ಹೆಲ್ತ್‌ ಕೇರ್‌: ಮತ್ತೊಂದು ಅವ್ಯವಹಾರ ಬಹಿರಂಗ

KannadaprabhaNewsNetwork |  
Published : Mar 26, 2025, 01:32 AM IST
ಸಭೆ | Kannada Prabha

ಸಾರಾಂಶ

ಕೇಂದ್ರದ ಮಹತ್ವಾಕಾಂಕ್ಷಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಅಳವಡಿಸಿದ್ದ ₹3.26 ಕೋಟಿ ವೆಚ್ಚದ ಸ್ಮಾರ್ಟ್ ಹೆಲ್ತ್‌ಕೇರ್ ಅನುಷ್ಠಾನದಲ್ಲಿ ಆಗಿರುವ ಲೋಪ ಕುರಿತು ತನಿಖೆ ನಡೆಸುತ್ತಿರುವ ಪಾಲಿಕೆ ಸದನ ಸಮಿತಿ ಮತ್ತೊಂದು ಅವ್ಯವಹಾರವನ್ನು ಪತ್ತೆ ಮಾಡಿದೆ.

ಹುಬ್ಬಳ್ಳಿ: ಕೇಂದ್ರದ ಮಹತ್ವಾಕಾಂಕ್ಷಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಅಳವಡಿಸಿದ್ದ ₹3.26 ಕೋಟಿ ವೆಚ್ಚದ ಸ್ಮಾರ್ಟ್ ಹೆಲ್ತ್‌ಕೇರ್ ಅನುಷ್ಠಾನದಲ್ಲಿ ಆಗಿರುವ ಲೋಪ ಕುರಿತು ತನಿಖೆ ನಡೆಸುತ್ತಿರುವ ಪಾಲಿಕೆ ಸದನ ಸಮಿತಿ ಮತ್ತೊಂದು ಅವ್ಯವಹಾರವನ್ನು ಪತ್ತೆ ಮಾಡಿದೆ.

ಗುತ್ತಿಗೆ ಕರಾರು ಪ್ರಕಾರ, ಹೆಲ್ತ್ ಕೇರ್ ಯೋಜನೆ ಅನುಷ್ಠಾನ, ನಿರ್ವಹಣೆ ಹೊಣೆಯನ್ನು ಗುತ್ತಿಗೆ ಸಂಸ್ಥೆ ವಹಿಸಿಕೊಂಡಿರುತ್ತದೆ. ಆದರೆ, ಗುತ್ತಿಗೆ ಸಂಸ್ಥೆಯು ಪಾಲಿಕೆಯಿಂದ ವೇತನ ಪಡೆಯುವ ಹೊರಗುತ್ತಿಗೆಯ ಕಂಪ್ಯೂಟರ್ ಆಪರೇಟರ್‌ಗಳನ್ನು ಬಳಸಿಕೊಂಡಿರುವುದನ್ನು ಸದನ ಸಮಿತಿ ಮಂಗಳವಾರ ನಡೆಸಿದ ವಿಚಾರಣೆ ವೇಳೆ ಕಂಡುಹಿಡಿದಿದೆ ಎಂದು ಮೂಲಗಳು ತಿಳಿಸಿವೆ.

ಪಾಲಿಕೆಯ ಸಿಬ್ಬಂದಿಯನ್ನೇ ಬಳಸಿಕೊಂಡಿದ್ದು ಗೊತ್ತಿದ್ದೂ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಶಿಫಾರಸು ಮಾಡಿದ ಚಿಟಗುಪ್ಪಿ ಆಸ್ಪತ್ರೆಯ ವೈದ್ಯರನ್ನು ಸಮಿತಿ ತರಾಟೆಗೆ ತೆಗೆದುಕೊಂಡಿತು. ಅನುಷ್ಠಾನದಿಂದ ಹಸ್ತಾಂತರ ವರೆಗೂ ಆಪರೇಟರ್‌ಗಳ ವೇತನ ಮೊತ್ತವನ್ನು ಗುತ್ತಿಗೆದಾರರಿಂದ ಮರುಪಾವತಿಸಿಕೊಳ್ಳಬೇಕೆಂದು ಸದಸ್ಯರು ಸೂಚಿಸಿದರೆನ್ನಲಾಗಿದೆ.

