ಚನ್ನಪಟ್ಟಣ: ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾದ ಕುಮಾರಸ್ವಾಮಿ ಒಮ್ಮೆ ಇಲ್ಲಿಂದ ಮುಖ್ಯಮಂತ್ರಿ ಸಹ ಆದರು. ಆದರೆ, ಗೆದ್ದ ನಂತರ ಅವರು ಕ್ಷೇತ್ರದ ಅಭಿವೃದ್ಧಿ ಕುರಿತು ಚಿಂತಿಸಲಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಆರೋಪಿಸಿದರು.
ಕುಮಾರಸ್ವಾಮಿ ಶಾಸಕರಾದ ನಂತರ ತಾಲೂಕು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಕಳೆದ ಆರು ವರ್ಷಗಳಿಂದ ಅವರು ಯಾವ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ನಗರ ಪ್ರದೇಶದ ರಸ್ತೆಗಳು ಗುಂಡಿಮಯವಾಗಿದ್ದು, ಅದನ್ನು ಸರಿಪಡಿಸಲು ಏಕೆ ಹೋಗಲಿಲ್ಲ ಎಂದು ಪ್ರಶ್ನಿಸಿದರು.
ನನ್ನ ಅವಧಿಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದೆ. ಆದರೆ, ಕುಮಾರಸ್ವಾಮಿ ಕ್ಷೇತ್ರಕ್ಕೆ ಏನೋ ಮಾಡಿಬಿಡುತ್ತಾರೆ ಎಂದು ನನ್ನನ್ನು ಎರಡು ಬಾರಿ ಸೋಲಿಸಿ ಅವರನ್ನು ಗೆಲ್ಲಿಸಿದರಿ, ಗೆದ್ದ ನಂತರ ಅವರು ನಿಮಗೇನು ಮಾಡಿದರು ಎಂದು ಪ್ರಶ್ನಿಸಿದರು.ಇಲ್ಲಿಂದ ಶಾಸಕರಾಗಿ, ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರು ಇದೀಗ ನಿಮ್ಮನ್ನು ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ಇಲ್ಲಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸದೇ ಇದೀಗ ತಮ್ಮ ಮಗನನ್ನು ತಂದು ನಿಲ್ಲಿಸಿ ಗೆಲ್ಲಿಸುವಂತೆ ಮತ ಕೇಳುತ್ತಿದ್ದಾರೆ. ಎಷ್ಟೆಲ್ಲ ಅಭಿವೃದ್ಧಿ ಕೆಲಸ ಮಾಡಿದರು, ಎರಡು ಬಾರಿ ನನ್ನನ್ನು ಸೋಲಿಸಿದ್ದೀರಾ. ಈ ಬಾರಿಯಾದರೂ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಬಾಕ್ಸ್ ...................
ಜೆಡಿಎಸ್ ನಗರಾಧ್ಯಕ್ಷ ಅಜಯ್ ಹಾಗೂ ಅವರ ಸೋದರ ಮಾನಸಿಕವಾಗಿ ನನ್ನ ಪರವಾಗಿದ್ದಾರೆ. ಅವರು ಕುಮಾರಸ್ವಾಮಿ ಅವರ ಸಂಬಂಧಿಯಾಗಿದ್ದರೂ ನನ್ನ ಪರವಾಗೇ ಇದ್ದಾರೆ. ಟಿಕೆಟ್ ವಿಚಾರದಲ್ಲಿ ಅವರು ನನ್ನ ಪರ ಸಾಕಷ್ಟು ಬಡಿದಾಡಿದ್ದರು. ತಾಂತ್ರಿಕವಾಗಿ ಅವರು ಜೆಡಿಎಸ್ನಲ್ಲಿದ್ದರೂ ಮನಸ್ಸು ನನ್ನ ಪರವಾಗಿದೆ. ನಾನು ಕೆಲಸ ಮಾಡಿದ್ದೇನೆ ಎಂಬ ಕಾರಣಕ್ಕೆ ಜೆಡಿಎಸ್ನವರು ನನ್ನ ಬೆಂಬಲಕ್ಕೆ ಇದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಅಚ್ಚರಿ ಹೇಳಿಕೆ ನೀಡಿದರು.