ಮಂಗಳೂರಿನ ಕೂಳೂರಿನಲ್ಲಿ ಅರ್ಧದಿನ ಟ್ರಾಫಿಕ್‌ ಜಾಮ್‌

KannadaprabhaNewsNetwork |  
Published : Aug 22, 2024, 12:54 AM IST
ಕೂಳೂರು-ಕುಂಟಿಕಾನ ಮೇಲ್ಸೇತುವೆಯಲ್ಲಿ ಟ್ರಾಫಿಕ್‌ ಜಾಮ್‌ ಆಗಿರುವುದು | Kannada Prabha

ಸಾರಾಂಶ

ಕೂಳೂರು ಜಂಕ್ಷನ್‌ನಲ್ಲಿ ಕೇವಲ ಮೂರು ಮಂದಿ ಸಂಚಾರಿ ಪೊಲೀಸರು ಇದ್ದ ಕಾರಣ ಟ್ರಾಫಿಕ್‌ ನಿಯಂತ್ರಣಕ್ಕೆ ಹೆಣಗಾಡಬೇಕಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಷ್ಟ್ರೀಯ ಹೆದ್ದಾರಿ 66 ಹಾದುಹೋಗುವ ನಗರದ ಹೊರವಲಯದ ಕೂಳೂರು ಸೇತುವೆಯಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಇನ್ನೊಂದು ಸೇತುವೆಯ ಏಕಪಥದಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಕಾರಣ ಬುಧವಾರ ಅಪರಾಹ್ನದಿಂದ ರಾತ್ರಿ ವರೆಗೆ ತೀವ್ರ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಪಣಂಬೂರಿನಿಂದ ಮಂಗಳೂರಿಗೆ ಆಗಮಿಸುವ ಭಾಗದಲ್ಲಿ ಕೂಳೂರು ಸೇತುವೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ದುರಸ್ತಿಗಾಗಿ ಆ.19ರಿಂದ ಜಿಲ್ಲಾಧಿಕಾರಿಗಳು ವಾಹನ ಸಂಚಾರ ನಿಷೇಧಿಸಿದ್ದರು. ಮಂಗಳೂರಿನಿಂದ ನಿರ್ಗಮಿಸುವ ಇನ್ನೊಂದು ಸೇತುವೆಯಲ್ಲಿ ಒಂದು ಭಾಗದಲ್ಲಿ ಮಾತ್ರ ಘನ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರು. ಇದು ಸೋಮವಾರದಿಂದಲೇ ಜಾರಿಗೆ ಬಂದಿದ್ದು, ಸಂಜೆ ವೇಳೆಗೆ ಮಾತ್ರ ವಾಹನ ದಟ್ಟಣೆ ಉಂಟಾಗುತ್ತಿತ್ತು.

ಸೇತುವೆಗೆ ಡಾಂಬರೀಕರಣ: ವಾಹನ ಸಂಚಾರ ನಿಷೇಧಕ್ಕೆ ಒಳಗಾದ ಕೂಳೂರು ಸೇತುವೆಗೆ ಬುಧವಾರ ಡಾಂಬರೀಕರಣ ಆರಂಭಿಸಲಾಗಿದೆ. ಇದೇ ವೇಳೆ ಇನ್ನೊಂದು ಸೇತುವೆಯಲ್ಲಿ ವಾಹನಗಳ ಆಗಮನ ಮತ್ತು ನಿರ್ಗಮನ ಒಂದು ಭಾಗದಲ್ಲಿ ಮಾತ್ರ ನಡೆಯುತ್ತಿತ್ತು. ಆದರೆ ಬುಧವಾರ ಅಪರಾಹ್ನ ಟ್ಯಾಂಕರ್‌, ಟ್ರಕ್‌ಗಳು ಸಂಚರಿಸಿದ ಕಾರಣ ಟ್ರಾಫಿಕ್‌ ಜಾಮ್‌ ಉಂಟಾಯಿತು.

ಕೂಳೂರು ಜಂಕ್ಷನ್‌ನಲ್ಲಿ ಕೇವಲ ಮೂರು ಮಂದಿ ಸಂಚಾರಿ ಪೊಲೀಸರು ಇದ್ದ ಕಾರಣ ಟ್ರಾಫಿಕ್‌ ನಿಯಂತ್ರಣಕ್ಕೆ ಹೆಣಗಾಡಬೇಕಾಯಿತು.

