ಕನ್ನಡಪ್ರಭ ವಾರ್ತೆ ಕೊಲ್ಹಾರ
ಪಟ್ಟಣದ ತಹಸೀಲ್ದಾರ್ ಕಚೇರಿಗೆ ತೆರಳಿ ದಿಗಂಬರೇಶ್ವರ ಮಠದ ಪೀಠಾಧಿಪತಿ ಯೋಗಿ ಕಲ್ಲಿನಾಥ ಶ್ರೀಗಳು ಹಾಗೂ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕಲ್ಲು ಸೊನ್ನದ ನೇತೃತ್ವದಲ್ಲಿ ತಹಸೀಲ್ದಾರ ಸಂತೋಷ ಮ್ಯಾಗೇರಿಯವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ ಮಾತನಾಡಿ, ಕೊಲ್ಹಾರ ಗ್ರಾಮ ಕೊಲ್ಹಾರ ಗ್ರಾಮ ಪಂಚಾಯಿತಿ ಇರುವಾಗಲೇ ಮುಳುಗಡೆಯಾಗಿದ್ದು, ಇಂದು ದೊಡ್ಡ ಪಟ್ಟಣವಾಗಿ ತಾಲೂಕು ಕೇಂದ್ರವಾಗಿದೆ. ಕೃಷ್ಣಾ ನದಿಯಲ್ಲಿ ಮುಳುಗಡೆಯಾದ ದೊಡ್ಡ ಪಟ್ಟಣ ಕೊಲ್ಹಾರ ಎರಡನೇ ಸ್ಥಾನ ಪಡೆದುಕೊಂಡಿದ್ದು, ಸರಿಯಾದ ಮೂಲ ಸೌಕರ್ಯ ಹೊಂದಿಲ್ಲ. ಸಾವಿರಾರು ರೈತರು ಹಾಗೂ ಸಾರ್ವಜನಿಕರು ಮನೆ ಮಠ ಬಿಟ್ಟು ಫಲವತ್ತಾದ ಭೂಮಿ ಕಳೆದುಕೊಂಡಿರುತ್ತಾರೆ. ಆದರೆ ಸಂತ್ರಸ್ತರಿಗೆ ಸಿಗಬೇಕಾದ ಸೌಲಭ್ಯಗಳು ಹಾಗೂ ನಿವೇಶನಗಳು ಸಿಗುತ್ತಿಲ್ಲ, ಪರಿಹಾರದ ವ್ಯತ್ಯಾಸವಿದೆ. ಬಾಗಲಕೋಟದಲ್ಲಿ ಮುಳುಗಡೆ ಸಂತ್ರಸ್ತರಿಗೆ ಕೊಟ್ಟಿರುವ ಪ್ರಾಧಾನ್ಯತೆ ಕೊಲ್ಹಾರಕ್ಕೆ ನೀಡಿಲ್ಲ. ಪರಿಶೀಲಿಸಿ, ಕೊಲ್ಹಾರಕ್ಕೆ ಸಂಬಂಧಪಟ್ಟ ನಿವೇಶನಗಳ 1117 ಸಂತ್ರಸ್ತರ ಮೇಲೆ ಸಿಐಡಿಯವರು ಕೇಸ್ ಮಾಡಿದ್ದಾರೆ. ಈಗ ಮತ್ತೆ ತನಿಖಾ ತಂಡ ಅಂತ ಮಾಡಿಕೊಂಡು ಸಂತ್ರಸ್ತರಿಗೆ ವಿನಾಕಾರಣ ರದ್ದುಪಡಿಸಲಾಗಿದೆ ಎಂದು ನೋಟಿಸ್ ಮೂಲಕ ತೊಂದರೆ ಕೊಡುತ್ತಿದ್ದು, ಇದರಿಂದ ಕೊಲ್ಹಾರ ಪಟ್ಟಣದ ಸಂತ್ರಸ್ತರಿಗೆ ತುಂಬಾ ತೊಂದರೆಯಾಗುತ್ತಿದೆ. ಕೂಡಲೇ ಮೂಲ ಸಂತ್ರಸ್ತರ ನಿವೇಶನ ಪರಿಸಿಲಿಸಿ, ನ್ಯಾಯ ದೊರಕಿಸಿಕೊಡಬೇಕು. ಕೊಲ್ಹಾರ ಪಟ್ಟಣ ಪಂಚಾಯಿತಿಯಲ್ಲಿ ಸರಿಯಾಗಿ ಉತಾರ ಕೊಡುತ್ತಿಲ್ಲ ಇದನ್ನೆಲ್ಲ ಗಮನಿಸಿ ನಿವೇಶನಗಳ ಹಂಚಿಕೆ ಮತ್ತು ಉತಾರೆ ಸಿಗುವಂತ ವ್ಯವಸ್ಥೆ ಮಾಡಬೇಕು. ಸೆ.16ರ ಒಳಗಾಗಿ ಪಟ್ಟಣ ಪಂಚಾಯಿತಿಯ ಕಚೇರಿಗೆ ಸಂಬಂಧಪಟ್ಟ ಅಧಿಕಾರಿಗಳ ಬಂದು ಮುಳುಗಡೆ ಸಂತ್ರಸ್ತರ ಜೊತೆ ಸಭೆ ಮಾಡಿ ಸರಿಪಡಿಸಬೇಕು. ಇಲ್ಲವಾದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೊಲ್ಹಾರ ಮುಳುಗಡೆ ಸಂತ್ರಸ್ತರ ಜೊತೆಯಲ್ಲಿ ಶಶಿಕಾಂತ ಗುರೂಜಿ ಹಾಗೂ ಚುನಪ್ಪ ಪೂಜಾರಿ ನೇತೃತ್ವದಲ್ಲಿ ಪಟ್ಟಣ ಪಂಚಾಯತಿಗೆ ಬೀಗ ಹಾಕಿ ಹಾಗೂ ಎನ್.ಎಚ್ 218 ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ವೇಳೆ ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು ಹಾಗೂ ತಾಲೂಕಾಧ್ಯಕ್ಷ ಸೋಮು ಬಿರಾದಾರ ಮಾತನಾಡಿದರು.