- ತಹಸೀಲ್ದಾರ್ಗೆ ರೈತರ ಮನವಿ । ಡೀಮ್ಡ್ ಫಾರೆಸ್ಟಾದಲ್ಲಿ ಜಾನುವಾರುಗಳಿಗೆ ತೊಂದರೆ
ಕನ್ನಡಪ್ರಭ ವಾರ್ತೆ ಜಗಳೂರು
ಹಾಲೇಕಲ್ ಗ್ರಾಮದ ರಿಜಿಸ್ಟರ್ ಸರ್ವೇ ನಂಬರ್ 74ರ ಜಮೀನನ್ನು ಹುಲ್ಲು ಬನಿ ಖರಾಬು ಆಗಿ ಉಳಿಸುವಂತೆ ಒತ್ತಾಯಿಸಿ ಹಾಲೇಕಲ್ಲು ಗ್ರಾಮದ ರೈತರು ಹಾಗೂ ಗ್ರಾಮಸ್ಥರು ಪಟ್ಟಣಕ್ಕೆ ಆಗಮಿಸಿ ತಹಸೀಲ್ದಾರ್ಗೆ ಶುಕ್ರವಾರ ಮನವಿ ಸಲ್ಲಿಸಿದರು.ಗ್ರಾಮದ ಮುಖಂಡ ಜಿ.ಚಂದ್ರಪ್ಪ ಮಾತನಾಡಿ ಹಾಲೇಕಲ್ಲು ಗ್ರಾಮಕ್ಕೆ ಲಗತ್ತಾಗಿರುವ ರಿ. ಸ.ನಂ.74 (378 ಎಕರೆ) ಹುಲ್ಲು ಬನಿ ಖರಾಬು ಜಮೀನನ್ನು 2014ರಲ್ಲಿ ಸರ್ಕಾರ ಮತ್ತು ಜಿಲ್ಲಾಧಿಕಾರಿ ಸಮಿತಿಯು ಡೀಮ್ಡ್ ಫಾರೆಸ್ಟ್ ಪರಿಭಾವಿತ ಅರಣ್ಯ ಪ್ರದೇಶ ಎಂದು ಸೇರಿಸಿದೆ. ಡೀಮ್ಡ್ ಫಾರೆಸ್ಟ್ ಪರಿಭಾವಿತ ಅರಣ್ಯ ಪ್ರದೇಶವಾದರೆ 700 ರಿಂದ 800 ಮನೆಗಳಿರುವ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಹೊಂದಿರುವ ಹಾಲೇಕಲ್ಲು ಗ್ರಾಮದಲ್ಲಿನ ಸಾವಿರಾರು ಜಾನುವಾರುಗಳು ಮತ್ತು ಸಾವಿರಾರು ಕುರಿ- ಮೇಕೆಗಳಿಗೆ ತೊಂದರೆ ಆಗುತ್ತದೆ ಎಂದರು.
ಗ್ರಾಮದ ಮುಖಂಡರಾದ ಟಿ.ಎಸ್ .ಮದನ್ ಕುಮಾರ್, ಗೋಣಿಬಸಪ್ಪ ಎಸ್.ಬಿ., ಬಿ.ಎಚ್. ಗೋನಪ್ಪ, ಜಿ.ಚಂದ್ರಪ್ಪ, ಎ.ಕೆ. ಬಸವರಾಜಪ್ಪ, ಎಂ.ಬಿ. ಜಯಪ್ಪ, ದೇವೇಂದ್ರಪ್ಪ, ಎಂ.ಜೆ. ಬಸವರಾಜಪ್ಪ, ನಾಗಪ್ಪ, ಕುಬೇಂದ್ರಪ್ಪ, ಕರಿಬಸಪ್ಪ ರೇವಣಸಿದ್ದಪ್ಪ, ಲಕ್ಷ್ಮಣ್, ಕೊಟ್ರೇಶಿ ಸೇರಿದಂತೆ ಗ್ರಾಮಸ್ಥರು, ರೈತರು ಪಾಲ್ಗೊಂಡಿದ್ದರು.
(ಬಾಕ್ಸ್) * ಜಾನುವಾರು ಮೇಯಿಸಲು ಅಧಿಕಾರಿಗಳು ತೊಂದರೆ ಗ್ರಾಮದ ಮುಖಂಡ ಎ.ಕೆ. ಬಸವರಾಜಪ್ಪ ಮಾತನಾಡಿ, ಹಾಲೇಕಲ್ಲು ಗ್ರಾಮದ ರಿ. ಸ.ನಂ.73ರಲ್ಲಿ ಸುಮಾರು 335 ಎಕರೆ ಅರಣ್ಯ ಇಲಾಖೆಗೆ ಸೇರಿದೆ. ಹಾಗಾಗಿ ಈ ಮೇಲಿನ ಜಾನುವಾರುಗಳಿಗೆ ಮತ್ತು ಅರಣ್ಯ ಇಲಾಖೆ ಒಳಗಡೆ ಕುರಿ- ಮೇಕೆಗಳನ್ನು ಮೇಯಿಸಲು ಹೋದರೆ ಅಧಿಕಾರಿಗಳು ತೊಂದರೆ ಕೊಡುತ್ತಾರೆ. ಹಾಗಾಗಿ, ಈಗಿರುವ ರಿ.ಸ.ನಂ. 74ರ ಪ್ರದೇಶವನ್ನು ಸಹ ಪರಿಭಾವಿತ ಅರಣ್ಯ ಪ್ರದೇಶ ಪಟ್ಟಿಯಿಂದ ಬಿಡುಗಡೆಗೊಳಿಸಿ, ಜಾನುವಾರುಗಳ ಮೇಯಿಸಲು ಅನುಕೂಲ ಕಲ್ಪಿಸಬೇಕು ಎಂದರು.
-25ಜೆಜಿಎಲ್1: