ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಹಲ್ಮಿಡಿ ಗ್ರಾಮಸ್ಥರ ಮನವಿ

KannadaprabhaNewsNetwork |  
Published : Nov 07, 2025, 02:15 AM IST
5ಎಚ್ಎಸ್ಎನ್3 : ಹಲ್ಮಿಡಿ ಗ್ರಾಮದಲ್ಲಿ  ಅಕ್ರಮ ಮದ್ಯ  ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ  ಅಬಕಾರಿ ನಿರೀಕ್ಷಕರಿಗೆ ಗ್ರಾಮಸ್ಥರು ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಹಲ್ಮಿಡಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಗ್ರಾಮದಲ್ಲಿ ದಿನನಿತ್ಯ ಆರೇಳು ಮನೆಗಳಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ಕುಡಿದವರು ಮನೆಗೆ ಬಂದು ಹೆಂಡತಿ- ಮಕ್ಕಳ ಜೊತೆ ಜಗಳವಾಡಿ ಕಿರುಕುಳ ನೀಡುತ್ತಿದ್ದಾರೆ.

ಬೇಲೂರು: ಹಲ್ಮಿಡಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಬಕಾರಿ ನಿರೀಕ್ಷಕರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಹಲ್ಮಿಡಿ ಗ್ರಾಮದ ನೇತ್ರಾವತಿ ಮಾತನಾಡಿ, ಹಲ್ಮಿಡಿ ಗ್ರಾಮ ಕನ್ನಡದ ಪ್ರಥಮ ಶಿಲಾಶಾಸನ ಕೊಟ್ಟಿರುವ ಗ್ರಾಮ. ಇತರೆ ಗ್ರಾಮದವರಿಗೆ ಮಾದರಿಯಾಗಿರಬೇಕು. ಆದರೆ ಕೆಲವು ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ಹೆಂಗಸರು, ಗಂಡಸರೆನ್ನದೆ ಯುವಕರೂ ಸಹ ಬೆಳಗ್ಗೆಯಿಂದಲೇ ಮದ್ಯ ಸೇವಿಸಿ ಮನಸ್ಸಿಗೆ ಬಂದಂತೆ ಊರು ತುಂಬ ಓಡಾಡುತ್ತಾರೆ. ಕುಡಿದು ಸುಮ್ಮನಿರದೆ ಬೈಕ್‌ಗಳನ್ನು ವೇಗವಾಗಿ ಓಡಿಸುವುದು, ವ್ಹೀಲಿಂಗ್ ಮಾಡುವುದು ಮತ್ತು ಇತರರ ಜತೆ ಗಲಾಟೆ ಮಾಡುವುದರಿಂದ ಗ್ರಾಮದಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದಾರೆ. ಹಲ್ಮಿಡಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಗ್ರಾಮದಲ್ಲಿ ದಿನನಿತ್ಯ ಆರೇಳು ಮನೆಗಳಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ಕುಡಿದವರು ಮನೆಗೆ ಬಂದು ಹೆಂಡತಿ- ಮಕ್ಕಳ ಜೊತೆ ಜಗಳವಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಮಕ್ಕಳು ಶಾಲೆಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಸಮಯದಲ್ಲಿ ಮಕ್ಕಳ ವ್ಯಾಸಂಗಕ್ಕೆ ತೊಂದರೆಯಾಗುತ್ತಿದೆ. ಇನ್ನೂ ನಮ್ಮ ಹಲ್ಮಿಡಿ ಗ್ರಾಮದಲ್ಲಿರುವ ಕನ್ನಡದ ಶಿಲಾ ಶಾಸನ ನೋಡಲು ಪ್ರವಾಸಿಗರು ಬಂದರೆ ಅವರ ವಾಹನ ತಡೆದು ಹಣ ವಸೂಲಿ ಮಾಡುವುದಲ್ಲದೆ ಮಹಿಳೆಯರಿಗೆ ಹಿಂಸೆ ನೀಡುವುದರಿಂದ ಹಲ್ಮಿಡಿ ಗ್ರಾಮಕ್ಕೆ ಕೆಟ್ಟ ಹೆಸರು ಬರುತ್ತಿದೆ. ಈ ವಿಚಾರವಾಗಿ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಮತ್ತೆ ಮನವಿ ಸಲ್ಲಿಸಿದ್ದು ಒಂದು ವಾರದೊಳಗೆ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಜತೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಬೇಲೂರು ಅಬಕಾರಿ ನಿರೀಕ್ಷಕಿ ಅಪೂರ್ವ, ಅಕ್ರಮ ಮದ್ಯ ಮಾರಾಟದ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಶೀಘ್ರದಲ್ಲೇ ಹಲ್ಮಿಡಿ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗುವುದು ಎಂದರು.

ಹಲ್ಮಿಡಿ ಗ್ರಾಮಸ್ಥರಾದ ಮಹೇಶ್, ಕುಮಾರ್, ಅಕ್ಷಯ್, ಲಕ್ಷಣ್, ಧನಲಕ್ಷ್ಮೀ, ಸುಶೀಲಮ್ಮ, ವೇದಾವತಿ, ದಾನಮ್ಮ, ಜಯಮ್ಮ, ಸುಧಾ ಇತರರು ಇದ್ದರು.

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