ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಇತ್ತೀಚಿನ ವರ್ಷಗಳಲ್ಲಿ ಸಂಘಟನೆಯ ಶಕ್ತಿಯನ್ನು ನೋಡಿ ಸೌಲಭ್ಯ ನೀಡುವ ವ್ಯವಸ್ಥೆ ಬಂದಿದ್ದು, ಹಳ್ಳಿಕಾರ್ ಸಮುದಾಯದವರು ಸಂಘಟಿತರಾಗದ ಕಾರಣ ನಮ್ಮ ಸಮುದಾಯಕ್ಕೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಆದ್ದರಿಂದ ರಾಜ್ಯದ ಅನೇಕ ಕಡೆಗಳಲ್ಲಿ ಹರಿದು ಹಂಚಿ ಹೋಗಿರುವ ನಮ್ಮ ಸಮುದಾಯದ ಜನರೆನ್ನೆಲ್ಲಾ ಒಟ್ಟಾಗಿ ಸೇರಿಸಿ, ನಮ್ಮ ಸಂಘಟನೆಯನ್ನು ಬಲ ತೋರಿಸಲು ಅಕ್ಟೋಬರ್ ೨೭ರಂದು ಬೆಂಗಳೂರನಲ್ಲಿ ಹಳ್ಳಿಕಾರ್ ಸಮಾವೇಶ ನಡೆಸುತ್ತಿದ್ದೇವೆ. ಆದ್ದರಿಂದ ಜನಾಂಗದವರು ತಪ್ಪದೇ ಸಮಾವೇಶದಲ್ಲಿ ಭಾಗವಹಿಸಿ ಎಂದು ಹಳ್ಳಿಕಾರ್ ಸಮಾಜದ ರಾಜ್ಯ ಉಪಾಧ್ಯಕ್ಷರಾದ ಕೆ.ಎಂ.ನಾಗರಾಜ್ ಕರೆಕೊಟ್ಟರು.ಪಟ್ಟಣದ ಹೌಸಿಂಗ್ ಬೋರ್ಡ್ ವೃತ್ತದ ಸಮೀಪವಿರುವ ಪಿ.ಆರ್. ಕಲ್ಯಾಣಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಹಳ್ಳಿಕಾರ್ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಈ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಜಿ. ಪರಮೇಶ್ವರ್ ಸೇರಿದಂತೆ ಅನೇಕ ಸಚಿವರು ಆಗಮಿಸುತ್ತಿದ್ದು ನಮ್ಮ ಸಂಘಟನೆಯ ಶಕ್ತಿಯನ್ನು ತೋರಿಸೋಣ ಬನ್ನಿ ಎಂದರು. ನಮಗೆ ಸೂಕ್ತವಾದ ಮೀಸಲಾತಿ ಸೌಲಭ್ಯ ಇಲ್ಲ ಹಾಗೂ ರಾಜ್ಯದ ನಮ್ಮ ಜನಾಂಗಕ್ಕೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಸಮಾವೇಶದಲ್ಲಿ ಈ ಬಗ್ಗೆ ಗಮನಹರಿಸಿ ಪರಿಹರಿಸಿಕೊಳ್ಳೂಣ. ಸಂಘಟನೆಯ ಬಲವರ್ಧನೆಯಿಂದ ಮಾತ್ರ ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯವೆಂದರು.
ಧನರಾಜ್ ಕಾರ್ಯಕ್ರಮ ನಿರೂಪಿಸಿದರು. ಜನಾಂಗದ ಮುಖಂಡರಾದ ಶ್ರೀನಿವಾಸ್ ಮೂರ್ತಿ, ಲಕ್ಷ್ಮಣ್, ಶಿವಣ್ಣ, ಕೃಷ್ಣ, ಬೋಜಣ್ಣ ಮಂಜು, ಕಸ್ತೂರಿ ಧನಂಜಯ್ ಉಪಸ್ಥಿತರಿದ್ದರು.