ನಾರಾಯಣ ಹೆಗಡೆ
ಇಲ್ಲಿಯ ಜಂಗಮನಕೊಪ್ಪದಲ್ಲಿ ಎರಡು ವರ್ಷಗಳ ಹಿಂದೆ ಪಿಪಿಪಿ (ಪಬ್ಲಿಕ್ ಪ್ರೈವೇಟ್ ಪಾರ್ಟನರ್ಶಿಪ್) ಮಾದರಿಯಲ್ಲಿ ಸ್ಥಾಪನೆಯಾದ ಯುಎಚ್ಟಿ ಘಟಕದಲ್ಲಿ ನಂದಿನಿ ಹಾಲಿನ ಗುಡ್ ಲೈಫ್ ಟೆಟ್ರಾ ಪ್ಯಾಕೆಟ್ ಘಟಕ ಆರಂಭವಾಗಿದೆ. ಖಾಸಗಿ ಸಂಸ್ಥೆಯು ಈ ಘಟಕವನ್ನು ನಿರ್ವಹಿಸುತ್ತಿದ್ದು, ಈಗ ಅಲ್ಲಿ ತಯಾರಾದ ನಂದಿನಿ ಹಾಲಿನ ಟೆಟ್ರಾ ಪ್ಯಾಕೆಟ್ ತಿರಸ್ಕೃತಗೊಂಡಿರುವ ಮಾಹಿತಿ ಬಹಿರಂಗವಾಗಿದೆ. ಪ್ರಯಾಗ್ರಾಜ್ ಕುಂಭಮೇಳದ ಸಂದರ್ಭದಲ್ಲಿ 12 ಸಾವಿರ ಲೀಟರ್ ಗುಡ್ ಲೈಫ್ ಹಾಲು ಪೂರೈಸುವಂತೆ ಬೇಡಿಕೆ ಬಂದಿತ್ತು. ಅದರಂತೆ 4 ಸಾವಿರ ಲೀಟರ್ ಹಾಲು ಪೂರೈಸಲಾಗಿತ್ತು.
ಆದರೆ, ಗುಣಮಟ್ಟದ ಕೊರತೆ ಕಾರಣಕ್ಕೆ ಕಳುಹಿಸಿದ್ದ 4 ಸಾವಿರ ಲೀ. ಸೇರಿದಂತೆ ಬೇಡಿಕೆ ಸಲ್ಲಿಸಿದ್ದ 12 ಸಾವಿರ ಲೀಟರ್ ಹಾಲು ತಿರಸ್ಕೃತಗೊಂಡಿತ್ತು. ಈ ಹಿಂದೆ ಇದೇ ಘಟಕದಿಂದ ಗೋವಾಕ್ಕೆ ಪೂರೈಸಿದ್ದ ಹಾಲು ಕೂಡ ತಿರಸ್ಕೃತಗೊಂಡಿದ್ದವು ಎಂದು ಹಾವೆಮುಲ್ ಆಡಳಿತ ಮಂಡಳಿಯವರೇ ಹೇಳುತ್ತಿದ್ದಾರೆ. ಖಾಸಗಿ ಕಂಪನಿಯ ಘಟಕದಲ್ಲಿನ ತಾಂತ್ರಿಕ ಸಮಸ್ಯೆಯಿಂದ ನಂದಿನಿ ಬ್ರ್ಯಾಂಡ್ಗೆ ಕಳಂಕ ಬರುವಂತಾಗಿದೆ.ಘಟಕದಲ್ಲಿನ ಯಂತ್ರಗಳಲ್ಲಿ ತಾಂತ್ರಿಕ ಸಮಸ್ಯೆಯಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಕಳೆದ 15 ದಿನಗಳಿಂದ ಹಾವೆಮುಲ್ನಿಂದ ಯುಎಚ್ಟಿ ಘಟಕಕ್ಕೆ ಹಾಲು ಪೂರೈಕೆ ಬಂದ್ ಆಗಿದೆ. ನಿತ್ಯ ಹಾವೆಮುಲ್ನಿಂದ ಯುಎಚ್ಟಿ ಘಟಕಕ್ಕೆ 30 ಸಾವಿರ ಲೀಟರ್ ಹಾಲು ಪೂರೈಕೆಯಾಗುತ್ತಿತ್ತು.
ಇದರಲ್ಲಿ ಕೆಲ ಶೀತಲೀಕರಣ ಘಟಕಗಳಲ್ಲಿ ಹಾಲಿಗೆ ರಾತ್ರೋರಾತ್ರಿ ನೀರು, ಸಕ್ಕರೆ, ಯುರಿಯಾ ಕಲಬೆರಕೆ ಮಾಡಿ ಒಕ್ಕೂಟಕ್ಕೆ ಕಳುಹಿಸುತ್ತಿದ್ದಾರೆ ಎಂಬ ಆರೋಪವಿದೆ. ಇತ್ತೀಚೆಗೆ ಅಧಿಕಾರಕ್ಕೆ ಬಂದಿರುವ ಹೊಸ ಆಡಳಿತ ಮಂಡಳಿ ಇಂತಹ ಕಲಬೆರಕೆ ಘಟಕಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಮುಂದಾಗಿದೆ.
ಕಲಬೆರಕೆ ವಿರುದ್ಧ ಕಠಿಣ ಕ್ರಮ: ಯುಎಚ್ಟಿ ಘಟಕದಿಂದ ಪ್ರಯಾಗ್ರಾಜ್ಗೆ ಕಳುಹಿಸಿದ್ದ 12 ಸಾವಿರ ಲೀಟರ್ ನಂದಿನಿ ಹಾಲು ರಿಜೆಕ್ಟ್ ಆಗಿದೆ. ಗೋವಾದಿಂದಲೂ ಈ ಹಿಂದೆ ತಿರಸ್ಕೃತಗೊಂಡಿತ್ತು. ಘಟಕದಲ್ಲಿನ ಸಮಸ್ಯೆಯಿಂದ ಕಳೆದ 15 ದಿನಗಳಿಂದ ಹಾಲು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಇತ್ತೀಚೆಗೆ ಕೆಎಂಎಫ್ಗೆ ತೆರಳಿ ಹಿರಿಯ ಅಧಿಕಾರಿಗಳನ್ನು ಭೇಟಿ ನೀಡಿದ್ದ ವೇಳೆ, ಹಾವೇರಿ ಹಾಲಿಗೆ ಕೆಟ್ಟ ಹೆಸರು ಬಂದಿದೆ. ಗುಣಮಟ್ಟ ಸುಧಾರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಕಲಬೆರಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ ತಿಳಿಸಿದರು.