ಬಿ.ಎಸ್. ಸುನಿಲ್
ಕಳೆದ 33 ವರ್ಷಗಳ ಹಿಂದೆ ಪ್ರತಿಷ್ಠಾಪಿತವಾದ ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ದೇವಾಲಯ ಧಾರ್ಮಿಕ, ಪ್ರವಾಸಿ ಹಾಗೂ ಶೈಕ್ಷಣಿಕ ಕ್ಷೇತ್ರವಾಗಿ ಬೆಳೆಯುತ್ತಿದ್ದು, ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜೆಯೊಂದಿಗೆ ಜಾಗರಣೆಗೆ ಸಜ್ಜುಗೊಂಡಿದೆ.
ಕಾವೇರಿ ಪುತ್ರ, ಮಾಜಿ ಸಂಸದ ಜಿ.ಮಾದೇಗೌಡರ ಮಹಾದಾಸೆಯೊಂದಿಗೆ ಪ್ರತಿಷ್ಠಾಪಿಸಿದ ಆತ್ಮಲಿಂಗೇಶ್ವರ ದೇಗುಲದಲ್ಲಿ ಈಗಾಗಲೇ ಭಾರೀ ದನಗಳ ಜಾತ್ರೆ ಆರಂಭವಾಗಿದೆ. ನೂರಾರು ರಾಸುಗಳು ಆಗಮಿಸಿದ್ದು ಭಕ್ತರ ಗಮನ ಸೆಳೆಯುತ್ತಿದೆ. ಬುಧವಾರ ರಾತ್ರಿ ಶಿವರಾತ್ರಿ ಅಂಗವಾಗಿ ಜಾಗರಣೆ ನಡೆಯಲಿದೆ. ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಜನತೆ ಆಗಮಿಸಿ ಇಡೀ ರಾತ್ರಿ ಜಾಗರಣೆ ಮಾಡಲಿದ್ದಾರೆ. ದೇವಾಲಯದ ಆವರಣದಲ್ಲಿ ಭಜನೆ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.ಮಂಡ್ಯ, ಮಳವಳ್ಳಿ, ಮದ್ದೂರು, ಹಲಗೂರು ಸೇರಿ ಹಲವೆಡೆಯಿಂದ ಎತ್ತಿನಗಾಡಿ, ಗೂಡ್ಸ್ ಆಟೋ, ಬೈಕ್, ಕಾರು ಮೊದಲಾದ ವಾಹನಗಳ ಮೂಲಕ ರಾತ್ರಿಯಿಂದ ಮುಂಜಾನೆವರೆಗೂ ಭಕ್ತ ಸಾಗರ ಹರಿದು ಬರುತ್ತಲೇ ಇರುತ್ತದೆ. ಭಕ್ತರು ರಾತ್ರಿಯಿಡೀ ದೇವರ ಧ್ಯಾನದಲ್ಲಿ ಮುಳುಗುತ್ತಾರೆ.
ಆರಂಭದ ದಿನಗಳಲ್ಲಿ ಸಾವಿರ ಸಂಖ್ಯೆಯಲ್ಲಿ ಬರುತ್ತಿದ್ದ ಭಕ್ತರ ಸಂಖ್ಯೆ ಈಗ ಲಕ್ಷ ದಾಟಿದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ಮಾದರಿಯಲ್ಲಿ ಇಲ್ಲಿಯೂ ಪ್ರತಿನಿತ್ಯ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತಿದೆ.
ಜಗದೀಶ್, ಗೋಪನಹಳ್ಳಿ.
‘ಆತ್ಮಲಿಂಗೇಶ್ವರಸ್ವಾಮಿ ದೇವಾಲಯಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಭಕ್ತರಿಗೆ ದಾಸೋಹ ಸೇರಿದ ಧಾರ್ಮಿಕ ಚಟುವಟಿಕೆಗಳನ್ನು ಗಮನಿಸಿದರೆ ಈ ದೇಗುಲ ಇತ್ತೀಚೆಗೆ ನಿರ್ಮಾಣವಾಗಿದೆ ಅಂದರೆ ನಂಬಲು ಸಾಧ್ಯವಿಲ್ಲ. ಶ್ರೀ ಕ್ಷೇತ್ರದ ಸ್ವಾಮಿಯು ಇಲ್ಲಿಗೆ ಬರುವ ಭಕ್ತರ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸುತ್ತಾನೆ.’
---
ಮಧು ಜಿ.ಮಾದೇಗೌಡ, ಶಾಸಕರು, ಅಧ್ಯಕ್ಷರು ಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿ.