ಮಕ್ಕಳಿಗೆ ಉತ್ತಮ ದಾರಿ ತೋರಿಸಿದರೆ ಉನ್ನತ ಸಾಧನೆ: ಅಭಿನವ ಬೂದೀಶ್ವರ ಸ್ವಾಮಿಗಳು

KannadaprabhaNewsNetwork |  
Published : Aug 04, 2026, 02:00 AM IST
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಬಾಲ ಶರಣ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಮಕ್ಕಳಿಗೆ ನಾವು ಏನನ್ನು ಕಲಿಸಬೇಕಾಗಿಲ್ಲ. ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಸಮ್ಮೇಳನವನ್ನು ಸಂಘಟಕರು ಉತ್ತಮವಾಗಿ ಸಂಘಟಿಸಿದ್ದಾರೆ.

ಗದಗ: ಯಾವ ಮಗುವೂ ಜಾಣನಲ್ಲ, ಯಾವ ಮಗುವೂ ದಡ್ಡನಲ್ಲ. ಎಲ್ಲ ಮಕ್ಕಳಲ್ಲಿಯೂ ವಿಶೇಷವಾದ ಜ್ಞಾನ ಸಂಪತ್ತು ಇರುತ್ತದೆ. ಅವರಿಗೆ ಸರಿಯಾದ ದಾರಿ ತೋರಿಸಿದರೆ ಅವರು ಅತ್ಯಂತ ಉನ್ನತವಾದ ಶಿಖರವನ್ನೇರಬಲ್ಲರು‌ ಎಂದು ಹೊಸಹಳ್ಳಿಯ ಬೂದೀಶ್ವರ ಮಠದ ಅಭಿನವ ಬೂದೀಶ್ವರ ಸ್ವಾಮಿಗಳು ಹೇಳಿದರು.

ತಾಲೂಕಿನ ಹೊಸಹಳ್ಳಿ ಗ್ರಾಮದ ಬೂದಿಶ್ವರ ಮಠದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆಗಳ ಆಶ್ರಯದಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾ‌ ಮಟ್ಟದ ದ್ವಿತೀಯ ಮಕ್ಕಳ‌ ಶರಣ ಸಾಹಿತ್ಯ ಸಮ್ಮೇಳನದ ಸಮಾರೋಪ‌ ಸಮಾರಂಭದ‌ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಮಕ್ಕಳಿಗೆ ನಾವು ಏನನ್ನು ಕಲಿಸಬೇಕಾಗಿಲ್ಲ. ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಸಮ್ಮೇಳನವನ್ನು ಸಂಘಟಕರು ಉತ್ತಮವಾಗಿ ಸಂಘಟಿಸಿದ್ದಾರೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶರಣ ಸಾಹಿತ್ಯದ ಸಂಸ್ಕಾರ ಅತ್ಯಗತ್ಯವಾಗಿದ್ದು, ಸಮಾಜದಲ್ಲಿನ ತಾರತಮ್ಯ ಮತ್ತು ಅಸಮಾನತೆಗಳನ್ನು ಹೋಗಲಾಡಿಸಲು ಇಂತಹ ಸಮ್ಮೇಳನಗಳು ಭದ್ರ ಬುನಾದಿಯಾಗಲಿವೆ ಎಂದರು.

ಕಸಾಪ‌ ಮಾಜಿ ಜಿಲ್ಲಾಧ್ಯಕ್ಷ ಡಾ. ಶಿವಪ್ಪ ಕುರಿ, ಬಿಇಒ ವಿ.ವಿ‌‌. ನಡುವಿನಮನಿ ಹಾಗೂ ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿದರು. ದಿಂಗಾಲೇಶ ಜಂಗಳಿ, ಪ್ರಿಯಾಂಕ್ ಲಮಾಣಿ, ಪ್ರೀತಿ ಬುಳ್ಳಾ, ಹರ್ಷಿತಾ ಕೋರಿಶೆಟ್ಟರ ಸೇರಿದಂತೆ ವಿವಿಧ ಮಕ್ಕಳಿಗೆ ಬಾಲ ಶರಣಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮ್ಮೇಳನದ ಸರ್ವಾಧ್ಯಕ್ಷ ಡಾ. ನಿಂಗು ಸೊಲಗಿ, ರತ್ನಕ್ಕ ಪಾಟೀಲ, ಡಾ. ಉಮೇಶ ಪುರದ, ಡಾ. ಶರಣಬಸವ ವೆಂಕಟಾಪೂರ, ಡಾ. ರಾಜೇಂದ್ರ ಗಡಾದ, ಅಂದಾನೆಪ್ಪ ವಿಭೂತಿ, ಎಂ.ಎಸ್. ಮಣ್ಣೂರಮಠ, ಶಂಕರ ಹಡಗಲಿ, ಡಿ.ಎಸ್.ತಳವಾರ, ಬೂದಪ್ಪ ಅಂಗಡಿ ಸೇರಿದಂತೆ ಅನೇಕರು ಇದ್ದರು. ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ಸ್ವಾಗತಿಸಿದರು. ಬಸವರಾಜ ಸೆಲಿಯಪ್ಪನವರ, ಎ.ವಿ. ಪ್ರಭು ನಿರೂಪಿಸಿದರು. ಅಶ್ವಿನಿ ಅಂಕಲಕೋಟ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಫ್‌ಪಿಒಗಳ ಅಭಿವೃದ್ಧಿಗೆ ಮೌಲ್ಯವರ್ಧನೆ, ಇ-ಮಾರ್ಕೆಟಿಂಗ್ ಅಗತ್ಯ: ಜಯಣ್ಣ
ಬೂತಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು