ಹೆಬ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 1988–1991ರ ಅವಧಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ವಿದ್ಯಾಭ್ಯಾಸ ನಡೆಸಿದ ಪೂರ್ವ ವಿದ್ಯಾರ್ಥಿಗಳ ವತಿಯಿಂದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭಾನುವಾರರ್ ನಡೆಯಿತು.
ಹೆಬ್ರಿ: ಹೆಬ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 1988–1991ರ ಅವಧಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ವಿದ್ಯಾಭ್ಯಾಸ ನಡೆಸಿದ ಪೂರ್ವ ವಿದ್ಯಾರ್ಥಿಗಳ ವತಿಯಿಂದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭಾನುವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ವಿದ್ಯಾಧರ ಹೆಗ್ಡೆ ಎಸ್. ವಹಿಸಿದ್ದರು. ಗುರುವಂದನಾ ಸಮಾರಂಭದಲ್ಲಿ ಅಂದಿನ ಗುರುಗಳಾದ ಡಾ. ಪಾದೆಕಲ್ಲು ವಿಷ್ಣು ಭಟ್, ಡಾ. ಪ್ರಭು ಶೆಟ್ಟಿ, ಡಾ. ಎಂ.ಎನ್. ಹೆಗ್ಡೆ, ಪ್ರೊ. ರಾಜಶೇಖರ ಹೆಬ್ಬಾರ್, ಡಾ. ಸುಕನ್ಯಾ ಮೇರಿ ಪೆರ್ನಾಂಡಿಸ್, ಡಾ. ಅನಂತ ಪದ್ಮನಾಭ ಆಚಾರ್ ಹಾಗೂ ಅಂದಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ನರೇಂದ್ರ ಎಸ್. ಭಾಗವಹಿಸಿ, ತಮ್ಮ ಹಳೆಯ ವಿದ್ಯಾರ್ಥಿಗಳಿಂದ ಪೇಟ, ಶಾಲು ಮತ್ತು ಸ್ಮರಣಿಕೆಯೊಂದಿಗೆ ಗುರುವಂದನಾ ಸನ್ಮಾನ ಸ್ವೀಕರಿಸಿದರು.ತಮ್ಮ ನೆಚ್ಚಿನ ಗುರುಗಳಿಗೆ ಅಂದಿನ ವಿದ್ಯಾರ್ಥಿನಿಯರು ಆರತಿ ಬೆಳಗಿಸಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಗುರುಗಳು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ, ಸುಮಾರು ಮೂವತ್ತೈದು ವರ್ಷಗಳ ಹಿಂದಿನ ವಿದ್ಯಾರ್ಥಿ ಜೀವನದ ಸವಿ ನೆನಪುಗಳನ್ನು ಹಂಚಿಕೊಂಡರು.
ಗುರುವಂದನಾ ಕಾರ್ಯಕ್ರಮದಲ್ಲಿ ಕೆಲ ವಿದ್ಯಾರ್ಥಿಗಳು ಗುರುಗಳ ವ್ಯಕ್ತಿತ್ವ ಪರಿಚಯವನ್ನು ನಡೆಸಿಕೊಟ್ಟರು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಪರಿಚಯವನ್ನು ಮಾಡಿಕೊಂಡು ಸ್ನೇಹ ಬಾಂಧವ್ಯವನ್ನು ಮರುಸ್ಮರಿಸಿದರು.ಪ್ರಾಂಶುಪಾಲ ಡಾ. ವಿದ್ಯಾಧರ ಹೆಗ್ಡೆ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುದ್ದು ಪೂಜಾರಿ ವಂದಿಸಿದರು. ಶ್ರೀ ಮುದ್ರಾಡಿ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ನಾಯಕ್ ಕಾರ್ಯಕ್ರಮ ಸಂಯೋಜಿಸಿದರು. ಹೇಮಲತಾ ಹಾಗೂ ತಂಡದವರಿಂದ ಪ್ರಾರ್ಥನೆ ನೆರವೇರಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.