ಕನ್ನಡಕ್ಕೆ ಮೊದಲ ಬೂಕರ್ ಪ್ರಶಸ್ತಿ ತಂದುಕೊಟ್ಟ ಹಾಸನದ ಲೇಖಕಿ ಬಾನು ಮುಷ್ತಾಕ್

KannadaprabhaNewsNetwork |  
Published : May 22, 2025, 01:24 AM ISTUpdated : May 22, 2025, 10:54 AM IST
21ಎಚ್ಎಸ್ಎನ್14 : ಪ್ರಶಸ್ತಿಯನ್ನು ಲೇಖಕಿ ಬಾನು ಮುಷ್ತಾಕ್ ಮತ್ತು ಭಾಷಾಂತರಕಾರ್ತಿ ದೀಪಾ ಭಾಸ್ಠಿ ಸಮಾನವಾಗಿ ಹಂಚಿಕೊಂಡಿದ್ದಾರೆ. | Kannada Prabha

ಸಾರಾಂಶ

ಹಾಸನ ನಗರದ ನಿವಾಸಿ ಹಾಗೂ ಹಿರಿಯ ವಕೀಲೆ, ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರ ಅನುವಾದಿತ ಕೃತಿ ‘ಹಾರ್ಟ್ ಲ್ಯಾಂಪ್’ ಗೆ 2025 ರ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. 

  ಹಾಸನ : ಹೆಸರಾಂತ ಲೇಖಕಿ ಬಾನು ಮುಷ್ತಾಕ್ ಅವರ 2025 ನೇ ಸಾಲಿನ ಅನುವಾದಿತ ಕೃತಿ ‘ಹಾರ್ಟ್ ಲ್ಯಾಂಪ್’ ಬೂಕರ್ ಪ್ರಶಸ್ತಿ ಪಡೆದುಕೊಂಡಿದ್ದು, ನಗರದ ಪೆನ್ಷನ್ ಮೊಹಲ್ಲಾದಲ್ಲಿರುವ ತಮ್ಮ ನಿವಾಸದಲ್ಲಿ ಸಂತೋಷ ಹಂಚಿಕೊಂಡರು.

ಹಾಸನ ನಗರದ ನಿವಾಸಿ ಹಾಗೂ ಹಿರಿಯ ವಕೀಲೆ, ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರ ಅನುವಾದಿತ ಕೃತಿ ‘ಹಾರ್ಟ್ ಲ್ಯಾಂಪ್’ ಗೆ ೨೦೨೫ರ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಲಂಡನ್‌ನ ಟೇಟ್ ಮಾಡರ್ನ್‌ನಲ್ಲಿ ನಡೆದ ಸಮಾರಂಭದಲ್ಲಿ ಹಾರ್ಟ್ ಲ್ಯಾಂಪ್ ಅಂತಿಮ ಸುತ್ತಿನಲ್ಲಿ ವಿಜೇತ ಕೃತಿಯಾಗಿ ಘೋಷಣೆ

ಮಾಡಲಾಯಿತು. ಕನ್ನಡದಿಂದ ಇಂಗ್ಲಿಷ್‌ಗೆ ದೀಪಾ ಭಾಸ್ಠಿ ಅವರು ಭಾಷಾಂತರಿಸಿದ ಈ ಕೃತಿಯು ಜಾಗತಿಕ ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡದ ಶಕ್ತಿಯನ್ನು ಮತ್ತೊಮ್ಮೆ ದೃಢಪಡಿಸಿದೆ. ಸುಮಾರು ೫೨ ಲಕ್ಷ ರು. ಮೊತ್ತದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಲೇಖಕಿ ಬಾನು ಮುಷ್ತಾಕ್ ಮತ್ತು ಅನುವಾದಕಿ ದೀಪಾ ಭಾಸ್ಠಿ ಸಮಾನವಾಗಿ ಹಂಚಿಕೊಂಡಿದ್ದಾರೆ.