ಸಂಜೆಯಿಂದ ಟ್ರಾಫಿಕ್‌ ಸಮಸ್ಯೆ ಉಲ್ಭಣಿಸಿದ್ದು, ನಂತೂರು, ಕುಂಟಿಕಾನ, ಮಾಲೇಮಾರ್‌, ಕೊಟ್ಟಾರಚೌಕಿ ಮತ್ತಿತರ ಕಡೆಗಳಲ್ಲಿ ಸಂಪೂರ್ಣ ಬ್ಲಾಕ್‌ ಆಗಿದ್ದು, ವಾಹನ ಸಂಚಾರ ಗಂಟೆಗಟ್ಟಲೆ ಸ್ತಬ್ಧಗೊಂಡಿತ್ತು. ಎ.ಜೆ. ಆಸ್ಪತ್ರೆಯಿಂದ ನಿರ್ಗಮಿಸಬೇಕಾದ ಆ್ಯಂಬುಲೆನ್ಸ್‌ಗಳು ಹೊರಬರಲಾಗದೆ ಪ್ರವೇಶ ದ್ವಾರದಲ್ಲೇ ಪರದಾಟ ನಡೆಸುವಂತಾಯಿತು. ದೂರದ ಊರುಗಳಿಂದ ಸ್ವಂತ ವಾಹನಗಳಲ್ಲಿ, ಬಸ್‌ಗಳಲ್ಲಿ ಆಗಮಿಸಿದ ಪ್ರಯಾಣಿಕರು ಅರ್ಧದಲ್ಲೇ ಸಿಲುಕಿ ತೊಂದರೆ ಅನುಭವಿಸಬೇಕಾಯಿತು.

ಕೂಳೂರು ಮೇಲ್ಸೇತುವೆ ಪೂರ್ತಿ ಕುಂಟಿಕಾನ ವರೆಗೆ ಬ್ಲಾಕ್‌ ಆಗಿದ್ದು, ವಾಹನಗಳ ಮಾರುದ್ಧದ ಸಾಲು ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಮಂಗಳೂರಿನ ಸಂಚಾರಿ ಸಮಸ್ಯೆಗೆ ನೆಟ್ಟಿಗರು ಹಿಡಿ ಶಾಪ ಹಾಕುತ್ತಿದ್ದುದು ಕಂಡುಬಂತು. ನಗರ ಪೊಲೀಸ್‌ ಕಮಿಷನರ್‌, ಟ್ರಾಫಿಕ್‌ ಎಸಿಪಿ ಸೇರಿದಂತೆ ಪೊಲೀಸ್‌ ಅಧಿಕಾರಿಗಳಿಗೆ ಸಂಚಾರ ಸಮಸ್ಯೆ ಸರಿಪಡಿಸುವಂತೆ ಬಿಡುವಿಲ್ಲದ ಸಂದೇಶ, ಕರೆಗಳು ಬಂದಿವೆ. ಸಂಚಾರಿ ಪೊಲೀಸರು ಟ್ರಾಫಿಕ್‌ ನಿಯಂತ್ರಣಕ್ಕೆ ಹರಸಾಹಸಪಟ್ಟಿದ್ದು, ರಾತ್ರಿ ವೇಳೆಗೆ ಟ್ರಾಫಿಕ್‌ ದಟ್ಟಣೆ ನಿಧಾನವಾಗಿ ಇಳಿಯತೊಡಗಿತ್ತು. ಈಗಾಗಲೇ ದುಸ್ಥಿತಿಯ ಹೆದ್ದಾರಿ ಸರಿಪಡಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ ಕಚ್ಚಾ ವಸ್ತುಗಳು ತಡವಾಗಿ ಲಭ್ಯವಾಗಿದ್ದು, ರಾತ್ರಿ ವರೆಗೆ ಡಾಂಬರೀಕರಣ ಕಾಮಗಾರಿ ನಡೆಯಲಿದೆ. ಪೊಲೀಸರಿಗೆ ಮಾಹಿತಿ ನೀಡಿದರೂ ಅವರ ಅಸಹಕಾರದಿಂದ ಟ್ರಾಫಿಕ್‌ ಜಾಮ್‌ ತಲೆದೋರಿದೆ.

-ಅಬ್ದುಲ್‌ ಜಾವೇದ್‌ ಅಜ್ಮಿ, ಎನ್‌ಎಚ್‌ಎಐ ಕಾರ್ಯಕಾರಿ ನಿರ್ದೇಶಕ. ಆ.19ರಿಂದಲೇ ವಾಹನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದೇನೆ. ಟ್ರಾಫಿಕ್ ಜಾಮ್‌ ವಿಚಾರ ಗಮನಕ್ಕೆ ಬಂದಿದ್ದು, ಆ.22ರಂದು ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ.

-ಮುಲ್ಲೈ ಮುಗಿಲನ್‌, ಜಿಲ್ಲಾಧಿಕಾರಿ, ದ.ಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