ಮತ್ತೆ ಯಾಮಾರಿಸಿದ ಅಧಿಕಾರಿಗಳು?

ನಾನಾ ನೆಪಗಳ ಮಧ್ಯೆ ಹಲವು ತಿಂಗಳ ಬಳಿಕ ಕಳೆದ ತಿಂಗಳು ನಡೆದ ಸದನ ಸಮಿತಿ ಮೊದಲ ಸಭೆಯಲ್ಲಿ ಸದಸ್ಯರು, ಗುತ್ತಿಗೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಸ್ಮಾರ್ಟ್ ಕೇರ್‌ನಲ್ಲಿ ಸಂಗ್ರಹವಾದ ದತ್ತಾಂಶಗಳು, ಬಾರ್ ಕೋಡ್ ಸಕ್ರಿಯತೆ, ವೆಂಡಿಂಗ್ ಮಷಿನ್ ಕ್ರಿಯಾಶೀಲತೆ ಸೇರಿದಂತೆ ಹಲವು ಮಾಹಿತಿ ಹಾಗೂ ದಾಖಲೆ ನೀಡುವಂತೆ ನಿರ್ದೇಶನ ನೀಡಿದ್ದರು.

ಇದಾದ ಬಳಿಕ ಮತ್ತೆ ಒಂದು ತಿಂಗಳ ನಂತರ ಎರಡನೇ ಬಾರಿ ಸೇರಿದ ಸಮಿತಿ ವಿಚಾರಣೆ ಸಭೆಗೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಯಾವೊಂದು ದಾಖಲೆಗಳನ್ನು ತಂದಿರಲೇ ಇಲ್ಲ. ಇದರಿಂದ ಆಕ್ರೋಶಗೊಂಡ ಸಮಿತಿ ಅಧ್ಯಕ್ಷ ವೀರಣ್ಣ ಸವಡಿ, ಸದಸ್ಯರಾದ ಈರೇಶ ಅಂಚಟಗೇರಿ, ಶಿವು ಹಿರೇಮಠ ಒಂದು ವಾರದೊಳಗೆ ಪಾಲಿಕೆ ಅಧೀಕ್ಷಕ ಎಂಜಿನಿಯರ್‌ಗೆ ಸಲ್ಲಿಸುವಂತೆ ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಗುತ್ತಿಗೆ ಪಡೆದ ಸಂಸ್ಥೆಯು ಹೊಂದಿದ ತಾಂತ್ರಿಕ ಪರಿಣಿತರ ಪಟ್ಟಿ, ಅವರು ತರಬೇತಿ ಪಡೆದ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು. ಹೊಣೆಗಾರಿಕೆ ವಹಿಸಿಕೊಳ್ಳುತ್ತಿಲ್ಲ

ವೆಂಡಿಂಗ್ ಮಷಿನ್ ಕಾರ್ಯನಿರ್ವಹಣೆ, ಬಾರ್‌ಕೋಡ್ ನಿಷ್ಕ್ರಿಯತೆ ಹಾಗೂ ಹೊರಗುತ್ತಿಗೆ ಸಿಬ್ಬಂದಿ ಬಳಸಿಕೊಂಡು ಕೆಲಸ ನಿರ್ವಹಿಸಿದ ಬಗ್ಗೆ ವಿಸ್ತೃತ ಮಾಹಿತಿ ನೀಡುವಂತೆ ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಐದು ವರ್ಷಗಳಿಂದ ಹಲವು ಎಂಡಿಗಳು ಬದಲಾಗಿದ್ದಾರೆ. ಇದರಿಂದ ಯಾರೂ ಹೊಣೆಗಾರಿಕೆ ವಹಿಸಿಕೊಳ್ಳುತ್ತಿಲ್ಲ. ಇದು ತೊಂದರೆಯಾಗಿದೆ.

- ವೀರಣ್ಣ ಸವಡಿ, ಸದನ ಸಮಿತಿ ಅಧ್ಯಕ್ಷರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!