ಏಪ್ರಿಲ್ 8 , 2025 ರಂದು ಘೋಷಿತವಾದ ಆರು ಕೃತಿಗಳ ಶಾರ್ಟ್‌ಲಿಸ್ಟ್‌ನಲ್ಲಿ ಸೊಲ್ವೆಜ್ ಬಾಲೆ, ವಿನ್ಸೆಂಟ್ ಡೆಲೆಕ್ರೊಯಿಕ್ಸ್, ಹಿರೋಮಿ ಕವಕಾಮಿ, ವಿನ್ಸೆಂಜೊ ಲಾಟ್ರೊನಿಕೊ ಮತ್ತು ಅನ್ನೆ ಸೆರ್ರೆ ಅವರ ಕಾದಂಬರಿಗಳು ಸ್ಥಾನ ಪಡೆದಿದ್ದವು. ‘ಹಾರ್ಟ್ ಲ್ಯಾಂಪ್’ ಈ ಎಲ್ಲಾ ಕೃತಿಗಳನ್ನು ಮೀರಿ ಈ ಸಾಲಿನ ಅತ್ಯುನ್ನತ ಸಾಹಿತ್ಯ ಗೌರವಕ್ಕೆ ಭಾಜನವಾಯಿತು.

ತೀರ್ಪುಗಾರರ ಸಮಿತಿಯನ್ನು ಮ್ಯಾಕ್ಸ್ ಪೋರ್ಟರ್ ನೇತೃತ್ವ ವಹಿಸಿದ್ದರು, ಜೊತೆಗೆ ಕ್ಯಾಲೆಬ್ ಫೆಮಿ, ಸನಾ ಗೋಯಲ್, ಆಂಟನ್ ಹರ್‌ ಮತ್ತು ಬೆಥ್ ಒರ್ಟನ್ ಸದಸ್ಯರಾಗಿದ್ದರು. ಬಾನು ಮುಷ್ತಾಕ್‌ರ ಕಾದಂಬರಿಯು ಮಾನವೀಯ ಸಂವೇದನೆಗಳನ್ನು ಆಳವಾಗಿ ಚಿತ್ರಿಸುವ ಸಾಹಿತ್ಯ ಕೃತಿಯಾಗಿದೆ.

ಜೊತೆಗೆ ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ ಹಾಗೂ ವಕೀಲರು ಆಗಿರುವ ಬಾನು ಮುಸ್ತಾಕ್ ಅವರ ಈ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಕನ್ನಡ ಶಾಲೆಯಲ್ಲೇ ಓದಿ ವಕೀಲಿ ವೃತ್ತಿ ಆಯ್ದುಕೊಂಡ ಬಾನು ಮುಷ್ತಾಕ್ ಅವರು, ಮುಸ್ಲಿಂ ಮಹಿಳೆಯರ ಪರವಾಗಿ ಧ್ವನಿ ಎತ್ತಿದರು. ಸಾಕಷ್ಟು ಮುಸ್ಲಿಂ ಮಹಿಳೆಯ ಕೇಸ್‌ಗಳನ್ನು ವಾದಿಸಿ, ಓರ್ವ ಮುಸ್ಲಿಂ ಯುವತಿ ಸಿನಿಮಾ ನೋಡಿದ್ದಕ್ಕೆ ಆಕೆಯ ವಿರುದ್ಧ ಫತ್ವಾ ಹೊರಡಿಸಲಾಗಿತ್ತು. ಇದನ್ನು ಖಂಡಿಸುವುದು ಮಾತ್ರವಲ್ಲದೇ ಲಂಕೇಶ್ ಪತ್ರಿಕೆಗೆ ಬರೆಯುವ ಮೂಲಕ ಮಾಧ್ಯಮ ಲೋಕಕ್ಕೂ ಪದಾರ್ಪಣೆ ಮಾಡಿದರು.

PREV
Read more Articles on