಯೋಗ ಇಲ್ಲ. ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿಗಳಿಗೆ ವರ್ಷಕ್ಕೆ 50 ಸಾವಿರ ಕೋಟಿ ಹಣ ಖರ್ಚು ಮಾಡುತ್ತಿದೆ. ನೀವು ಕಟ್ಟುವ ತೆರಿಗೆ ಹಣವನ್ನೇ ನಿಮಗೆ ನೀಡುತ್ತಿದೆ. ಇದಕ್ಕೆ ಪ್ರತಿಯಾಗಿ ವಾರ್ಷಿಕ 1ರಿಂದ 1.25 ಲಕ್ಷ ಕೋಟಿ ಸಾಲ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಹೆಬ್ಬೂರು ಹೋಬಳಿ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ರಾಗಿ ಮುದ್ದನಹಳ್ಳಮ್ಮ ದೇವಸ್ಥಾನ ಉದ್ಘಾಟನಾ ಕಾರ‍್ಯಕ್ರಮದಲ್ಲಿ ಮಾತನಾಡಿದರು.

ಎರಡು ಸಾವಿರ ರು. ಹಣಕ್ಕೆ ಮರುಳಾಗಬೇಡಿ. ಐದು ವರ್ಷರ ಒಂದು ಅವಕಾಶ ಕೊಡಿ. ಈ ಗ್ಯಾರಂಟಿಗಳು ನಿಮ್ಮ ಬದುಕಿಗೆ ಶಾಶ್ವತ ಪರಿಹಾರ ಅಲ್ಲ. ಕಾಂಗ್ರೆಸ್ ಸರ್ಕಾರದ ಮೋಸಕ್ಕೆ ಬಲಿಯಾಗಬೇಡಿ ಎಂದು ಕುಮಾರಸ್ವಾಮಿ ನಾಗರಿಕರಲ್ಲಿ ಮನವಿ ಮಾಡಿದರು.ಇಡೀ ರಾಜ್ಯದಲ್ಲಿ ಈ ಸರ್ಕಾರ ಮದ್ಯದ ಹೊಳೆ ಹರಿಸುತ್ತಿದೆ. ಹಳ್ಳಿ ಹಳ್ಳಿಯಲ್ಲಿ ಕಿರಾಣಿ ಅಂಗಡಿಗಳಲ್ಲಿ ಕೂಡ ಮದ್ಯ ದೊರೆಯುತ್ತಿದೆ. ಸಿ.ಎಲ್. 7 ಮದ್ಯ ಪರವಾನಗಿಯನ್ನು ದೊಡ್ಡ ಪ್ರಮಾಣದಲ್ಲಿ ನೀಡುತ್ತಿದ್ದಾರೆ. ಇಂಥ ಒಂದು ಲೈಸನ್ಸ್ ಕೊಡುವುದಕ್ಕೆ ಇತ್ತೀಚೆಗೆ ಅಬಕಾರಿ ಅಧಿಕಾರಿಗಳು 2.50 ಕೋಟಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಅವರು ಆರೋಪಿಸಿದರು.

ನಾನು ಮೂರು ಬಾರಿ ಸಾವಿನ ಹತ್ತಿರಕ್ಕೆ ಹೋಗಿ ಬಂದಿದ್ದೇನೆ. ದೇವರ ಆಶೀರ್ವಾದ ಮತ್ತು ತಾಯಿ ಮಾರಮ್ಮ ಮತ್ತು ಈ ನಾಡಿನ ನಿಮ್ಮಂತಹ ಜನರ ಆಶೀರ್ವಾದದಿಂದ ಇನ್ನೂ ಬದುಕಿದ್ದೇನೆ ಎಂದು ಭಾವಿಸಿದ್ದೇನೆ. ನಮಗೆ ಒಂದು ಅವಕಾಶ ಕೊಡಿ. ಐದು ವರ್ಷಗಳ ಉತ್ತಮ ಸರ್ಕಾರ ಕೊಡುತ್ತೇವೆ. ಜೆಡಿಎಸ್, ಬಿಜೆಪಿ ಸರ್ಕಾರ ಅಲ್ಲ, ಆರೂವರೆ ಕೋಟಿ ಕನ್ನಡಿಗರ ಸರ್ಕಾರ ತರುತ್ತೇವೆ. ಅದಕ್ಕೆ ಅವಕಾಶ ಕೊಡಿ ಎಂದು ಅವರು ವಿನಂತಿಸಿದರು.

