ಯಾದಗಿರಿ ತಾಲೂಕಿನ ಉಮ್ಲಾ ನಾಯಕ ತಾಂಡಾದಲ್ಲಿ ಬುಧವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ಮನೆಗಳ ಟಿನ್ ಶೆಡ್ ಹಾರಿಹೋಗಿರುವುದು..
ಕನ್ನಡಪ್ರಭ ವಾರ್ತೆ ಯಾದಗಿರಿ
ಯಾದಗಿರಿ ನಗರ ಸೇರಿದಂತೆ ಬುಧವಾರ ಮಧ್ಯರಾತ್ರಿಯಿಂದ ನಸುಕಿನ ವರೆಗೆ ಭಾರಿ ಮಳೆ ಹಾಗೂ ಗುಡುಗು ಸಿಡಿಲಬ್ಬರ ಜೊತೆ ಗಂಟೆ ಕಾಲ ಮಳೆ ಸುರಿದು ವಾತಾವರಣ ತಂಪಾಗಿದೆ. ಕಳೆದ ಕೆಲವು ದಿನಗಳಿಂದ ಭಾರಿ ತಾಪಮಾನ ಕಂಡಿದ್ದ ಯಾದಗಿರಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಗುರುವಾರ ವಾತಾವರಣ ಕೊಂಚ ತಣ್ಣಗಾಗಿತ್ತು. ಗುರುವಾರ ಸಂಜೆ ಬೀಸಿದ ತಂಗಾಳಿ ಬಿಸಿಲಿಗೆ ಬಸವಳಿದ ಜನರನ್ನು ನಿರುಮ್ಮಳವಾಗಿಸಿತ್ತು. ತಾಲೂಕಿನ ಉಮ್ಲಾ ನಾಯಕ ತಾಂಡಾದಲ್ಲಿ ಗಾಳಿ ಸಹಿತ ಮಳೆಗೆ ಮೂರು ಮನೆಗಳ ಟಿನ್ ಶೆಡ್ಗಳು ಹಾರಿ ಹೋಗಿ ಅಪಾರ ನಷ್ಟವುಂಟಾಗಿದೆ.
ಗ್ರಾಮದ ಸಖಿಬಾಯಿ ಗಂಡ ಖೀರು, ಜೈನಾಬಾಯಿ ಗಂಡ ಶಂಕರ, ಅಂಬ್ಲಿಬಾಯಿ ಗಂಡ ಶಂಕರ ಅವರ ಮನೆಗಳು ನಷ್ಟಕ್ಕೊಳಗಾಗಿವೆ.
ಭೀಕರ ಬರಗಾಲದಿಂದ ಮೊದಲೇ ರೋಸಿ ಹೋಗಿರುವ ಸಂದರ್ಭದಲ್ಲಿ ಈ ಘಟನೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರು ಗುರುವಾರ ಸಮಸ್ಯೆ ಅರಿತು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಬಿರುಗಾಳಿ ಸಹಿತ ಭಾರೀ ಮಳೆಗೆ ಮನೆಗಳ ಟಿನ್ ಶೆಡ್ ಗಳು ಹಾರಿಹೋಗಿ ದವಸ ಧಾನ್ಯಗಳು ನೀರುಪಾಲಾಗಿವೆ. ಮನೆಯ ಅಡುಗೆ ಕೋಣೆ ಹಾಗೂ ಶೌಚಾಲಯದ ಟಿನ್ ಗಳು ಹಾರಿಹೋಗಿವೆ. ಮಳೆ ನೀರು ಮನೆಯೊಳಗೆ ನುಗ್ಗಿ ಸಾಮಗ್ರಿಗಳು ಹಾಗೂ ದವಸ ಧಾನ್ಯಗಳು ನೀರು ಪಾಲಾಗಿವೆ. ಇದೇ ವೇಳೆ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದರಿಂದ ಹೆಚ್ಚಿನ ಅನಾಹುತ ಆಗುವುದು ತಪ್ಪಿದೆ. ನಷ್ಟಕ್ಕೊಳಗಾದವರು ಬಡ ಕೃಷಿ ಕೂಲಿ ಕಾರ್ಮಿಕರಾಗಿದ್ದು, ತಕ್ಷಣ ಮನೆ ದುರಸ್ತಿ ಮಾಡಿಸಿಕೊಳ್ಳಲು ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಉಮೇಶ ಒತ್ತಾಯಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.