ಕೈಮಗ್ಗ ವೃತ್ತಿಗೆ ತುಳುನಾಡಿನ ಜನರ ಸಹಕಾರ ಅಗತ್ಯ: ಡಾ. ಅಮರಶ್ರೀ

KannadaprabhaNewsNetwork | Published : Jun 22, 2025 1:18 AM

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಕದಿಕೆ ಟ್ರಸ್ಟ್ ಸಹಯೋಗದಲ್ಲಿ ಕಿನ್ನಿಗೋಳಿ ನೇಕಾರ ಸೌಧದಲ್ಲಿ ಕೈ ಮಗ್ಗದ ನೇಯ್ಗೆಯ ಹಿರಿಯ ಕುಶಲಕರ್ಮಿ ದೇವಕಿ ಶೆಟ್ಟಿಗಾರ್ ಅವರಿಗೆ ‘ಚಾವಡಿ ತಮ್ಮನ’ ಗೌರವ ಕಾರ್ಯಕ್ರಮ ನಡೆಯಿತು.

ದೇವಕಿ ಶೆಟ್ಟಿಗಾರ್‌ಗೆ ತುಳು ಅಕಾಡೆಮಿ ವತಿಯಿಂದ ಚಾವಡಿ ತಮ್ಮನಕನ್ನಡಪ್ರಭ ವಾರ್ತೆ ಮೂಲ್ಕಿ

ಕೈಮಗ್ಗ ನೇಯ್ಗೆಯವರಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ವರ್ಷದಲ್ಲಿ ಒಂದು ಬಾರಿಯಾದರೂ ತುಳುನಾಡಿನ ಸೀರೆ ಹಾಗೂ ಕೈ ಮಗ್ಗದ ಉತ್ಪನ್ನಗಳನ್ನು ಖರೀದಿಸಿ ತುಳುನಾಡಿನ ಪಾರಂಪರಿಕ ಕೈ ಮಗ್ಗ ವೃತ್ತಿಗೆ ತುಳುನಾಡಿನ ಜನತೆ ಸಹಕಾರ ನೀಡಬೇಕೆಂದು ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಅಸೋಸಿಯೇಟ್ ಡೀನ್ ಡಾ. ಅಮರಶ್ರೀ ಅಮರನಾಥ ಶೆಟ್ಟಿ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಕದಿಕೆ ಟ್ರಸ್ಟ್ ಸಹಯೋಗದಲ್ಲಿ ಕಿನ್ನಿಗೋಳಿ ನೇಕಾರ ಸೌಧದಲ್ಲಿ ಜರುಗಿದ ಕೈ ಮಗ್ಗದ ನೇಯ್ಗೆಯ ಹಿರಿಯ ಕುಶಲಕರ್ಮಿ ದೇವಕಿ ಶೆಟ್ಟಿಗಾರ್ ಅವರಿಗೆ ‘ಚಾವಡಿ ತಮ್ಮನ’ ಗೌರವ ಕಾರ್ಯಕ್ರಮದಲ್ಲಿ ದೇವಕಿ ಶೆಟ್ಟಿಗಾರ್‌ ಅವರನ್ನು ಗೌರವಿಸಿ ಮಾತನಾಡಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ದೇವಕಿ ಶೆಟ್ಟಿಗಾರ್, ತಾಳಿಪಾಡಿ ನೇಕಾರರ ಸೇವಾ ಸಂಘ ಹಾಗೂ ಕದಿಕೆ ಟ್ರಸ್ಟ್ ಕಾರಣದಿಂದಾಗಿ ನಾನು ಮತ್ತೆ ನನ್ನ ಮೂಲ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ನನಗೆ ಸಿಕ್ಕಿದ ಗೌರವವು ಈ ಎರಡೂ ಸಂಸ್ಥೆಗಳಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳು ಬದುಕಿನ ವಿಶಾಲವಾದ ವ್ಯಾಪ್ತಿಯೊಳಗಡೆ ಅನೇಕ ಕುಲಕಸುಬು ಹಾಗೂ ಕುಶಲಕರ್ಮಿಗಳ ಸೇವೆ ತುಳುನಾಡಿಗೆ ಸಂದಿವೆ. ಈ ಹಿನ್ನೆಲೆಯಲ್ಲಿ ಕೈ ಮಗ್ಗ ನೇಯ್ಗೆಯಲ್ಲಿ ತೊಡಗಿಸಿಕೊಂಡ ಹಿರಿಯರನ್ನು ಪ್ರೋತ್ಸಾಹಿಸುವ ಸಲುವಾಗಿ ಅಕಾಡೆಮಿ ವತಿಯಿಂದ ಚಾವಡಿ ತಮ್ಮನದ ಗೌರವ ನೀಡಲಾಯಿತೆಂದು ತಿಳಿಸಿದರು.

ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಮಾತನಾಡಿ, ದೇವಕಿ ಶೆಟ್ಟಿಗಾರ್ ಅವರಂತೆ ಹಿರಿಯರು ಈ ವೃತ್ತಿಯಲ್ಲಿ ಮತ್ತೆ ತೊಡಗಿಸಿಕೊಳ್ಳಲು ಹಾಗೂ ಹೊಸಬರು ಈ ವೃತ್ತಿಗೆ ಬರುವಂತೆ ಪ್ರೇರೆಪಿಸಲು ಸಾಧ್ಯವಾಗಿದೆ ಎಂದರು.

ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಡಾ. ಪ್ರಭಾಕರ ನೀರ್‌ಮಾರ್ಗ, ಕೊಡೆತ್ತೂರು ಸಚ್ಚಿದಾನಂದ ಉಡುಪ, ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ಶುಭಾಶಂಸನೆಗೈದರು. ತಾಳಿಪಾಡಿ ನೇಕಾರರ ಸೇವಾ ಸಂಘ ಅಧ್ಯಕ್ಷೆ ರುಕ್ಮಿಣಿ ಶೆಟ್ಟಿಗಾರ್, ನಿರ್ವಾಹಕ ನಿರ್ದೇಶಕ ಮಾಧವ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಕದಿಕೆ ಟ್ರಸ್ಟ್ ಕಾರ್ಯದರ್ಶಿ ಬಿ.ಸಿ. ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಮಿತಾ ಅಶ್ವಿನ್ ಸನ್ಮಾನ ಪತ್ರ ವಾಚಿಸಿದರು. ತುಳು ಅಕಾಡೆಮಿ ಸದಸ್ಯ ಸಂತೋಷ್ ಶೆಟ್ಟಿ ಹಿರಿಯಡ್ಕ ವಂದಿಸಿದರು.