ಹಳೇಬೀಡು ಸಮುದಾಯ ಆರೋಗ್ಯ ಕೇಂದ್ರಕ್ಕೆ ಶ್ರೇಷ್ಠ ವೈದ್ಯ ಪ್ರಶಸ್ತಿ

KannadaprabhaNewsNetwork | Published : Jul 5, 2024 12:46 AM

ಸಾರಾಂಶ

ಹಳೇಬೀಡಿನ ಸಮುದಾಯ ಆಸ್ಪತ್ರೆಗೆ ಶ್ರೇಷ್ಠ ವೈದ್ಯ ಪ್ರಶಸ್ತಿ ಲಭಿಸಿದೆ. ಹಳೇಬೀಡು ಬೇಲೂರು ತಾಲೂಕಿಗೆ ದೊಡ್ಡ ಹೋಬಳಿ ಕೇಂದ್ರವಾಗಿದ್ದು, ಸುಮಾರು ೬೨ ಹಳ್ಳಿಗಳಿಗೆ ಸೇರಿದ ಸಮುದಾಯ ಆರೋಗ್ಯ ಕೇಂದ್ರವಾಗಿದೆ. ಪ್ರಶಸ್ತಿಗೆ ಸ್ಥಳೀಯ ಎಲ್ಲಾ ವೈದ್ಯರು, ಸಿಬ್ಬಂದಿ ವರ್ಗದವರು ಸಹಕಾರ ಕಾರಣ ಎಂದು ಹಳೇಬೀಡು ಸಮುದಾಯ ಆರೋಗ್ಯ ಕೇಂದ್ರ ಅಧಿಕಾರಿ ಡಾ. ಅನಿಲ್ ಕುಮಾರ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಳೇಬೀಡು

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಸರ್ಕಾರದಿಂದ ಶ್ರೇಷ್ಠ ವೈದ್ಯ ಪ್ರಶಸ್ತಿ ಲಭಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಬೆಂಗಳೂರಿನ ವಿಧಾನಸೌಧದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಳೇಬೀಡಿನ ಸಮುದಾಯ ಆಸ್ಪತ್ರೆಗೆ ಶ್ರೇಷ್ಠ ವೈದ್ಯ ಪ್ರಶಸ್ತಿ ಲಭಿಸಿದೆ ಎಂದು ಹಳೇಬೀಡು ಸಮುದಾಯ ಆರೋಗ್ಯ ಕೇಂದ್ರ ಅಧಿಕಾರಿ ಡಾ. ಅನಿಲ್ ಕುಮಾರ್ ತಿಳಿಸಿದರು.

