ಸ್ಮಶಾನವಿಲ್ಲದೆ ಕೊಚ್ಚೆ ನೀರಲ್ಲೇ ಹೆಣ ಹೂಳುವ ಹಾರಕಬಾವಿ ಗ್ರಾಮಸ್ಥರು

KannadaprabhaNewsNetwork | Published : Dec 3, 2024 12:31 AM

ಸಾರಾಂಶ

ತಾಲೂಕಿನ ಹಾರಕಬಾವಿ ಗ್ರಾಮದ ದಲಿತ ವ್ಯಕ್ತಿ ಗುರುವಾರ ಮೃತಪಟ್ಟಿದ್ದ.

ಕೂಡ್ಲಿಗಿ: ತಾಲೂಕಿನ ಹಾರಕಬಾವಿ ಗ್ರಾಮದಲ್ಲಿ ಹೆಣ ಹೂಳಲಿಕ್ಕೂ ಪರದಾಡಬೇಕಾದ ದುಸ್ಥಿತಿ ಇದೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ. ನೂರಾರು ವರ್ಷಗಳ ಕಾಲ ಎಲ್ಲ ವರ್ಗಗಳ ಜನತೆಯ ಸಮಸ್ಯೆ. ಈ ಸಮಸ್ಯೆಗೆ ಮುಕ್ತಿ ದೊರೆತಿಲ್ಲ.

ತಾಲೂಕಿನ ಹಾರಕಬಾವಿ ಗ್ರಾಮದ ದಲಿತ ವ್ಯಕ್ತಿ ಗುರುವಾರ ಮೃತಪಟ್ಟಿದ್ದ. ಆತನ ಶವ ಹೂಳಲು ಹಳ್ಳಕ್ಕೆ ತೆರಳಿದರೆ ಮುಳ್ಳುಕಂಠಿ, ಚರಂಡಿ ನೀರು ಜಿನುಗುತ್ತಿರುವ ಕೊಳಚೆ ನೀರು ಸ್ವಾಗತಿಸುತ್ತಿತ್ತು. ಹೂಳಲು ತಗ್ಗು ತೋಡಿದರೂ ನೀರು ತುಂಬಿಕೊಳ್ಳುತ್ತಿದ್ದರಿಂದ ಹೆಣ ಹೂಳಲು ಬಹಳ ಸಮಸ್ಯೆಯಾಯಿತು. ಇದರಿಂದ ಸ್ಥಳೀಯ ದಲಿತ ಮುಖಂಡರು ಜನಪ್ರತಿನಿಧಿಗಳು, ಸರ್ಕಾರದ ಬೇಜವಾಬ್ದಾರಿತನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಊರ ಪಕ್ಕದಲ್ಲಿಯ ಕಟ್ಟೆಯೊಂದರಲ್ಲಿ ನೀರು ಶೇಖರಣೆಯಾಗಿ ಅದರ ಜಿನುಗು ನೀರು 12 ಅಡಿ ಅಗಲದ ಹಳ್ಳದ ಮೂಲಕ ಹರಿಯುತ್ತಿದೆ. ಈ ಹಳ್ಳದಲ್ಲೂ ಗಿಡ-ಮರ, ಮುಳ್ಳು, ಕಸಕಡ್ಡಿಗಳು ತುಂಬಿಹೋಗಿದೆ. ಸ್ವಚ್ಛತೆಯಂತೂ ಇಲ್ವೇ ಇಲ್ಲ. ಈ ಊರಿನಲ್ಲಿ ಸ್ಮಶಾನ ಇಲ್ಲದಿರುವುದರಿಂದ ಈ ಹಳ್ಳವನ್ನೇ ಸ್ಮಶಾನ ಮಾಡಿಕೊಂಡ ಗ್ರಾಮಸ್ಥರಿಗೆ ಹೆಣ ಹೂಳುವುದೇ ಸಮಸ್ಯೆಯಾಗಿದೆ.