ಎರಡು ಬಾರಿ ಮುಖ್ಯಮಂತ್ರಿಯಾಗಿ ಜನತೆಗೆ ದ್ರೋಹ ಬಗೆಯದೇ ಕೆಲಸ ಮಾಡಿದ್ದೇನೆ. ಆತ್ಮಕ್ಕೆ ತೃಪ್ತಿಯಾಗುವ ರೀತಿ ಜನರ ಸೇವೆ ಮಾಡಿದ್ದೇನೆ. ಬೇರೆಯವರ ಕುತಂತ್ರದಿಂದ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಲು ಆಗಲಿಲ್ಲ. ಅದು ನನ್ನ ತಪ್ಪಿನಿಂದ ಆಗಿದ್ದಲ್ಲ. ಅವಕಾಶ ಸಿಕ್ಕಿದಾಗ ಸಾಕಷ್ಟು ಕೆಲಸ ಮಾಡಿದ್ದೇನೆ. ಸಾಲ ಮನ್ನಾ ಎರಡು ಅವಧಿಗಳಲ್ಲಿಯೂ ಮಾಡಿದ್ದೇನೆ. ಕೇಂದ್ರ ಸಹಕಾರ ಕೊಡುವುದಿಲ್ಲ ಎನ್ನುವುದು ತಪ್ಪು, ನಮ್ಮ ನಡವಳಿಕೆ ಮೇಲೆ ಎಲ್ಲವೂ ನಿಂತಿರುತ್ತದೆ. ನಾನು ಎರಡು ಬಾರಿ ಸಾಲ ಮನ್ನಾ ಮಾಡಿದಾಗ ನಾನು ಕೇಂದ್ರದ ಕಡೆ ನೋಡಲಿಲ್ಲ. ರಾಜ್ಯದ ಖಜಾನೆಯಿಂದ ಹಣ ನೀಡಿ ಸಾಲ ಮನ್ನಾ ಮಾಡಿದೆ. ಇವರು ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ. ಇದು ಸರಿಯಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.‌ಕೋಲಾರದ ಮಾವು ಆಂಧ್ರಪ್ರದೇಶದವರು ತೆಗೆದುಕೊಳ್ಳಲು ನಿರಾಕರಿಸಿದಾಗ ನಾನು 25 ಕೋಟಿ ಹಣ ನೀಡಿ ಮಾವು ಮಾರುಕಟ್ಟೆಯಲ್ಲಿ ಸರ್ಕಾರವೇ ಕೊಂಡುಕೊಳ್ಳುವ ವ್ಯವಸ್ಥೆ ಮಾಡಿ ರೈತರ ಪರವಾಗಿ ಬಲವಾಗಿ ನಿಂತ ಉದಾಹರಣೆ ಇದೆ. ನಾನು ಶ್ರೀಮಂತರ ಪರ ಅಲ್ಲ. ನಾನು ನಿಮ್ಮಂತಹ ಬಡವರ ಪರ. ರೈತರ ಪರವಾಗಿ ಕೆಲಸ ಮಾಡಿ ತೋರಿಸಿದ್ದೇನೆ. ಇನ್ನಷ್ಟು ಉತ್ತಮ ಕೆಲಸ ಮಾಡಲು ಐದು ವರ್ಷ ಅವಕಾಶ ಮಾಡಿಕೊಡಿ ಎಂದು ಜನತೆಯಲ್ಲಿ ಮನವಿ ಮಾಡಿದರು.

ಶಾಸಕ ಬಿ ಸುರೇಶ್ ಗೌಡರು ಮಾತನಾಡಿ ಕುಮಾರಸ್ವಾಮಿ ಅವರು ನನ್ನ ಆತ್ಮದಲ್ಲಿದ್ದಾರೆ. ರಾಜಕಾರಣ ಬಂದಾಗ ವಿರೋಧ ಮಾಡಿದ್ದು ಬಿಟ್ಟರೆ ವೈಯಕ್ತಿಕವಾಗಿ ಅವರ ಮತ್ತು ದೇವೇಗೌಡರ ಕುಟುಂಬದ ಬಗ್ಗೆ ಅಪಾರವಾದ ಪ್ರೀತಿ ಉಳ್ಳಂತಹ ವ್ಯಕ್ತಿ ನಾನು ಎಂದು ತಿಳಿಸಿದರು.

ಜನ್ಮಜನ್ಮಾಂತರಕ್ಕೂ ಕೂಡ ದೇವೇಗೌಡರ ಕುಟುಂಬದ ಜತೆ ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಅವರ ಕುಟುಂಬಕ್ಕೆ ಅಭಾರಿಯಾಗಿರುತ್ತೇನೆ ಎಂದು ತಿಳಿಸಿದರು.

ಈ ವೇಳೆ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ, ಮಾಜಿ ಶಾಸಕ ನಿಂಗಪ್ಪ, ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡ, ಜೆಡಿಎಸ್ ಮುಖಂಡರಾದ ನಾಗರಾಜು, ಉಗ್ರೇಶ, ರವಿಕುಮಾರ್, ಜಗದೀಶ್, ಡಾ. ರವಿ, ರಾಗಿ ಮುದ್ದನಹಳ್ಳಿ, ಮುಖಂಡ ನಾಗರಾಜು ಹಾಗೂ ಸಮಾಂತರ ಕ್ಷೇತ್ರದ ಎನ್‌ಡಿಎ ಒಕ್ಕೂಟದ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!