ನಮ್ಮ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಅರ್ಧದಷ್ಟು ಅಂದರೆ ಮೂರು ಕೋಟಿ ಜನರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಲುದಾರರಾಗಿದ್ದಾರೆ ಎಂದು ಜಿಲ್ಲಾ ಯೋಜನಾ ನಿರ್ದೇಶಕ ಶಿವರಾಯ ಪ್ರಭು ಹೇಳಿದರು.
ಹಾವೇರಿ: ನಮ್ಮ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಅರ್ಧದಷ್ಟು ಅಂದರೆ ಮೂರು ಕೋಟಿ ಜನರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಲುದಾರರಾಗಿದ್ದಾರೆ ಎಂದು ಜಿಲ್ಲಾ ಯೋಜನಾ ನಿರ್ದೇಶಕ ಶಿವರಾಯ ಪ್ರಭು ಹೇಳಿದರು.
ನಗರದ ಗುರುಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಾವೇರಿ ಜಿಲ್ಲೆಯಲ್ಲಿ ₹೨೧,೧೩,೮೪,೪೪೫ ಹಾಗೂ ತಾಲೂಕಿನಲ್ಲಿ ₹೧,೬೨,೧೦,೫೮೦ ಲಾಭಾಂಶ ವಿತರಿಸಲಾಗಿದೆ. ಮಹಿಳೆಯರಿಂದ ಮಾತ್ರ ಉಳಿತಾಯ, ಆರ್ಥಿಕತೆ ಬೆಳೆಯಲು ಸಾಧ್ಯ. ಪಡೆದ ಲಾಭಾಂಶ ಸದ್ಬಳಕೆಯಾಗಬೇಕು. ಸಂಘಗಳ ವಾರದ ಸಭೆ ಜೀವಾಳವಾದರೆ ನಿರ್ಣಯ ಪುಸ್ತಕ ನಿಮ್ಮ ಆಸ್ತಿ ಇದ್ದಂತೆ. ನಮ್ಮ ಸಂಸ್ಥೆ ಬ್ಯಾಂಕಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಪ್ರಾದೇಶಿಕ ಕಚೇರಿಯ ಲೆಕ್ಕ ಪರಿಶೋಧಕ ಯೋಜನಾಧಿಕಾರಿ ರಾಘವೇಂದ್ರ ಮಾತನಾಡಿ, ಸ್ವಸಹಾಯ ಸಂಘಗಳಿಂದ ಪಡೆದ ಸಾಲ ಮರುಪಾವತಿ, ಪಾರದರ್ಶಕ ವ್ಯವಹಾರ ಪದ್ಧತಿ ಪ್ರತಿಯೊಬ್ಬರೂ ತಿಳಿದಿರಬೇಕು. ಸಂಘದ ಲಾಭ ಎಲ್ಲ ಸದಸ್ಯರಿಗೂ ದೊರೆಯುವುದು ಎಂದರು.
ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಮಹಿಳೆಯರ ಆರ್ಥಿಕ ಸಬಲೀಕರಣ ಈ ಯೋಜನೆಯಿಂದ ಸಾಧ್ಯ. ಧರ್ಮಸ್ಥಳ ಸಂಸ್ಥೆ ಒಂದು ವರದಾನವಾಗಿದೆ. ಧರ್ಮಸ್ಥಳ ಡಾ. ವೀರೇಂದ್ರ ಹೆಗ್ಗಡೆ ಅವರ ಸಮಾಜಮುಖಿ ಕಾರ್ಯಕ್ರಮಗಳು ಅನುಕರಣೀಯ ಎಂದರು.
ನಗರಸಭಾ ಸದಸ್ಯೆ ಚೆನ್ನಮ್ಮ ಬ್ಯಾಡಗಿ ಮಾತನಾಡಿ, ಸಮಾಜದ ಉನ್ನತಿ-ಅವನತಿ ಮಹಿಳೆಯರನ್ನು ಅವಲಂಬಿಸಿದೆ ಎಂದರು. ಮೂಕಾಂಬಿಕಾ, ಮಲ್ಲಿಗೆ, ಮುರ್ಡೇಶ್ವರ, ಗಣಪತಿ ಹಾಗೂ ರೋಶನಿ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಿಸಲಾಯಿತು. ಒಕ್ಕೂಟದ ಶಾಂತಮ್ಮ, ಪ್ಯಾರಿ ಜಾನ್ ಹಾಗೂ ಯೋಜನಾಧಿಕಾರಿ ನಾರಾಯಣ ಇದ್ದರು.
ಮೇಲ್ವಿಚಾರಕಿ ಜಯಶ್ರೀ ಸ್ವಾಗತಿಸಿದರು. ಮೇಲ್ವಿಚಾರಕಿ ಗೀತಾ ಕಾರ್ಯಕ್ರಮ ನಿರೂಪಿಸಿದರು. ಪುಷ್ಪ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.