ಜನತೆ ಮುಳ್ಳುಗಿಡಗಳ ಮೇಲೆ ನಿಲ್ಲಬೇಕು. ಕೊಚ್ಚೆ ನೀರಿನಲ್ಲಿ ನಡೆದು ಹೋಗಬೇಕು. ತಗ್ಗು ತೋಡುವಾಗ ನೀರು ಬರುತ್ತದೆ. ಆ ನೀರನ್ನು ಎಷ್ಟು ಸಾರಿ ಎತ್ತಿ ಹೊರಗೆ ಹಾಕಿದರೂ ಪುನಃ ನೀರು ಬಂದು ತಗ್ಗಿನಲ್ಲಿ ಶೇಖರಣೆಯಾಗುತ್ತದೆ. ಹೀಗಾಗಿ ನೀರಿನಲ್ಲಿಯೇ ಹೆಣ ಹೂಳುತ್ತಾರೆ. ಸತ್ತಾಗ ಸಂಸ್ಕಾರ ಮಾಡಲು ಸಹ ಸೂಕ್ತ ಸ್ಮಶಾನವಿಲ್ಲ. ಇಲ್ಲಿಯ ಜನತೆಗೆ ಸತ್ತಾಗ ಸಾವಿಗಿಂತ ಮುಖ್ಯವಾಗಿ ಹೆಣ ಹೂಳುವುದು ಹೇಗಪ್ಪ ಎನ್ನುವ ಆತಂಕ ಕಾಡುತ್ತಿದೆ. ಕೆಲವರು ತಮ್ಮ ಜಮೀನುಗಳಲ್ಲಿಯೇ ಅಂತ್ಯಸಂಸ್ಕಾರ ಮಾಡುತ್ತಾರೆ.

ಹಾರಕಬಾವಿ ಗ್ರಾಮ ಮೂಲೆಕಟ್ಟಿನ ಪುಟ್ಟ ಹಳ್ಳಿಯಲ್ಲ. ಇದು ಗ್ರಾಪಂ ಕೇಂದ್ರಸ್ಥಾನ. ಇಲ್ಲಿಯೇ ಸಾವಿರಾರು ಕುಟುಂಬಗಳಿಗೆ ಸುವ್ಯವಸ್ಥಿತ ಸ್ಮಶಾನ ಇಲ್ಲವೆಂದರೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ವೀರಶೈವರ ರುದ್ರಭೂಮಿ ಪ್ರತ್ಯೇಕ ಇದ್ದರೂ ಅಲ್ಲಿಯೂ ಮುಳ್ಳುಗಿಡ-ಗಂಟೆ ತುಂಬಿವೆ. ಅವರಿಗೂ ಹಳ್ಳವೇ ಗತಿ. ಇದ್ದುದರಲ್ಲಿಯೇ ಇವರ ಸ್ಥಿತಿ ಉತ್ತಮ. ಉಳಿದಂತೆ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದವರು ಎಲ್ಲರೂ ಇದೇ ಪುಟ್ಟ ಹಳ್ಳದಲ್ಲಿಯೇ ಹೂಳಬೇಕಾದ ಅನಿವಾರ್ಯತೆ ಇದೆ.

ನಮ್ಮೂರಲ್ಲಿ ಅಜ್ಜ, ಮುತ್ತಜ್ಜನ ಕಾಲದಿಂದಲೂ ಸ್ಮಶಾನ ಇಲ್ಲ. ಹತ್ತಡಿ ಅಗಲದ ಜಿನುಗು ಹಳ್ಳದಲ್ಲಿಯೇ ಹೂಳಬೇಕು. ದಲಿತ ವ್ಯಕ್ತಿಯ ಶವ ಹೂಳಲು ಹೋದಾಗ ಎಷ್ಟು ತೆಗ್ಗು ತೆಗೆದರೂ ನೀರು ಬರುವುದು ನಿಲ್ಲಲೇ ಇಲ್ಲ. ಗಂಟೆಗಟ್ಟಲೇ ನೀರು ಹೊರಗೆ ಹಾಕುವುದೇ ಸಮಸ್ಯೆಯಾಯ್ತು. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳಲಿ ಎನ್ನುತ್ತಾರೆ ಹಾರಕಬಾವಿ ದಲಿತ ಯುವ ಮುಖಂಡ ರಮೇಶ್.

Share this article