ಹಳೇಬೀಡು ಬೇಲೂರು ತಾಲೂಕಿಗೆ ದೊಡ್ಡ ಹೋಬಳಿ ಕೇಂದ್ರವಾಗಿದ್ದು, ಸುಮಾರು ೬೨ ಹಳ್ಳಿಗಳಿಗೆ ಸೇರಿದ ಸಮುದಾಯ ಆರೋಗ್ಯ ಕೇಂದ್ರವಾಗಿದೆ. ಇಲ್ಲಿಗೆ ನಿತ್ಯವೂ ಅನಾರೋಗ್ಯದಿಂದ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿ ಗುಣಮುಖ ಮಾಡಿ ಕಳಿಸಿಕೊಡುತ್ತಾರೆ. ಇಲ್ಲಿನ ಸುತ್ತಮುತ್ತಲು ಹಲವಾರು ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೂ ಸಹ ಹಳೇಬೀಡಿಗೆ ಬರುವುದು ಹಿಂದಿನಿಂದ ವಾಡಿಕೆ. ಸ್ಥಳೀಯ ಆಸ್ಪತ್ರೆ ಮೊದಲಿಂದಲೂ ಸ್ವಚ್ಛತೆಗೆ ಹೆಸರು ಮಾಡಿದೆ. ಹಳೇಬೀಡಿನ ದೇವಾಲಯನ್ನು ವೀಕ್ಷಿಸುವ ಕೆಲವು ಅಧಿಕಾರಿಗಳು ಹಾಗೂ ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು, ಆಸ್ಪತ್ರೆಗೆ ಭೇಟಿ ನೀಡಿ ಒಳ್ಳೆಯ ವಾತಾವರಣ, ಸ್ವಚ್ಛತೆ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಮಾಧ್ಯಮದಲ್ಲಿ ಹಲವಾರು ವರದಿ ಬಂದಿದೆ. ಇವುಗಳನ್ನು ಕರ್ನಾಟಕ ರಾಜ್ಯ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗಮನಿಸಿ ಈ ಆಸ್ಪತ್ರೆಗೆ ಶ್ರೇಷ್ಠ ವೈದ್ಯ ಪ್ರಶಸ್ತಿ ನೀಡಿರುವುದು ಸಂತೋಷ ವಿಚಾರವಾಗಿದೆ. ಈ ಪ್ರಶಸ್ತಿಗೆ ಸ್ಥಳೀಯ ಎಲ್ಲಾ ವೈದ್ಯರು, ಸಿಬ್ಬಂದಿ ವರ್ಗದವರು ಸಹಕಾರ ಕಾರಣ. ಹಾಗೂ ಸ್ಥಳೀಯ ಜನತೆಯ ಸಹಕಾರ, ಕ್ಷೇತ್ರ ಶಾಸಕರಾದ ಎಚ್‌.ಕೆ.ಸುರೇಶ್‌ರವರ ಸಹಕಾರ ನಮ್ಮ ಕೇಂದ್ರಕ್ಕೆ ದೊರಕಿದೆ ಎಂದು ತಿಳಿಸಿದರು.

ಕ್ಷೇತ್ರ ಶಾಸಕರ ಭೇಟಿ: ಹಳೇಬೀಡಿನ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಸುರೇಶ್‌, ವೈದ್ಯರು ಮತ್ತು ಸಿಬ್ಬಂದಿಯನ್ನು ಕರೆಸಿ ಶಾಸಕರು ಗೌರವ ಸಮರ್ಪಣೆ ನೀಡಿ ಅಭಿನಂದಿಸಿ ಈ ಪ್ರಶಸ್ತಿ ಸಿಗಲು ಕಾರಣ ಸ್ಥಳಿಯ ಪರ್ತ್ರಕರ್ತರು. ಇಲ್ಲಿಗೆ ಬರುವ ಗೌರವಾನ್ವಿತ(ವಿ.ಐ.ಪಿ.) ವ್ಯಕ್ತಿಗಳಿಗೆ ಆಸ್ಪತ್ರೆಯ ವಿಚಾರಗಳನ್ನ ತಿಳಿಸಿ ವರದಿ ನೀಡಿದ್ದಾರೆ. ಕೊರೋನಾ ಸಂಧರ್ಭದಲ್ಲಿ ಉತ್ತಮ ಚಿಕಿತ್ಸೆ ನೀಡಿದ್ದಾರೆ. ಇದೇ ರೀತಿ ಆಸ್ಪತ್ರೆಯನ್ನು ಮುಂದುವರಿಸಿ ಮುಂದೆ ದಿನಗಳಲ್ಲಿ ರಾಷ್ಟ್ರ ಪ್ರಶಸ್ತಿ ಸಿಗಲಿ ಎಂದು ಹಾರೈಸಿ ನಮ್ಮಸಹಕಾರ ಇರುತ್ತದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾದ ಪರಮೇಶ್ವರ್, ವಿನಯ್, ರಂಜಿತ್, ಈಶ್ವರ್‌, ಅಶೋಕ್‌ ಹಾಗೂ ಇಲಾಖೆ ಸಿಬ್ಬಂದಿ ಹಾಜರಿದ್ದರು.

ಚಿತ್ರ-೨-- ಹಳೇಬೀಡಿನ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಮತ್ತು ಸಿಬ್ಬಂದಿಯನ್ನು ಕರೆಸಿ ಶಾಸಕರು ಗೌರವ ಸಮರ್ಪಣೆ ನೀಡಿ ಅಭಿನಂದಿಸಿದರು.

Share this article