ಕನ್ನಡಪ್ರಭ ವಾರ್ತೆ ಕುಂದಾಪುರ
ಉಡುಪಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯ ಇಬ್ಬರು ಫಲಾನುಭವಿ ವಿದ್ಯಾರ್ಥಿಗಳಿಗೆ ತೆಂಕುತಿಟ್ಟಿನ ಖ್ಯಾತ ಸ್ತ್ರೀವೇಷಧಾರಿ ಕಡಂದೇಲು ಪುರುಷೋತ್ತಮ ಭಟ್ ಅವರ ಮಗ ಬೆಂಗಳೂರಿನ ಕೆ. ಸದಾಶಿವ ಭಟ್ ಪ್ರಾಯೋಜಕತ್ವದ ಎರಡು ಮನೆಗಳನ್ನು ಹಸ್ತಾಂತರಿಸಲಾಯಿತು.ಫಲಾನುಭವಿಗಳಾದ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ ಗುಜ್ಜಾಡಿಯ ಅಂಕಿತಾ ಹಾಗೂ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ ಕೊಡೇರಿಯ ಶಿವರಾಜ್ ಅವರಿಗೆ ಕೆ. ಸದಾಶಿವ ಭಟ್ ದಂಪತಿ ಎರಡೂ ಮನೆಗಳನ್ನು ಹಸ್ತಾಂತರಿಸಿ, ಇಂದು ನಮ್ಮ ಮನೆ ಒಕ್ಕಲು ಆದ ದಿನಕ್ಕಿಂತಲೂ ಹೆಚ್ಚು ಸಂತಸ, ಧನ್ಯತೆ ತಮಗಾಗಿದೆ. ಅವಕಾಶ ಕಲ್ಪಿಸಿದ ಕಲಾರಂಗಕ್ಕೆ ನಾವು ಋಣಿಗಳೆಂದು ಹರ್ಷ ವ್ಯಕ್ತಪಡಿಸಿದರು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೈಂದೂರಿನ ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಯಕ್ಷಗಾನ ಕಲಾರಂಗವು ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ ನಮ್ಮಂಥ ಜನ ಪ್ರತಿನಿಧಿಗಳಿಗೂ ಮಾದರಿಯಾಗಿದೆ. ಸಂಸ್ಥೆಯೊಂದಿಗೆ ಸದಾ ನಾನಿದ್ದೇನೆ. ನಾವೆಲ್ಲ ಸೇರಿ ಕಷ್ಟದಲ್ಲಿರುವವರ ಕಣ್ಣೀರೊರೆಸಲು ಕ್ರಿಯಾಶೀಲರಾಗೋಣ ಎಂದರು.ಈ ಸಂದರ್ಭ ದಾನಿಗಳಾದ ಯು.ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ಕಿಶೋರ್ ಕನ್ನರ್ಪಾಡಿ, ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ.ಭಟ್, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಕೆ.ಸದಾಶಿವ ರಾವ್, ಸದಸ್ಯರಾದ ವಿಜಯಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ವಿದ್ಯಾಪ್ರಸಾದ್, ಅನಂತರಾಜ ಉಪಾಧ್ಯ, ಕೆ.ಅಜಿತ್ ಕುಮಾರ್, ಅಶೋಕ ಎಂ., ಮರವಂತೆ ಶಾಲೆಯ ಮುಖ್ಯೋಪಾಧ್ಯಾಯ ಸರ್ವೋತ್ತಮ ಭಟ್, ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣ, ಶೋಧನ್, ನಾರಾಯಣ ಗುಜ್ಜಾಡಿ, ಹರೀಶ್ ಮೆಸ್ತ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಎಲ್ಲರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು. ಎಚ್.ಎನ್. ಶೃಂಗೇಶ್ವರ ಸಹಕರಿಸಿದರು.ಇವು ಸಂಸ್ಥೆಯ ವತಿಯಿಂದ ನಿರ್ಮಾಣಗೊಂಡ ೪೭ ಮತ್ತು ೪೮ನೆಯ ಮನೆಗಳಾಗಿವೆ.