- ಸಿಎಂ ಹತಾಶರಾಗಿ ಅಂತಿಮವಾಗಿ ಜಾತಿ ಅಸ್ತ್ರ ಬಳಸುತ್ತಿದ್ದಾರೆ: ಬಿ.ಪಿ.ಹರೀಶ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಮುಡಾ ಹಗರಣದಲ್ಲಿ ಭಾಗಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಹತಾಶರಾಗಿ ಜಾತಿ ಅಸ್ತ್ರವನ್ನು ಅಂತಿಮವಾಗಿ ಬಳಸುತ್ತಿದ್ದಾರೆ ಎಂದು ಹರಿಹರ ಕ್ಷೇತ್ರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಆರೋಪಿಸಿದರು.
ತಾವು ಹಿಂದುಳಿದ ವರ್ಗಕ್ಕೆ ಸೇರಿದವರು, 2ನೇ ಸಲ ಮುಖ್ಯಮಂತ್ರಿ ಆಗಿದ್ದಕ್ಕೆ ಬಿಜೆಪಿಗೆ ಹೊಟ್ಟೆಯುರಿ ಅಂತೆಲ್ಲಾ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಈ ಮಾತುಗಳೇ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಮೇಲ್ನೋಟಕ್ಕೆ ಸಾಬೀತುಪಡಿಸುತ್ತಿದೆ ಎಂದು ಅವರು ಟೀಕಿಸಿದರು.
ಜಾತಿ ಅಸ್ತ್ರ ಬಳಸಿರುವ ಸಿದ್ದರಾಮಯ್ಯ ಅವರು ಆತಂಕದಲ್ಲಿದ್ದಾರೆ ಎಂಬುದನ್ನು ತೋರಿಸುತ್ತದೆ. ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಜಾತೀಯತೆಯ ವಿಚಾರ ಬಿತ್ತಿರುವುದು ನಿಜಕ್ಕೂ ಖಂಡನೀಯ. ಮುಡಾ ಸೈಟ್ ಹಗರಣ ಹಾಗೂ ಶ್ರೀ ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಇಲ್ಲವಾದರೆ ರಾಜ್ಯವ್ಯಾಪಿ ಬಿಜೆಪಿ ತೀವ್ರ ಸ್ವರೂಪದ ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಸಿದರು.ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಸೇರಿದ 3.16 ಎಕರೆ ಜಮೀನನ್ನು ಮುಡಾ ಸ್ವಾಧೀನಪಡಿಸಿಕೊಂಡಿದ್ದು 1992ರಲ್ಲಿ. ಪಾರ್ವತಿಯವರ ಸಹೋದರ ಜಮೀನು ತೆಗೆದುಕೊಂಡಿದ್ದು 2004ರಲ್ಲಿ. ಆಗಲೇ ಮುಡಾದಿಂದ ಸ್ವಾಧೀನಪಡಿಸಿಕೊಂಡ ಜಮೀನನ್ನು ಪಾರ್ವತಮ್ಮನವರ ಹೆಸರಿಗೆ ಸಿದ್ದರಾಮಯ್ಯನವರ ಬಾಮೈದನ ಖರೀದಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಬಡವರಿಗೆ ಸಿಗಬೇಕಾದ ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಸಿದುಕೊಂಡಿದ್ದಾರೆ. ತಕ್ಷಣವೇ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಿಎಂ ವಿರುದ್ಧ ಪ್ರತಿಭಟಿಸಲು ಮುಂದಾದ ನಮ್ಮ ನಾಯಕರನ್ನು ಬಂಧಿಸಿದ್ದಾರೆ. ವಾಲ್ಮೀಕಿ ನಿಗಮದ ಹಣ ವೈಯಕ್ತಿಕ ಖಾತೆಗೆ ಹೋಗುತ್ತದೆಂದರೆ ಸಿಎಂ ಆರ್ಥಿಕ ಇಲಾಖೆ ಜವಾಬ್ಧಾರಿ ಹೊಂದಿದ್ದಾರೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಸೈಟ್ ಹಗರಣದ ಆರೋಪಕ್ಕೆ ಸಿದ್ದರಾಮಯ್ಯ ಜಾತಿ ಅಸ್ತ್ರ ಬಳಸಿದ್ದು, ಇದು ಸಿದ್ದರಾಮಯ್ಯ ಶಕ್ತಿ ಕುಂದಿದೆ ಎಂಬುದನ್ನು ತೋರಿಸುತ್ತದೆ ಎಂದು ಬಿ.ಪಿ. ಹರೀಶ್ ಟೀಕಿಸಿದರು.
- - -ಬಾಕ್ಸ್ ವಾಲ್ಮೀಕಿ ನಿಗಮದ ಹಗರದಣ ಹಿನ್ನೆಲೆಯಲ್ಲಿ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾಗೇಂದ್ರ, ಮೊಗ್ದಲ್ ಅವರನ್ನು ಯಾಕೆ ಇನ್ನೂ ಬಂಧಿಸಿಲ್ಲ? ಹಿಂದಿನ ಸರ್ಕಾರದ ಅವಧಿಯ ಭೋವಿ ನಿಗಮದ ತನಿಖೆಗೆ 2 ದಿನಗಳಿಂದ ರಾಜ್ಯ ಸರ್ಕಾರ ಮುಂದಾಗಿದೆ. ದಾವಣಗೆರೆ ಜೆ.ಎಚ್.ಪಟೇಲ್ ಬಡಾವಣೆಯ 2009ರಲ್ಲಿ ಆದ ಅಕ್ರಮದ ಬಗ್ಗೆಯೂ ತನಿಖೆ ಮಾಡಿಸಲಿ
- ಬಿ.ಪಿ.ಹರೀಶ, ಶಾಸಕ- - - -(ಪೋಟೋ ಬರಲಿವೆ):