ಗಾಳಿ ಮಳೆಗೆ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ತಾಲೂಕಿನ ವಿವಿಧೆಡೆ ಅಪಾರ ಹಾನಿಯಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಿಂದ ಹರಿದು ಬರುವ ನದಿಗಳಲ್ಲಿ ನೀರಿನ ಮಟ್ಟ ಭಾರಿ ಏರಿಕೆಯಾಗಿದ್ದು ಅಪಾಯಮಟ್ಟದಲ್ಲಿ ಹರಿಯುತ್ತಿವೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ಧಾರಕಾರವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ತಾಲೂಕಿನ ವಿವಿಧೆಡೆ ಅಪಾರ ಹಾನಿಯಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಿಂದ ಹರಿದು ಬರುವ ನದಿಗಳಲ್ಲಿ ನೀರಿನ ಮಟ್ಟ ಭಾರಿ ಏರಿಕೆಯಾಗಿದ್ದು ಅಪಾಯಮಟ್ಟದಲ್ಲಿ ಹರಿಯುತ್ತಿವೆ.ಗಾಳಿ ಮಳೆಗೆ ಮರ್ಣೆ ಗ್ರಾಮದ ನಂದಾರು ಸುಕುಡಿಬೆಟ್ಟು ನಿವಾಸಿ ರಾಘು ಮೂಲ್ಯ ಅವರ ಮನೆಯಲ್ಲಿರುವ ದನದ ಕೊಟ್ಟಿಗೆ ಸಂಪೂರ್ಣ ಹಾನಿಯಾಗಿದ್ದು, ಅಂದಾಜು 30,000 ರು. ನಷ್ಟ ಉಂಟಾಗಿದೆ. ಕಾರ್ಕಳ ಉಚ್ಚಂಗಿ ನಗರದ ಸವಿತಾ ಅವರ ವಾಸದ ಮನೆಗೆ ಅಡಕೆ ಮರ ಬಿದ್ದು 25000 ರು. ನಷ್ಟ, ಮುಂಡೂರು ಗ್ರಾಮದ ಕಲ್ಲಿಮಾರು ಎಂಬಲ್ಲಿ ಶೋಭಾ ಅವರ ಮನೆಗೆ ಗೋಡೆ ಕುಸಿದು 50000 ರು. ನಷ್ಟ, ಹಿರ್ಗಾನ ಗ್ರಾಮದ ಕಿನ್ಯಾನಬೆಟ್ಟು ಎಂಬಲ್ಲಿ ವಿಜಯ ಶೆಟ್ಟಿಗಾರ್ ಅವರ ವಾಸ್ತವ್ಯದ ಮನೆಯ ಮೇಲೆ ಮರ ಬಿದ್ದು ಮೇಲ್ಛಾವಣಿ ಹಾನಿಯಾಗಿ 30000 ರು. ನಷ್ಟ, ಬಂಗ್ಲೆಗುಡ್ಡೆಯ ಐಸಾಬಿ ಅವರ ವಾಸದ ಮನೆಗೆ ಮರ ಬಿದ್ದು 40000 ರು. ನಷ್ಟ, ಕೆರ್ವಾಶೆಯ ಮೈಯದಿ ಅವರ ಮನೆಯ ಬಾವಿ ಕುಸಿದಿದೆ, ನಿಟ್ಟೆ ಗ್ರಾಮದ ಸರಸು ಪೂಜಾರ್ತಿ ವಾಸದ ಮನೆಗೆ ಮರ ಬಿದ್ದು ಮನೆ ಭಾಗಶಃ ಹಾನಿಗೊಳಗಾಗಿ 50000 ರು. ನಷ್ಟ ಸಂಭವಿಸಿದರೆ ಶಿರ್ಲಾಲು ಗ್ರಾಮದ ಸಂಜೀವ ಪ್ರಭು ಅವರ ಅಡಕೆ ತೋಟದಲ್ಲಿ ಗಾಳಿಯಿಂದ ಸುಮಾರು 100 ಅಡಕೆ ಮರಗಳು ಧರಶಾಹಿಯಾಗಿದ್ದು 50,000 ರೂ. ನಷ್ಟವಾಗಿದೆ.
ಕೆರ್ವಾಶೆಯ ಬಾಟ್ಯರು ಮನೆ ಗೋವಿಂದರಾಯ ನಾಯಕ್ ಜಮೀನಿನಲ್ಲಿ ತೆಂಗಿನ ಮರ ತುಂಡಾಗಿ ವಿದ್ಯುತ್ ಕಂಬ ಹಾನಿಯಾಗಿದೆ ಅಲ್ಲದೆ ಸುಮಾರು 20 ಅಡಕೆ ಮರ ಮುರಿದು ಬಿದ್ದಿದೆ. ಮುಂಡೂರು ಗ್ರಾಮದ ರವಿ ಶೆಟ್ಟಿ ಅವರ ದನದ ಕೊಟ್ಟಿಗೆ ಮಳೆಗಾಳಿಯಿಂದಾಗಿ ಹಾನಿಯಾಗಿದ್ದು, ಅಂದಾಜು 20000 ರು. ನಷ್ಟ ನಷ್ಟ ಸಂಭವಿಸಿದೆ. ಕೆದಿಂಜೆ ಗ್ರಾಮದ ಬರ್ಕೆಗುಡ್ಡೆಯ ಸುಶೀಲಾ ಮೂಲ್ಯ ಅವರ ಹಳೆಯ ಮನೆಯ ಮಣ್ಣಿನ ಗೋಡೆ ಕುಸಿದು 20 ಸಾವಿರದಷ್ಟು ನಷ್ಟ ಉಂಟಾಗಿದೆ.ಮಳೆ ಪ್ರಮಾಣಕಾರ್ಕಳ 84.4 ಮಿ.ಮೀ., ಇರ್ವತ್ತೂರು 103.6 ಮಿ.ಮೀ., ಅಜೆಕಾರು 91.2 ಮಿ.ಮೀ., ಸಾಣೂರು 180.8 ಮಿ.ಮೀ., ಕೆದಿಂಜೆ 77.4 ಮಿ.ಮೀ., ಮುಳಿಕಾರು 110.0 ಮಿ.ಮೀ. ಹಾಗೂ ಕೆರ್ವಾಶೆಯಲ್ಲಿ 105.8 ಮಿ. ಮೀ. ಮಳೆ ದಾಖಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.